ಮಂಗಳೂರು: ಕಂಪೌಂಡ್ ಕುಸಿದ ಪರಿಣಾಮ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಒಂದು ದುರಂತ ಘಟನೆಯಲ್ಲಿ, ಮೂವರು ಕಾರ್ಮಿಕರು ಬೃಹತ್ ಮಣ್ಣು ಮತ್ತು ಕಲ್ಲುಗಳ ರಾಶಿಯಲ್ಲಿ ಸಿಲುಕಿದ್ದರು.
ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದ ಕಟ್ಟಡ ಸಮೀಪದಲ್ಲಿದ್ದ ಕಂಪೌಂಡ್ ಏಕಾಏಕಿ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿಒಬ್ಬರು ಗಂಭೀರ ಗಾಯಗೊಂಡರು. ಮಂಗಳೂರಿನ ಕರಂಗಲಪಾಡಿ ಜಂಕ್ಷನ್ ನಲ್ಲಿ ಈ ದುರ್ಘಟನೆ ನಡೆದಿದೆ.
ಮೃತರನ್ನು ಬಾಗಲಕೋಟೆ ಮೂಲದ ಭೀಮೇಶ್ ಮತ್ತು ಬಂಗಾಳ ನಿವಾಸಿ ಮಸ್ರಿಕುಲ್ ಎಂದು ಗುರುತಿಸಲಾಗಿದ್ದು ಹನಿಕುಲ್ ಎಂಬ ಇನ್ನೋರ್ವ ಕಾರ್ಮಿಕ ಗಾಯಗೊಂಡಿದ್ದು ಅವರನ್ನು ಯೇನಪೋಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.
ಕಂಪೌಂಡ್ ಸಮೀಪವೇ ಕಾರ್ಮಿಕರು ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಮಣ್ಣಿನಡಿ ಇನ್ನಷ್ಟು ಕಾರ್ಮಿಕರು ಸಿಲುಕಿರುವ ಶಂಕೆ ಇದ್ದು ಪಾಂಡೇಶ್ವರ ಹಾಗೂ ಕದ್ರಿ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಪರಿಹಾರಕಾರ್ಯ ಕೈಗೊಂಡಿದ್ದಾರೆ.
Advertisement