ಬೆಂಗಳೂರು: ಕರ್ನಾಟಕಕ್ಕೆ ಕೇಂದ್ರದಿಂದ ಹಂಚಿಕೆಯಾಗಬೇಕಾದ ಹಣದಲ್ಲಿ 5 ಸಾವಿರ ಕೋಟಿ ರೂಗಳಷ್ಟು ಕಡಿತ ಮಾಡಿದೆ, ಜಿಎಸ್ ಟಿ ಪರಿಹಾರ ಧನದಲ್ಲಿ ವಿಳಂಬವಾಗುತ್ತಿದೆ, ಪ್ರವಾಹ ಪೀಡಿತ ಜಿಲ್ಲೆಗಳ ಪುನರ್ವಸತಿಗೆ ಕೇಂದ್ರದಿಂದ ಬರಬೇಕಾದ ಪರಿಹಾರ ಮೊತ್ತ ಸರಿಯಾಗಿ ಬರುತ್ತಿಲ್ಲ, ಆರ್ಥಿಕ ಕುಸಿತದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯದಲ್ಲಿ ಇಳಿಮುಖವಾಗಿದೆ ಹೀಗೆ ಹತ್ತಾರು ಆರೋಪಗಳನ್ನು ಹೊತ್ತುಕೊಂಡು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಮುಂದಿನ ತಿಂಗಳು ತಮ್ಮ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸಬೇಕಿದೆ.
ಆದಾಯ ಇಳಿಮುಖದ ಸಮಯದಲ್ಲಿ ಹಗ್ಗದ ಮೇಲಿನ ನಡಿಗೆಯಂತಿರುವ ಸಂದರ್ಭದಲ್ಲಿ ಹಣಕಾಸಿನ ಜವಾಬ್ದಾರಿ ಕಾಯ್ದೆಯನ್ನು ಕಡ್ಡಾಯವಾಗಿ ಸರ್ಕಾರ ಪಾಲಿಸಬೇಕಾಗುತ್ತದೆ. ಕೇಂದ್ರ ಸರ್ಕಾರದಿಂದ ಅಕ್ಟೋಬರ್-ನವೆಂಬರ್ ತಿಂಗಳ ಜಿಎಸ್ ಟಿ ಮೊತ್ತ ಬರುವಾಗ ತಡವಾಗಿದ್ದು ಡಿಸೆಂಬರ್ -ಜನವರಿ ತಿಂಗಳದ್ದು ಸಹ ಬರುವುದು ವಿಳಂಬವಾದರೆ ಹೇಗೆ ಎಂಬ ಚಿಂತೆಯಲ್ಲಿ ರಾಜ್ಯ ಹಣಕಾಸು ಇಲಾಖೆಯ ಅಧಿಕಾರಿಗಳಿದ್ದಾರೆ.
ಆರ್ಥಿಕ ವರ್ಷ 2004-05ರ ನಂತರ 2009-10 ಹೊರತುಪಡಿಸಿ ಕರ್ನಾಟಕದಲ್ಲಿ ಶೇಕಡಾ 3ರಷ್ಟು ಆರ್ಥಿಕ ಕೊರತೆ ಎದುರಿಸುತ್ತಲೇ ಬಂದಿದೆ. ರಾಷ್ಟ್ರದ ಆರ್ಥಿಕತೆಯಲ್ಲಿ ಕುಸಿತ ಕಂಡುಬಂದಾಗ ರಾಜ್ಯಗಳು ಅದರಿಂದ ರಕ್ಷಿಸಿಕೊಳ್ಳಲು ಆಗುವುದಿಲ್ಲ. ಕೇಂದ್ರದಲ್ಲಿ ಕಡಿಮೆ ತೆರಿಗೆ ಸಂಗ್ರಹವಾದರೆ ರಾಜ್ಯಗಳಿಗೆ ಹಂಚಿಕೆ ಮಾಡುವುದರ ಮೇಲೆ ಪರಿಣಾಮ ಬೀರುತ್ತದೆ. ರಾಜ್ಯದ ಹಣಕಾಸು ಹಂಚಿಕೆಗೆ ಕಡಿವಾಣ ಹಾಕಬೇಕಾಗುತ್ತದೆ. ಆದರೆ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಮೊತ್ತವನ್ನು ನಿರಾಕರಿಸಲು ಸಾಧ್ಯವಾಗುವುದಿಲ್ಲ. ಜಿಎಸ್ ಟಿ ಜಾರಿಯಾಗುವುದಕ್ಕೆ ಮುನ್ನ ಇದ್ದಂತಹ ಆಯ್ಕೆಗಳು ಯಾವುದೂ ಸಿಗುವುದಿಲ್ಲ ಎನ್ನುತ್ತಾರೆ ಆರ್ಥಿಕ ತಜ್ಞ ಮತ್ತು ರಾಜಕೀಯ ವಿಶ್ಲೇಷಕ ಪ್ರೊ ನರೇಂದರ್ ಪಾಣಿ.
ಕಳೆದ ಡಿಸೆಂಬರ್ ಗೆ ಕರ್ನಾಟಕದಲ್ಲಿ ಶೇಕಡಾ 73.6ರಷ್ಟು ವಾಣಿಜ್ಯ ತೆರಿಗೆ, ಅಬಕಾರಿ ಇಲಾಖೆ ಮೂಲಕ 77.23, ಶೇಕಡಾ 70.15ರಷ್ಟು ಸ್ಟಾಂಪ್ ಅಂಡ್ ರಿಜಿಸ್ಟ್ರೇಷನ್, ಶೇಕಡಾ 68.51ರಷ್ಟು ಸಾರಿಗೆ ಮತ್ತು ಶೇಕಡಾ 71ರಷ್ಟು ಗಣಿಗಾರಿಕೆ ಮೂಲಕ ಸಂಗ್ರಹವಾಗಿದೆ. ಪ್ರಸಕ್ತ ಆರ್ಥಿಕ ವರ್ಷ ಕೊನೆಗೊಳ್ಳಲು ಇನ್ನು ಮೂರೇ ತಿಂಗಳು ಬಾಕಿಯಿರುವುದು. ತನ್ನ ಗುರಿಯನ್ನು ತಲುಪುವ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರವಿದೆ.
Advertisement