ಬೆಂಗಳೂರು: ಕಳೆದ ಕೆಲ ದಿನಗಳಿಂದ ಬೆಂಗಳೂರು ನಗರದಲ್ಲಿ ಕೋವಿಡ್-19 ಪ್ರಕರಣಗಳು ಅವ್ಯಾಹತವಾಗಿ ಬೆಳೆಯುತ್ತಿದ್ದು ಸೋಂಕು ಇಷ್ಟೊಂದು ವ್ಯಾಪಕವಾಗಿ ಹರಡಲು ಅಂತರರಾಜ್ಯ ಪ್ರಯಾಣವೇ ಕಾರಣ, ಮಹಾರಾಷ್ಟ್ರ, ಗುಜರಾತ್, ದೆಹಲಿಯಿಂದ ಸೋಂಕಿತರು ಬಂದಿದ್ದರಿಂದ ಇಲ್ಲಿ ಸೋಂಕಿನ ಪ್ರಮಾಣ ಅತ್ಯಧಿಕವಾಯಿತು ಎಂದು ರಾಜ್ಯ ಸರ್ಕಾರ ಹೇಳುತ್ತಿದೆ.
ಸೋಂಕು ಸಮುದಾಯ ಹಂತಕ್ಕೆ ತಲುಪಿಲ್ಲ, ತಲುಪಿದ್ದರೆ ಇಂದು ಬೆಂಗಳೂರಿನಲ್ಲಿಯೇ ಸೋಂಕಿತರ ಸಂಖ್ಯೆ ಲಕ್ಷಗಟ್ಟಲೆ ಆಗುತ್ತಿತ್ತು ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಹೇಳುತ್ತಾರೆ.
ರಾಜ್ಯದ ಕೋವಿಡ್-19 ನಿರ್ವಹಣೆಯ ಉಸ್ತುವಾರಿ ಹೊತ್ತಿರುವ ಕೆ ಸುಧಾಕರ್ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ನಿಗಾ ಮತ್ತು ಜಾಗ್ರತೆಯಿಂದಾಗಿ ಕಳೆದ ಎರಡು ತಿಂಗಳಲ್ಲಿ ಕೊರೋನಾ ಸೋಂಕು ಅಷ್ಟೊಂದು ಹರಡಿಲ್ಲ ಎನ್ನುತ್ತಾರೆ.
ಬೆಂಗಳೂರಿನಲ್ಲಿ ಇದುವರೆಗೆ 29 ಸಾವಿರದ 621 ಪಾಸಿಟಿವ್ ಕೇಸುಗಳಿದ್ದು ಅವರಲ್ಲಿ 6 ಸಾವಿರದ 540 ಮಂದಿ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 631 ಸಾವು ಸಂಭವಿಸಿದೆ.
ಜೂನ್ ತಿಂಗಳಲ್ಲಿ ಲಾಕ್ ಡೌನ್ ತೆರವು ಮಾಡಿದ ನಂತರ ದೇಶದ ಹಲವು ರಾಜ್ಯಗಳಿಂದ ಜನರು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಬರಲಾರಂಭಿಸಿದರು. ಬೆಂಗಳೂರಿಗೆ ಬೇರೆ ರಾಜ್ಯಗಳಿಂದ ಬರುವ ಜನರ ಸಂಖ್ಯೆ ಹೆಚ್ಚಾಗಿರುತ್ತದೆ. ಹಾಗೆ ಬಂದವರು ಆರೋಗ್ಯ ಸುರಕ್ಷತೆ ಕಾಪಾಡಿಕೊಳ್ಳಬೇಕು ಎಂದು ಹೆಚ್ಚಿಗೆ ಗೋಜಿಗೆ ಹೋಗಿಲ್ಲ. ಇದರಿಂದ ಇಷ್ಟು ಪ್ರಮಾಣದಲ್ಲಿ ಸೋಂಕು ಹರಡಿದೆ ಎನ್ನುತ್ತಾರೆ.
ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಸರ್ಕಾರದ ಪಾತ್ರ ಬಹಳ ಮುಖ್ಯವಾಗಿದೆ ನಿಜ. ಅದರ ಜೊತೆಗೆ ನಾಗರಿಕರಿಗೂ ಜವಾಬ್ದಾರಿಗಳಿವೆ, ಅವರು ಕೂಡ ಸರ್ಕಾರದ ಜೊತೆ ಸಹಕಾರ ನೀಡಬೇಕು. ಸೋಂಕನ್ನು ತಡೆಗಟ್ಟುವಲ್ಲಿ ಎಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕೊರೋನಾ ಸೋಂಕು ವ್ಯಾಪಿಸುವ ಹಂತ ಮೊದಲ ಮತ್ತು ಎರಡನೇ ಹಂತದಲ್ಲಿದ್ದು ಇನ್ನೂ ಸಮುದಾಯ ಹಂತ ತಲುಪಿಲ್ಲ ಎಂದರು. ಜೀವರಕ್ಷಕ ಔಷಧಿಗಳ ಕೊರತೆಯಿಲ್ಲ ಎಂದು ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
Advertisement