ಗಂಗಾವತಿ: ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಕೊಪ್ಪಳದ ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ ಹಾಗೂ ಅವರ ತಂಡ ಹೆಣೆದ ಮನಿಟ್ರ್ಯಾಪ್ ಬಲೆಗೆ ಇಲ್ಲಿನ ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್ ಮತ್ತು ಭೂಮಿ ಕೇಂದ್ರದ ಶಿರಸ್ತೇದಾರ ಶರಣಪ್ಪ ಬಿದ್ದಿದ್ದಾರೆ.
ವಡ್ಡರಹಟ್ಟಿಯ ಸುಂದರರಾಜ್ ಎಂಬ ವ್ಯಕ್ತಿಯೊಬ್ಬರ ಜಮೀನಿನ ಖಾತಾ ಉತಾರದಲ್ಲಿ ತಂದೆಯ ಹೆಸರು ಸೇರಿಸಲು ವ್ಯಕ್ತಿಯೊಬ್ಬರಿಗೆ ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್, ಭೂಮಿ ಕೇಂದ್ರದ ಶಿರಸ್ತೇದಾರ ಶರಣಪ್ಪ ಮೂಲಕ ಆರು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಘಟನೆ ಹಿನ್ನೆಲೆ: ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದ ಸುಂದರರಾಜು ಎಂಬ ವ್ಯಕ್ತಿ ತನ್ನ ಭೂಮಿಯ ಖಾತಾ ಉತಾರದಲ್ಲಿ ತನ್ನ ತಂದೆಯ ಹೆಸರನ್ನು ಸೇರಿಸುವಂತೆ ಸಹಾಯಕ ಆಯುಕ್ತರ ಮೂಲಕ ಆದೇಶ ತಂದು ಇಲ್ಲಿನ ಭಮಿ ಕೇಂದ್ರಕ್ಕೆ ಅರ್ಜಿ ದಾಖಲಿಸಿದ್ದರು.ಇದನ್ನು ಪರಿಶೀಲಿಸಿದ ಭೂಮಿ ಕೇಂದ್ರದ ಶಿರಸ್ತೆದಾರ, ಆರಂಭದಲ್ಲಿ ಹತ್ತು ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಆದರೆ ವ್ಯಕ್ತಿ ಕೊಡಲು ನಿರಾಕರಿಸಿದಾಗ ಸಾಕಷ್ಟು ಬಾರಿ ಅಧಿಕಾರಿಗಳು ವ್ಯಕ್ತಿಯ ಕೆಲಸ ಮಾಡಿಕೊಡಲು ವಿನಃ ಕಾರಣ ಅಲೆದಾಡಿಸಿದ್ದಾರೆ. ಈ ಹಿನ್ನೆಲೆ ವ್ಯಕ್ತಿ ಬೇಸತ್ತು ಚೌಕಾಶಿ ನಡೆಸಿ ಆರು ಸಾವಿರ ರೂಪಾಯಿ ನೀಡಲು ಒಪ್ಪಿದ್ದ ಎನ್ನಲಾಗಿದೆ.
ಇದಕ್ಕೂ ಮೊದಲು ತಹಶೀಲ್ದಾರ್ ಮತ್ತು ಭೂಮಿ ಕೇಂದ್ರದ ಶಿರಸ್ತೆದಾರರು ಸಾರ್ವಜನಿಕರ ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರ ಬಗ್ಗೆ ವ್ಯಕ್ತಿ, ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ವ್ಯಕ್ತಿಯ ದೂರು ಆಧಾರಿಸಿ ಎಸಿಬಿ ಅಧಿಕಾರಿಗಳು ಬಲೆ ಹೆಣೆದಿದ್ದು,ಸೋಮವಾರ ಮಧ್ಯಾಹ್ನ ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ವ್ಯಕ್ತಿ ಅಧಿಕಾರಿಗಳಿಗೆ ಹಣ ನೀಡಲು ಮುಂದಾದಾಗ ಎಸಿಬಿಯ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ನೇತೃತ್ವದಲ್ಲಿನ ತಂಡ, ತಹಶೀಲ್ದಾರ್ ಕಚೇರಿಯ ಮೇಲೆ ದಾಳಿ ಮಾಡಿ ರೆಡ್ ಹ್ಯಾಂಡಾಗಿ ಹಿಡಿದಿದೆ.
ಇದೀಗ ಇಬ್ಬರೂ ಅಧಿಕಾರಿಗಳು ಎಸಿಬಿ ಅಧಿಕಾರಿಗಳ ವಶಕ್ಕೆ ಪಡೆದುಕೊಂಡಿದೆ.ಲಾಕ್ಡೌನ್ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಜಮೀನಿಗೆ ಸಂಬಂಧಿಸಿದಂತೆ ಕೆಲಸ ಮಾಡಿಕೊಡಲು ಈ ಹಿಂದಿನ ವೆಂಕಟಗಿರಿಯ ಕಂದಾಯ ನಿರೀಕ್ಷಕ ವಿಜಯಕುಮಾರ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದರು.
ಇದೀಗ ತಾಲ್ಲೂಕು ಆಡಳಿತದ ಮುಖ್ಯಸ್ಥ ತಹಶೀಲ್ದಾರ್ ಚಂದ್ರಕಾಂತ್ ಮತ್ತು ಭೂಮಿ ಕೇಂದ್ರದ ಶಿರಸ್ತೆದಾರ ಶರಣಪ್ಪ ಎಸಿಬಿ ಬಲೆಗೆ ಬೀಳುವ ಮೂಲಕ ಕಂದಾಯ ಇಲಾಖೆಯಲ್ಲಿ ನಡೆಯುವ 'ಹಣಕಾಸಿನ ವ್ಯವಹಾರ'ದ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.ವರದಿ: ಶ್ರೀನಿವಾಸ.ಎಂ.ಜೆ
Advertisement