ಬೆಂಗಳೂರು: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ನಗರದಲ್ಲಿ ಆರಂಭಿಸಿದ್ದ ಧರಣಿಯನ್ನು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು(ಆಶಾ) ಇಂದು ಸಂಜೆ ಅಂತ್ಯಗೊಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರು ಜ 3 ಮತ್ತು 4ರಂದು ಅಹೋರಾತ್ರಿ ಧರಣಿ ನಡೆಸಲು ರಾಜ್ಯದ ಮೂಲೆ ಮೂಲೆಗಳಿಂದ ನಗರದ ಫ್ರೀಡಂ ಪಾರ್ಕ್ಗೆ ಆಗಮಿಸಿದ್ದರು. ಆದರೆ, ಪ್ರತಿಭಟನೆಗೆ ಒಂದು ದಿನ ಮಾತ್ರ ಅನುಮತಿ ತೆಗೆದುಕೊಂಡಿದ್ದರಿಂದ ಪೊಲೀಸರು ಶನಿವಾರ ಅನುಮತಿ ನಿರಾಕರಿಸಿರುವುದರಿಂದ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಗುತ್ತಿದೆ. ನಾಳೆಯಿಂದ ಕೆಲಸಕ್ಕೆ ಹಾಜರಾಗದೆ ಮನೆಯಲ್ಲಿದ್ದೇ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಒಕ್ಕೂಟದ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಹೇಳಿದ್ದಾರೆ.
ಮಾಸಿಕ ಗೌರವಧನವನ್ನು 12,000 ರೂ.ಗೆ ಹೆಚ್ಚಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರುವ ಪ್ರತಿಭಟನೆ ಆರಂಭಿಸಿದ್ದರು.
ರಾಜ್ಯದ ಎಲ್ಲೆಡೆಯಿಂದ ಆಗಮಿಸಿದ್ದ ಕಾರ್ಯಕರ್ತೆಯರು ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ವಾರೆಗೆ ಮೆರವಣಿಗೆ ನಡೆಸಿದರು.
ಆಶಾ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ಸೋಮವಾರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ತಮ್ಮ ಬೇಡಿಕೆಗಳ ಕುರಿತು ಸರ್ಕಾರದ ಸ್ಪಂದನೆಗೆ ಅತೃಪ್ತರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಒಕ್ಕೂಟದ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಹೇಳಿದ್ದಾರೆ. ಭಾರೀ ಪ್ರತಿಭಟನಾ ಮೆರವಣಿಗೆಯಿಂದ ಮೆಜೆಸ್ಟಿಕ್ ಸುತ್ತಮುತ್ತ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿತ್ತು.
ಈ ಮಧ್ಯೆ, ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಪೂರ್ವ ನಿಗಧಿಯಾಗಿತ್ತು. ಹೀಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರೊಂದಿಗೆ ಮೂರು ದಿನಗಳ ಹಿಂದೆಯೇ ಸಭೆ ನಡೆಸಲಾಗಿದೆ. ಕಾರ್ಯಕರ್ತೆಯರು ಸರ್ಕಾರದ ಮುಂದಿಟ್ಟಿದ್ದ 8 ಬೇಡಿಕೆಗಳ ಪೈಕಿ ಏಳನ್ನು ಈಡೇರಿಸಿದ್ದೇವೆ. ಉತ್ತಮ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಬೇಡೆಕೆಗಳಿಗೆ ಸ್ಪಂದಿಸಲು ರ್ಸಾರ ಸಿದ್ಧವಿದೆ ಎಂದು ಹೇಳಿದ್ದಾರೆ.
ಆಯುಷ್ಮಾನ್ ಭಾರತ ಯೋಜನೆಯಡಿ ಬಿಪಿಎಲ್ ಕಾರ್ಡ್ ನೀಡಬೇಕೆಂಬ ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಸರ್ಕಾರ ಒಪ್ಪಿದೆ. ಕಾರ್ಯಕರ್ತೆಯರಿಗೆ ಪೋರ್ಟಲ್ನಲ್ಲಿ ಮಾಹಿತಿ ನೀಡಲು ಸೂಚಿಸಲಾಗಿದೆ. ಎ.ಎನ್.ಎಂಗಳು ತಕ್ಷಣ ಮಾಹಿತಿ ನೀಡಲು ಸೂಚಿಸಲಾಗಿದೆ. 6 ಸಾವಿರ ರೂ. ಗಳನ್ನು ಏಕಕಾಲಕ್ಕೆ ಸಂಬಳ ನೀಡಲು ಸೂಚಿಸಲಾಗಿದೆ. ಆದರೆ, ಕಾರ್ಯಕರ್ತೆಯರು 12,000 ಸಾವರಿ ರೂ. ಸಂಬಳ ಕೇಳುತ್ತಿದ್ದಾರೆ. ಸಂಬಳವನ್ನು 10,000ಕ್ಕೆ ಹೆಚ್ಚಿಸಲು ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. ಆರ್ಥಿಕ ಇಲಾಖೆ ಈ ಬಗ್ಗೆ ಪರಿಶೀಲಿಸಬೇಕಿರುವುದರಿಂದ ಆಶಾ ಕಾರ್ಯಕರ್ತೆಯರು ಧರಣಿ ಕೈ ಬಿಡಬೇಕು ಎಂದು ಶ್ರೀರಾಮುಲು ಮನವಿ ಮಾಡಿದ್ದಾರೆ.
ಸಚಿವರ ಸೂಚನೆ ಮೇರೆಗೆ ಫ್ರೀಡಮ್ ಪಾರ್ಕ್ಗೆ ಭೇಟಿ ನೀಡಿದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೆದ್ ಅಖ್ತರ್, ಆಶಾ ಕಾರ್ಯಕರ್ತೆಯರ 15 ತಿಂಗಳ ಬಾಕಿ ಗೌರವಧನವನ್ನು ಇಲಾಖೆಯಲ್ಲಿನ ಆರ್ಥಿಕ ಸ್ಥಿತಿಗತಿ ನೋಡಿಕೊಂಡು ಬಿಡುಗಡೆ ಮಾಡಲಾಗುವುದು. ಮಾರ್ಚ್ ಒಳಗೆ ಈ ಹಣ ಬಿಡುಗಡೆ ಮಾಡಲಾಗುವುದು. ಎಲ್ಲ ಆಶಾ ಕಾರ್ಯಕರ್ತೆಯರಿಗೆ 2 ಜೊತೆ ಸಮವಸ್ತ್ರ ನೀಡಲಾಗುವುದು. 10 ವರ್ಷ ಕಾರ್ಯ ನಿರ್ವಹಿಸಿದ ಕಾರ್ಯಕರ್ತೆಯರು ಕಾರ್ಯ ಸ್ಥಗಿತಗೊಳಿಸುವುದಾದರೆ 20 ಸಾವಿರ ನೀಡಲಾಗುವುದು ಎಂದು ಹೇಳಿದ್ದಾರೆ.
Advertisement