ಬೆಂಗಳೂರು: ವೇಗವಾಗಿ ಬಂದ ಆ್ಯಂಬುಲೆನ್ಸ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಶುಕ್ರವಾರ ಮಧ್ಯರಾತ್ರಿ ಹೊಸೂರು ರಸ್ತೆಯ ಆನೆಪಾಳ್ಯ ಜಂಕ್ಷನ್ ಬಳಿ ಸಂಭವಿಸಿದೆ.
ಬನ್ನೇರುಘಟ್ಟದ ಎಸ್ಆರ್ ನಗರದ ಶಬಾಬ್ ಪಾಷ (20) ಹಾಗೂ ಸೈಯದ್ ತನ್ವೀರ್ (17) ಮೃತ ದುರ್ದೈವಿಗಳು.
ಕೂಲಿ ಕೆಲಸ ಮಾಡುತ್ತಿದ್ದ ಶಬಾಬ್ ಪಾಷ, ಸೈಯದ್ ತನ್ವೀರ್ ಬೈಕ್ನಲ್ಲಿ ರಾತ್ರಿ 1ರ ಸುಮಾರಿಗೆ ಹೊಸೂರು ರಸ್ತೆಯ ಆನೆಪಾಳ್ಯ ಜಂಕ್ಷನ್ನಿಂದ ಬನ್ನೇರುಘಟ್ಟ ರಸ್ತೆ ಕಡೆಗೆ ಸಾಗುತ್ತಿದ್ದಾಗ ಮಾರ್ಗಮಧ್ಯೆ ಕ್ರಿಶ್ಚಿಯನ್ ಸಿಮೆಂಟರಿ ಗೇಟ್ ಬಳಿ ಬನ್ನೇರುಘಟ್ಟ ರಸ್ತೆಯ ಕಡೆಯಿಂದ ವೇಗವಾಗಿ ಬಂದ ಆಂಬ್ಯುಲೆನ್ಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರಿಬ್ಬರೂ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಇಬ್ಬರನ್ನು ಮೊದಲು ನಿಮ್ಹಾನ್ಸ್ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆ ಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ಅಪಘಾತವಾಗುತ್ತಿದ್ದಂತೆ ಚಾಲಕ ರವೀಶ್ ಸ್ಥಳದಲ್ಲೇ ಆ್ಯಂಬುಲೆನ್ಸ್ ಬಿಟ್ಟು ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಅಶೋಕ್ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಚಾಲಕನ ಶೋಧಕಾರ್ಯ ಆರಂಭಿಸಿದ್ದಾರೆ.
Advertisement