ಕೊರೋನಾ ವೈರಸ್ ಕುರಿತು ಹೆಚ್ಚುತ್ತಿದೆ ಆತಂಕ: ಸೋಂಕಿತರ ನೆರವಿಗೆ ಬಂದ ಮನೋವೈದ್ಯರು
ಬಾಗಲಕೋಟೆ: ಕೊರೋನಾ ವೈರಸ್ ಕುರಿತು ಜನರಲ್ಲಿ ಆತಂಕ ಹೆಚ್ಚುತ್ತಲೇ ಇದ್ದು, ಆತಂಕವೇ ಮಾನಸಿಕ ರೋಗವಾಗಿ ಪರಿಣಮಿಸುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಸೋಂಕಿಗೊಳಗಾಗುವ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳೂ ಕೂಡ ಹೆಚ್ಚಾಗುತ್ತಲೇ ಇವೆ.
ರಾಜ್ಯದಲ್ಲಿ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಕರ್ತವ್ಯನಿರ್ವಹಿಸುತ್ತಿರುವ ಪೊಲೀಸರಿಗೂ ವೈರಸ್ ತಗುಲುತ್ತಿವೆ. ಇದರಂತೆ ಪೇದೆಯಾಗಿ ಕರ್ತವ್ಯನಿರ್ವಹಿಸುತ್ತಿದ್ದ ಮಹಂತಶ್ ಎಸ್.ಲಮಣಿ (37)ಯವರಿಗೂ ಸೋಂಕು ತಗುಲಿದ್ದು, ಆರಂಭದಲ್ಲಿ ಆತಂಕ ಹಾಗೂ ಭೀತಿಗೊಳಗಾಗಿದ್ದರು. ಕೌನ್ಸಿಲಿಂಗ್ ಮೂಲಕ ಆತಂಕವನ್ನು ಹೊರಹಾಕಿದ ಬಳಿಕ ಇದೀಗ ಮಹಂತೇಶ್ ಅವರು ಕೊರೋನಾ ಸೋಂಕಿನಿಂದಲೂ ಹೊರಬಂದಿದ್ದಾರೆ.
ಸೋಂಕಿಗೊಳಗಾದ ಸಾಕಷ್ಟು ಮಂದಿಯಲ್ಲಿ ಒತ್ತಡ, ಮಾನಸಿಕ ಖಿನ್ನತೆ, ಭಾವನಾತ್ಮಕ ಸಮಸ್ಯೆ ಹಾಗೂ ಭೀತಿಗೊಳಗಾಗುವುದು ಸಾಮಾನ್ಯ ಅಂತಹವರಿಗೆ ಕೌನ್ಸಿಲಿಂಗ್ ಮಾಡುವುದರಿಂದ ಆತಂಕ ದೂರಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಮಾನಸಿಕ ಒತ್ತಡ ಹಾಗೂ ಆತಂಕದಿಂದ ಹೊರಬಂದಿರುವ ಮಹಾಂತೇಶ್ ಅವರು ಇದೀಗ ಮನೋವೈದ್ಯರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.
ಸೋಂಕು ತಗುಲಿದ ಆರಂಭಿಕ ನಾಲ್ಕು ದಿನಗಳು ನಾನು ಸಾಕಷ್ಟು ಮಾನಸಿಕ ಖಿನ್ನತೆಗೊಳಗಾಗಿದ್ದೆ. ಆದರೆ, ಮನೋವೈದ್ಯರು ನೀಡಿದ್ದ ಬೆಂಬಲ, ವಿಶ್ವಾಸ ಹಾಗೂ ಬಲ ನಾನು ಆತಂಕದಿಂದ ಹೊರಬರುವಂತೆ ಮಾಡಿತ್ತು. ಯೂಟ್ಯೂಬ್ ನೋಡಿಕೊಂಡು ಪ್ರತೀನಿತ್ಯ ಯೋಗ ಮಾಡುತ್ತಿದ್ದೆವು. ಇದರಿಂದ ಆಸ್ಪತ್ರೆಯಲ್ಲಿ ಎಷ್ಟೇ ಒತ್ತಡಗಳಿದ್ದರೂ ಅದು ಹೊರಹೋಗುವಂತಾಗುತ್ತಿತ್ತು ಎಂದು ಮಹಾಂತೇಶ್ ತಿಳಿಸಿದ್ದಾರೆ.
ಇದೀದ ಧಾರವಾಡ, ಬಾಗಲಕೋಟೆ, ವಿಜಯಪುರ ಹಾಗೂ ಇತರೆ ರಾಜ್ಯಗಳ ಜಿಲ್ಲೆಗಳಲ್ಲಿರುವ ಸೋಂಕಿತರಿಗೆ ಇಗ ಮಾನಸಿಕ ಆರೋಗ್ಯ ತಜ್ಞರು ಕೌನ್ಸಿಲಿಂಗ್ ನಡೆಸುವ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಹುಬ್ಬಳ್ಳಿಯ ಮನೋವೈದ್ಯ ಡಾ.ಶಿವಾನಂದ ಹಿರೇಮಠ್ ಅವರು ಮಾತನಾಡಿ, ಕೋರೋನಾ ಸಾಂಕ್ರಾಮಿಕ ರೋಗುವು ಹಲವು ರೋಗಿಗಳು ಮಾನಸಿಕ ಖಿನ್ನತೆಗೊಳಗಾಗುವಂತೆ ಮಾಡಿದ್ದಾರೆ. ಪ್ರಮುಖವಾಗಿ ಐಸೋಲೇಷನ್ ನಲ್ಲಿರುವ ಸೋಂಕಿತರು ಹೆಚ್ಚು ಸಮಸ್ಯೆಗೊಳಗಾಗುತ್ತಿದ್ದಾರೆ. ರೋಗಿಗಳು ಮಾನಸಿಕವಾಗಿ ಗಟ್ಟಿಯಾಗಿದ್ದರೆ, ಆವರು ಯಾವುದೇ ರೋಗದ ವಿರುದ್ಧ ಕೂಡ ಹೋರಾಡಬಹುದಾಗಿದೆ. ಇಂತಹ ಸಂದರ್ಭದಲ್ಲಿ ದೈಹಿಕವಾಗಿ ಅಷ್ಟೇ ಅಲ್ಲದೆ, ಮಾನಸಿಕವಾಗಿಯೂ ಶಕ್ತಿಯುತವಾಗಿರುವುದು ಅಗತ್ಯವಾಗಿರುತ್ತದೆ ಎಂದು ಹೇಳಿದ್ದಾರೆ.