ಕೋಟ್ಯಂತರ ರೂ. ಸಾಲ ಪಡೆದು ಪಾವತಿಸದ ಎಸ್ ನಾರಾಯಣ: ಮಲ್ಲೇಶ್ವರಂ ಬ್ಯಾಂಕ್ ಆರೋಪ
ಬೆಂಗಳೂರು: ನೂರು ವರ್ಷಗಳ ಇತಿಹಾಸವಿರುವ ದಿ ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್ ನಿಂದ ಚಿತ್ರನಿರ್ದೇಶಕ ಎಸ್.ನಾರಾಯಣ್ ಮತ್ತು ಅವರ ಮಗ ಬಿ.ಎನ್. ಪವನ್ ಕುಮಾರ್ 1.56 ಕೋಟಿ ರೂ ಸಾಲ ಪಡೆದು ಮರು ಪಾವತಿಮಾಡದೇ ವಂಚಿಸುತ್ತಿದ್ದಾರೆ ಎಂದು ಬ್ಯಾಂಕ್ ನ ನಿರ್ದೇಶಕ ಎಂ.ಎನ್. ಸುರೇಶ್ ಆರೋಪಿಸಿದ್ದಾರೆ
ಬ್ಯಾಂಕ್ ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ನಿರಂತರ ಲಾಭದಲ್ಲಿ ಮುನ್ನಡೆಯುತ್ತಿದೆ. ಶತಮಾನದ ಅಂಚಿನಲ್ಲಿರುವ ಬ್ಯಾಂಕ್ ಇಂದಿನವರೆಗೂ ಯಾವುದೇ ರೀತಿಯಲ್ಲಿಯೂ ಕಪ್ಪುಚುಕ್ಕೆ ಇಡುವಂತಹ ಕಾರ್ಯಗಳಲ್ಲಿ ತೊಡಗಿಕೊಂಡಿಲ್ಲ ನೂರಾರು ಕೋಟಿ ವ್ಯವಹಾರ ಹೊಂದಿರುವ ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್ ತನ್ನ ವ್ಯವಹಾರಗಳಲ್ಲಿ ಇಂದಿಗೂ ಪಾರದರ್ಶಕತೆಯನ್ನು ಕಾಪಾಡಿಕೊಂಡು ಬರುತ್ತಿದೆ. ಆದರೆ ಬ್ಯಾಂಕ್ ಬಗ್ಗೆ ಎಸ್. ನಾರಾಯಣ್ ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ಬ್ಯಾಂಕ್ ವಿರುದ್ಧ ನಟರೂ ಆದ ಎಸ್ ನಾರಾಯಣ್ ರಾಜಾಜಿನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಬ್ಯಾಂಕ್ ನಿರ್ದೇಶಕರಿಂದ ತಮಗೆ ಮೋಸವಾಗಿದೆ ಎಂದು ದೂರು ದಾಖಲಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡಿ ಬ್ಯಾಂಕ್ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಜೊತೆಗೆ ಗ್ರಾಹಕರ ಠೇವಣಿಗೆ ಯಾವುದೇ ಖಾತರಿ ಇಲ್ಲ ಎಂಬಂತಹ ಆಧಾರ ರಹಿತ ಸುದ್ದಿ ಪ್ರಸಾರವಾಗಿದೆ. ಈ ಎಲ್ಲಾ ಸಂಗತಿಗಳು ಸತ್ಯಕ್ಕೆ ದೂರವಾಗಿವೆ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ