ತೀವ್ರ, ಮಧ್ಯಮ ಭಾದಿತ ಕೋವಿಡ್-19 ರೋಗಿಗಳಿಗೆ 'ಬಯೋಕಾನ್' ಔಷಧ ಬಳಸಲು ಡಿಸಿಜಿಐ ಅನುಮೋದನೆ
ಬೆಂಗಳೂರು: ತೀವ್ರ, ಮಧ್ಯಮ ಭಾದಿತ ಕೋವಿಡ್-19 ರೋಗಿಗಳಿಗೆ ಬಯೋಕಾನ್ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ಇಟೊಲಿಜುಮಾಬ್ (ಅಲ್ಜುಮಾಬ್) ಇಂಜೆಕ್ಷನ್ ಬಳಸಲು ಭಾರತೀಯ ಔಷಧ ಮಹಾ ನಿಯಂತ್ರಕರು-ಡಿಸಿಜಿಐ ಅನುಮೋದನೆ ನೀಡಿದೆ.
ಕೋವಿಡ್-19 ಕಾರಣ ತೀವ್ರ ಉಸಿರಾಟದಂತಹ ಸಮಸ್ಯೆಯಿಂದ ಬಳಲುತ್ತಿರುವವವರ ಮೇಲೆ ಈ ಔಷಧವನ್ನು ಬಳಸಬಹುದಾಗಿದೆ.
ಇಟೊಲಿಜುಮಾಬ್ ಕೋವಿಡ್- 19 ಕಾರಣ ಸಾಧಾರಣ ರೀತಿಯ ತೊಂದರೆ ಎದುರಿಸುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಶ್ವದಲ್ಲಿ ಅನುಮೋದನೆ ಪಡೆದ ಮೊದಲ ನೋವಲ್ ಬಯೋಲಾಜಿಕ್ ಥೆರಫಿಯಾಗಿದೆ.
ಮುಂಬೈ ಮತ್ತು ನವದೆಹಲಿಯಲ್ಲಿನ ಹಲವು ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಪ್ರಯೋಗದಲ್ಲಿ ಯಶಸ್ವಿಯಾದ ಫಲಿತಾಂಶ ದೊರೆತ ನಂತರ ಇಟೊಲಿಜುಮಾಬ್ ಔಷಧಿಯನ್ನು ಬಳಸಲು ಡಿಸಿಜಿಐ ಅನುಮೋದನೆ ನೀಡಿದೆ. ಕೋವಿಡ್-19 ಕಾರಣ ತೀವ್ರ ರೀತಿಯ ತೊಂದರೆ ತಡೆಯುವಲ್ಲಿ ಈ ಔಷಧಿಯ ಸುರಕ್ಷತೆ ಮತ್ತು ದಕ್ಷತೆ ಬಗ್ಗೆ ಗಮನ ಕೇಂದ್ರಿಕರಿಸಲಾಗಿದೆ.
ಸಾವಿನ ಪ್ರಮಾಣ ಕಡಿಮೆ ಮಾಡುವಲ್ಲಿ ಮತ್ತು ದಕ್ಷತೆಯಲ್ಲಿ ಯಶಸ್ವಿಯಾಗಿರುವುದಾಗಿ ಬಯೋಕಾನ್ ಸಂಸ್ಥೆ ತಿಳಿಸಿದೆ. ಬೆಂಗಳೂರಿನ
ಬಯೋಕಾನ್ ಪಾರ್ಕ್ ನಲ್ಲಿ ಬಯೋಕಾನ್ ಸಂಸ್ಥೆಯಲ್ಲಿ ಇಟೊಲಿಜುಮಾಬ್ ಔಷಧ ತಯಾರಾಗುತ್ತಿದೆ. ಆದರೆ, ಈ ಔಷಧಿಯ ಬೆಲೆಯನ್ನು ಇನ್ನೂ ನಿರ್ಧರಿಸಿಲ್ಲ.
ಪ್ರಸ್ತುತ ಸಂದರ್ಭದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಮುಕ್ತರಾಗಲು ದೇಶ, ವಿದೇಶದ ಸಂಶೋಧಕರು ಪ್ರಯತ್ನ ನಡೆಸುತ್ತಿದ್ದಾರೆ. ಇಟೊಲಿಜುಮಾಬ್ ಔಷಧ ಪ್ರಯೋಗಿಸಿದ ಎಲ್ಲ ರೋಗಿಗಳು ಚೇತರಿಕೆಯಾಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ಕಂಡುಬಂದಿದೆ. ಕೋವಿಡ್-19 ನಿಂದ ತುರ್ತು ಹಾಗೂ ಸಾಧಾರಣ ಭಾದಿತ ರೋಗಿಗಳಿಗೆ ಈ ಔಷಧ ನೀಡಲು ಡಿಸಿಜಿಐ ಅನುಮೋದನೆ ನೀಡಿದೆ ಎಂದು ಬಯೋಕಾನ್ ಕಾರ್ಯನಿರ್ವಾಹಕ ಮುಖ್ಯಸ್ಥೆ ಕಿರಣ್ ಮಂಜೂದಾರ್ ಷಾ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿನ ಹಲವು ರೋಗಿಗಳ ಮೇಲೆ ಔಷಧ ಪ್ರಯೋಗಿಸಲಾಗಿದ್ದು, ಮಹತ್ವದ ಸುಧಾರಣೆಯಾಗಿರುವುದಾಗಿ ಮುಂಬೈಯ ಬಿವೈಎಲ್ ನಾಯರ್ ಆಸ್ಪತ್ರೆಯ ಡೀನ್ ಡಾ. ಮೋಹನ್ ಜೋಷಿ ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯ ಲೋಕ ನಾಯಕ ಆಸ್ಪತ್ರೆಯಲ್ಲಿ 8 ರೋಗಿಗಳಿಗೆ ಇಟೊಲಿಜುಮಾಬ್ ಔಷಧ ನೀಡಲಾಗಿದ್ದು, ಅವರೆಲ್ಲರೂ ಗುಣಮುಖರಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ