ಕೊಳಕು ಶೌಚಾಲಯ, ನೀರಿನ ಕೊರತೆ: ಕೋವಿಡ್ ಕೇರ್ ಸೆಂಟರ್ ಗಳಲ್ಲಿ ರೋಗಿಗಳ ನರಕಯಾತನೆ

ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕ ಏರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವು ಆಸ್ಪತ್ರೆಗಳನ್ನು ಕೋವಿಡ್ ಕೇರ್ ಸೆಂಟರ್ ಗಳಾಗಿ ಬದಲಾಯಿಸಲಾಗಿದೆ.
ಅಶ್ವತ್ಥ ನಾರಾಯಣ
ಅಶ್ವತ್ಥ ನಾರಾಯಣ
Updated on

ಬೆಂಗಳೂರು: ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕ ಏರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವು ಆಸ್ಪತ್ರೆಗಳನ್ನು ಕೋವಿಡ್ ಕೇರ್ ಸೆಂಟರ್ ಗಳಾಗಿ ಬದಲಾಯಿಸಲಾಗಿದೆ.

ಆದರೆ ಈ ಕೋವಿಡ್ ಕೇರ್ ಸೆಂಟರ್ ಗಳು ಅವ್ಯವಸ್ಥೆಯ ಆಗರವಾಗಿವೆ, ಹೀಗಾಗಿ ಉಪ ಮುಖ್ಯಮಂತ್ರಿ ಡಾ.ಸಿಎನ್ ಅಶ್ವತ್ಥನಾರಾಯಣ ಬೆಂಗಳೂರಿನ ಕೋವಿಡ್ ಕೇರ್ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ನೋಡಿ ಹೌಹಾರಿದರು.

ಜಿಕೆವಿಕೆಯಲ್ಲಿ ಸ್ಥಾಪಿಸಲಾಗಿರುವ 712 ಹಾಸಿಗೆಗಳ ಕೋವಿಡ್ ಕೇರ್ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ನಗರದ ಕೋವಿಡ್ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಅಲ್ಲಿನ ಅವ್ಯವಸ್ಥೆ ಗಳ ಕರ್ಮಕಾಂಡವನ್ನು ಕಂಡು ಹೌಹಾರಿದ ಪ್ರಸಂಗ ನಡೆಯಿತು. 

ಸೋಂಕಿಗೆ ಹೆದರಿರುವ ವೈದ್ಯರು, ಕಂದಾಯ, ಬಿಬಿಎಂಪಿ ಅಧಿಕಾರಿಗಳ ತೀವ್ರ ನಿರ್ಲಕ್ಷ್ಯದಿಂದ ರೋಗಿಗಳು ನರಕ ಸದೃಶ್ಯ ಯಾತನೆ ಅನುಭವಿಸುತ್ತಿರುವುದನ್ನು ಕಣ್ಣಾರೆ ಕಂಡ ಅವರು, ಅಧಿಕಾರಿಗಳ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

ಚಿಕಿತ್ಸೆ, ಔಷಧೋಪಚಾರ, ಸ್ವಚ್ಛತೆ, ಊಟದ ವ್ಯವಸ್ಥೆ, ಶೌಚಾಲಯದ ನೈರ್ಮಲ್ಯ, ಹಾಸಿಗೆಯ ಮೇಲಿನ ಬಟ್ಟೆ ಬದಲಿಸುವುದೂ ಸೇರಿದಂತೆ ಯಾವುದೇ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಅಧಿಕಾರಿಗಳು ಮತ್ತು ವೈದ್ಯರ ಅಸಡ್ಡೆಯಿಂದ ರೋಗಿಗಳು ನರಳುವಂತೆ ಆಗಿದೆ. ಇದೆಲ್ಲವನ್ನೂ ಪ್ರತ್ಯಕ್ಷವಾಗಿ ಗಮನಿಸಿದ ಡಿಸಿಎಂ, ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ತಕ್ಷಣವೇ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಸಕಾಲಕ್ಕೆ ಆಹಾರ ಮತ್ತು ಔಷಧಗಳ್ನು ನೀಡಲಾಗುತ್ತಿಲ್ಲ. ಹಸಿವಿನಿಂದ ಒದ್ದಾಡಬೇಕಾದ ಸ್ಥಿತಿ ಇದೆ. ಹಾಸಿಗೆಗಳ ಮೇಲಿನ ಬೆಡ್‌ಶೀಟುಗಳನ್ನು ಬದಲಿಸುತ್ತಿಲ್ಲ. ಶೌಚಾಲಯಗಳನ್ನು ಕ್ಲೀನ್ ಮಾಡಿ ದಿನಗಳೇ ಕಳೆದಿವೆ. ಬಿಸಿನೀರಿನ ವ್ಯವಸ್ಥೆ ಇಲ್ಲ. ರೋಗದಿಂದ ನರಳುತ್ತಿರುವ ನಮ್ಮನ್ನು ಇಲ್ಲಿ ತೀರಾ ನಿಕೃಷ್ಟವಾಗಿ ನೋಡಲಾಗುತ್ತಿದೆ ಎಂದು ಸೋಂಕಿತರು ದುಃಖ ತೋಡಿಕೊಂಡರು. ಇದೆಲ್ಲವನ್ನು ಕೇಳಿ ಆಘಾತಕ್ಕೊಳಗಾದ ಡಿಸಿಎಂ ಅಧಿಕಾರಿಗಳ ಮೇಲೆ ಕೆಂಡಾಮಂಡಲಗೊಂಡರು.

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡದ, ಪರಿಸ್ಥಿತಿ ದುರ್ಲಾಭ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಸರಕಾರ ಮುಂದಾಗಿದೆ. ಈಗಾಗಲೇ ವಿಕ್ರಂ ಆಸ್ಪತ್ರೆ, ಜಯನಗರದ ಅಪೋಲೋ ಆಸ್ಪತ್ರೆಗೆ ನೊಟೀಸ್ ನೀಡಲಾಗಿದೆ.

ಇನ್ನು ಕೆಲ ಆಸ್ಪತ್ರೆಗಳು ರೋಗಿಗಳಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಜತೆಗೆ ಸರಕಾರಕ್ಕೆ ನೀಡಬೇಕಾದ ಶೇ.50ರಷ್ಟು ಬೇಡ್’ಗಳನ್ನು ನೀಡದೇ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಲು ಸರಕಾರ ಸ್ಪಷ್ಟ ನಿರ್ಧಾರ ಕೈಗೊಂಡಿದೆ. ಇಂಥ ಆಸ್ಪತ್ರೆಗಳ ಮಾನ್ಯತೆ ರದ್ದು ಮಾಡುವುದರ ಜತೆಗೆ, ಕ್ರಿಮಿನಲ್ ಕೇಸ್ ಕೂಡ ದಾಖಲಿಸಲಾಗುತ್ತಿದೆ ಎಂದು ಡಿಸಿಎಂ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com