ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿ ಕೋವಿಡ್-19 ಕುರಿತ ಜಾಗೃತಿ ಫಲಕಗಳನ್ನು ಲಗತ್ತಿಸಲು ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.
ಈ ಫಲಕದೊಂದಿಗೆ ಯಾವುದೇ ನಿಷೇಧಿತ ವಸ್ತುಗಳನ್ನು ಬಳಸಬಾರದು ಮತ್ತು ವಾಣಿಜ್ಯ ಜಾಹೀರಾತುಗಳನ್ನು ನೀಡಬಾರದು ಎಂದು ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ.
ಜಾಹೀರಾತು ಫಲಕಗಳನ್ನು ಲಗತ್ತಿಸಲು ಅನುಮತಿ ಕೋರಿ ಬಿಬಿಎಂಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
2019ರ ನವೆಂಬರ್ನಲ್ಲಿ ಹೈಕೋರ್ಟ್ ಕರ್ನಾಟಕ ತೆರೆದ ಪ್ರದೇಶಗಳು(ವಿರೂಪ ತಡೆ) ಕಾಯ್ದೆ 1981ರ ಅನುಸಾರ ಎಲ್ಲಾ ಅನಧಿಕೃತ ಹೋರ್ಡಿಂಗ್ಗಳನ್ನು ತೆರವುಗೊಳಿಸುವಂತೆ ಬಿಬಿಎಂಪಿಗೆ ಆದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಕೋವಿಡ್ ಕುರಿತ ಜಾಗೃತಿ ಫಲಕಗಳನ್ನು ಲಗತ್ತಿಸಲು ಅನುಮತಿ ಕೋರಿ ಬಿಬಿಎಂಪಿ ಅರ್ಜಿ ಸಲ್ಲಿಸಿತ್ತು. ಇದನ್ನು ಪುರಸ್ಕರಿಸಿರುವ ನ್ಯಾಯಪೀಠ, ಇದರೊಂದಿಗೆ ಕೋವಿಡ್ ತಪಾಸಣಾ ಕೇಂದ್ರಗಳು ಮತ್ತು ಲಭ್ಯವಿರುವ ಆಸ್ಪತ್ರೆಗಳ ಮಾಹಿತಿಯನ್ನು ಉಲ್ಲೇಖಿಸುವಂತೆ ಸೂಚಿಸಿದೆ.
ಈ ಫಲಕಗಳನ್ನು ಲಗತ್ತಿಸಲು 49.50 ಕೋಟಿ ರೂ. ವ್ಯಯಿಸುವುದಾಗಿ ಬಿಬಿಎಂಪಿ ತಿಳಿಸಿದೆ.
Advertisement