ಬೆಂಗಳೂರು: ತಮ್ಮ ವಿರುದ್ಧ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಧ್ಯಪ್ರವೇಶಿಸುವಂತೆ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿಯವರು ಆಗ್ರಹಿಸಿದ್ದಾರೆ.
ಯತ್ನಾಳ್ ಅವರು ನನ್ನನ್ನು ನಕಲಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಪಾಕಿಸ್ತಾನದ ಏಜೆಂಟ್ ಎಂದು ಕರೆದಿದ್ದಾರೆ. ಇಂತಹ ಹೇಳಿಕೆಗೆ ಬಿಜೆಪಿ ನಾಯಕರು ಬೆಂಬಲ ನೀಡುತ್ತಿದ್ದಾರೆ. ಈ ವಿಚಾರದ ಬಗ್ಗೆ ನಾನು ಇನ್ನು ಏನನ್ನೂ ಮಾತನಾಡುವುದಿಲ್ಲ. ಇಂತಹ ಹೇಳಿಕೆ ಬಗ್ಗೆ ಮಾತನಾಡುವ ಅಗತ್ಯವೂ ನನಗಿಲ್ಲ. ಜನರಿಗೆ ನಾನೇನು ಎಂಬುದು ಗೊತ್ತಿದೆ. ನನ್ನ ಆಪ್ತರಿಗೂ ನಾನೇ ಎಂಬುದು ಗೊತ್ತಿದೆ. ಯತ್ನಾಳ್ ಒಂದು ರೀತಿಯ ವ್ಯಕ್ತಿಯಾಗಿದ್ದು, ಅವರು ಯಾರ ಬಗ್ಗೆಯೂ ಮಾತನಾಡದೆ ಸುಮ್ಮನಿರುವುದಿಲ್ಲ. ಈ ಹಿಂದೆ ಕೂಡ ಇದೇ ರೀತಿ ಮಾತನಾಡಿದ್ದರು. ಇದೀಗ ನನ್ನ ಬಗ್ಗೆ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡುತ್ತಾರೆಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.
ಯತ್ನಾಳ್ ಅವರ ಹೇಳಕೆಗೆ ಸಿದ್ದರಾಮಯ್ಯ ಅವರು ಕಿಡಿಕಾರಿದ್ದು, ದೊರೆಸ್ವಾಮಿಯವರು ತಮ್ಮ ಇಡೀ ಜೀವನವನ್ನು ದೇಶದ ಹಿತಾಸಕ್ತಿಗಾಗಿ ಮುಡಿಪಾಗಿಟ್ಟಿದ್ದಾರೆಂದು ಹೇಳಿದ್ದಾರೆ.
ಇಳಿವಯಸ್ಸಿನಲ್ಲಿಯೂ ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ. ಅಂತಹ ಉತ್ತಮ ವ್ಯಕ್ತಿಯ ಬಗ್ಗೆ ಮಾತನಾಡುವ ಅರ್ಹತೆ ಯತ್ನಾಳ್'ಗೆ ಇಲ್ಲ. ಕರ್ನಾಟಕ ಬಿಜೆಪಿ ಇಂತಹ ನಾಯಕರಿಗೆ ಬೆಂಬಲ ನೀಡುತ್ತಿರುವುದರಿಂದಲೇ ಯತ್ನಾಳ್ ಸಾರ್ವಜನಿಕವಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಜನರಿಂದಲೇ ಸಮಾಜದಲ್ಲಿ ಶಾಂತಿ ಕದಡುತ್ತಿದೆ. ಇಂತಹವರು ಸಾರ್ವಜನಿಕ ಜೀವನದಲ್ಲಿ ಇರಬಾರದು ಎಂದು ತಿಳಿಸಿದ್ದಾರೆ. ಯತ್ನಾಳ್ ಹೇಳಿಕೆಗೆ ಜೆಡಿಎಸ್ ಹಿರಿಯ ನಾಯಕ ಕುಮಾರಸ್ವಾಮಿ ಕೂಡ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
Advertisement