ಬೆಂಗಳೂರು: ರಾಜ್ಯದಲ್ಲಿ ಮತ್ತೆ ಎಚ್ 1ಎನ್ 1 ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಜನವರಿ ತಿಂಗಳ ಮೊದಲ 20 ದಿನಗಳಲ್ಲಿ ರಾಜ್ಯಾದ್ಯಂತ 40 ಎಚ್ 1ಎನ್ 1 ಪ್ರಕರಣಗಳು ಪತ್ತೆಯಾಗಿವೆ.
ಈ ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲೇ 22 ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 2, ಉಡುಪಿಯಲ್ಲಿ ಏಳು, ಶಿವಮೊಗ್ಗದಲ್ಲಿ 1 ಹಾಗೂ ದಕ್ಷಿಣ ಕನ್ನಡ, ದಾವಣಗೆರೆ ಜಿಲ್ಲೆಗಳಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿವೆ.
ಈ ತಿಂಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ. ಕಳೆದ ವರ್ಷ 2, 030 ಎಚ್ 1ಎನ್ 1 ಪ್ರಕರಣಗಳು ಪತ್ತೆಯಾಗಿ 87 ಜನರು ಸಾವನ್ನಪ್ಪಿದ್ದರು.
ಈ ವರ್ಷದ ಮೊದಲ 20 ದಿನಗಳಲ್ಲಿ ರಾಜ್ಯದಾದ್ಯಂತ ಸುಮಾರು 40 ಜನರಲ್ಲಿ ಈ ಸೋಂಕು ಪತ್ತೆಯಾಗಿದೆ. ಇದರಲ್ಲಿ ಅರ್ಧದಷ್ಟು ಬೆಂಗಳೂರು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡುಬಂದಿದೆ.
ಚಳಿಗಾಲದ ಮಧ್ಯ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಎಚ್ 1 ಎನ್ 1 ಸೋಂಕು ಪತ್ತೆಯಾಗುವುದನ್ನು ಸಾಮಾನ್ಯವಾಗಿ ನೋಡುತ್ತೇವೆ. ಆದರೆ, ಚಳಿಗಾಲ ಮುಗಿದಿದ್ದರೂ ಜನವರಿಯಲ್ಲಿ ಸೋಂಕಿತರ ಬಗ್ಗೆ ವರದಿಯಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ಡಾ. ಸತ್ಯನಾರಾಯಣ್ ಮೈಸೂರು ಹೇಳಿದ್ದಾರೆ.
ಎಚ್ 1ಎನ್ 1 ರೋಗ ಹರಡಿರುವ ವ್ಯಕ್ತಿಗೆ ಪ್ರಮುಖವಾಗಿ ತೀವ್ರ ಜ್ವರ, ನೆಗಡಿ, ಗಂಟಲು ಕೆರೆತ, ಅತಿಯಾದ ಮೈ ಕೈ ನೋವು, ಕೆಮ್ಮು ಮತ್ತು ಕಫ ಬರುವುದೊಂದಿಗೆ ಅತಿಯಾಗಿ ವಾಂತಿ ಬೇಧಿ ಉಂಟಾಗುತ್ತಿರುತ್ತದೆ. ಉಸಿರಾಟದ ತೊಂದರೆಗಳು ಲಕ್ಷಣಗಳು ಕಂಡುಬರುತ್ತವೆ. ಈ ರೋಗದ ಲಕ್ಷಣಗಳು ಕಂಡುಬಂದಲ್ಲಿ ತಡಮಾಡದೆ ಹತ್ತಿರದ ಆಸ್ಪತ್ರೆಗಳಲ್ಲಿ ದಾಖಲಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಅವರು ಸಲಹೆ ನೀಡುತ್ತಾರೆ.
ಕೆಮ್ಮುವುದು, ಸೀನುವಿಕೆ, ಮಾತನಾಡುವುದು ಅಥವಾ ಸೋಂಕಿತ ವ್ಯಕ್ತಿಯು ಬಳಸುವ ವಸ್ತುಗಳನ್ನು ಸ್ಪರ್ಶಿಸುವ ಮೂಲಕ ಎಚ್ 1 ಎನ್ 1 ಹರಡುತ್ತದೆ. ಲಸಿಕೆಗಳಿವೆ ಆದರೆ ಅವು ದೀರ್ಘಕಾಲದವರೆಗೆ ರೋಗನಿರೋಧಕ ಶಕ್ತಿಯನ್ನು ಒದಗಿಸುವುದಿಲ್ಲ ಮತ್ತು ವೈರಸ್ ತನ್ನನ್ನು ತಾನೇ ಮಾರ್ಪಡಿಸಿಕೊಳ್ಳುವುದರಿಂದ ಪ್ರತಿ ವರ್ಷ ಹೊಸ ಉಪ-ರೀತಿಯ ಲಸಿಕೆಗಳು ಹೊರಬರುತ್ತವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಾದೇಶಿಕ ನಿರ್ದೇಶಕ ಡಾ.ರವಿಕುಮಾರ್ ಹೇಳಿದ್ದಾರೆ.
Advertisement