ಪ್ರತಿಭಟನೆ ಮುಂದುವರಿಸಿದವರಿಗೆ ಗೌರವಧನ ಕಟ್: ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಎಚ್ಚರಿಕೆ
ಬೆಂಗಳೂರು: ಸೇವೆಗೆ ಹಾಜರಾಗದೆ ಆರೋಗ್ಯ ಇಲಾಖೆ ವಿರುದ್ಧ ಪ್ರತಿಭಟನೆ ಮುಂದುವರೆಸಿರುವ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವ ಧನ, ಪ್ರೋತ್ಸಾಹಧನ ಕಡಿಗೊಳಿಸಲು ಆರೋಗ್ಯ ಇಲಾಖೆ ಸುತ್ತೋಲೆ ನೀಡಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜ.3 ರಂದು ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದರು. ಈ ವೇಳೆ 15 ತಿಂಗಳಿನಿಂದ ಬಾಕಿ ಇರುವ ಪ್ರೋತ್ಸಾಹ ಧನ ಬಿಡುಗಡೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವವರೆಗೆ ಸೇವೆ ಬಹಿಷ್ಕರಿಸಿ ಮನೆಯಲ್ಲಿಯೇ ಕುಳಿತು ಪ್ರತಿಭಟಿಸುವುದಾಗಿ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಯುಕ್ತ ಸಂಘ ಸ್ಪಷ್ಟಪಡಿಸಿತು.
ಸಂಘದ ಕರೆಯಂತೆ ಸೇವೆ ಬಹಿಷ್ಕರಿಸಿ ಮನೆಯಲ್ಲಿಯೇ ಕುಳಿತು ಪ್ರತಿಭಟಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಇಲಾಖೆ ಇದೀಗ ಶಾಕ್ ನಕೀಡಿದ್ದು, ಸೇವೆಗೆ ಹಾಜರಾಗದ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವ ಧಾನ ಹಾಗೂ ಪ್ರೋತ್ಸಾಹ ಧನ ಕಡಿತಗೊಳಿಸಬೇಕು. ಆಶಾ ಕಾರ್ಯಕರ್ತೆಯರ ಕಾರ್ಯನಿರ್ವಹಣೆ ಬಗ್ಗೆ ನಿತ್ಯ ವರದಿ ಸಲ್ಲಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದೆ.
ಸೇವ ಬಹಿಷ್ಕರಿಸಿದ ಆಶಾ ಕಾರ್ಯಕರ್ತೆಯರು ಪುನಃ ಸೇವೆಗೆ ಹಾಜರಾಗುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು ಮೊದಲು ಮನವರಿಕೆ ಮಾಡಿಕೊಡಬೇಕು. ಪ್ರತಿ ದಿನ ಕಾರ್ಯನಿರ್ವಹಿಸುತ್ತಿರುವ ಹಾಗೂ ಕಾರ್ಯನಿರ್ವಹಿಸದ ಆಶಾ ಕಾರ್ಯಕರ್ತೆಯರ ವಿವರಗಳನ್ನು ಜಿಲ್ಲಾ ಆರ್'ಸಿಎಚ್ ಅದಿಕಾರಿಗಳು ನಿತ್ಯ ಸಂಜೆ 5 ಗಂಟೆಯೊಳಗೆ ಆಶಾ ಕಾರ್ಯಕ್ರಮ ವಿಭಾಗಕ್ಕೆ ತಪ್ಪದೇ ಸಲ್ಲಿಸಬೇಕು. ತಪ್ಪಿಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತರು ಸುತ್ತೋಲೆಯಲ್ಲಿ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ