ಚಿಕ್ಕಬಳ್ಳಾಪುರ: ಮಟನ್ ಸಾಂಬಾರ್ ಗೆ ಉಪ್ಪು ಜಾಸ್ತಿ ಎಂದು ಪತ್ನಿಯನ್ನೇ ಕೊಂದ ಪತಿ!

ಮಟನ್ ಸಾಂಬಾರ್ ಗೆ ಉಪ್ಪು ಜಾಸ್ತಿ ಎಂದು ಪತ್ನಿಯನ್ನೇ ಪಾಪಿ ಪತಿ ಕೊಂದು ಹಾಕಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿಕ್ಕಬಳ್ಳಾಪುರ: ಮಟನ್ ಸಾಂಬಾರ್ ಗೆ ಉಪ್ಪು ಜಾಸ್ತಿ ಎಂದು ಪತ್ನಿಯನ್ನೇ ಪಾಪಿ ಪತಿ ಕೊಂದು ಹಾಕಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯ (ಉಪ್ಪಕುಂಟೆ) ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಪತ್ನಿಯನ್ನು ಮಧುರ(24 ವರ್ಷ) ಎಂದು ಗುರುತಿಸಲಾಗಿದ್ದು, ಆರೋಪಿ ಪತಿಯನ್ನು ಬಾಲಚಂದ್ರ  ಚೇಳೂರು(28 ವರ್ಷ) ಎಂದು ಹೇಳಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ಖಾಸಗಿ ಬಸ್ ಚಾಲಕನಾಗಿದ್ದ ಬಾಲಚಂದ್ರ ಮಧುರಾಳನ್ನ ಪ್ರೀತಿಸಿ ಮದುವೆಯಾಗಿದ್ದ. ಈ ದಂಪತಿಗೆ 11 ತಿಂಗಳ ಮುದ್ದಾದ ಮಗು ಕೂಡ ಇದೆ. ಹೆರಿಗೆ ನಂತರ ತವರು ಮನೆಗೆ ಬಂದಿದ್ದ ಮಧುರ, ತವರು ಮನೆಯಲ್ಲಿಯೇ ಇದ್ದಳು. ಹೀಗಾಗಿ ಬಾಲಚಂದ್ರ ಕೂಡ  ಆಗಾಗ ಪತ್ನಿಯ ತವರು ಮನಗೆ ಬಂದು ಹೋಗುತ್ತಿದ್ದ. ನಿನ್ನೆ ಅಂದರೆ ಭಾನುವಾರವಾದ ಮಾಂಸದ ಅಡುಗೆ ಮಾಡಿದ್ದು, ಸಾರಿಗೆ ಉಪ್ಪು ಜಾಸ್ತಿ ಅಂತ ತಡರಾತ್ರಿ ಮಧುರ ಜೊತೆ ಬಾಲಚಂದ್ರ ಜಗಳ ಮಾಡಿದ್ದಾನೆ. ಮೊದಲೇ ಮದ್ಯ ವ್ಯಸನಿ ಹಾಗೂ ಪದೇ ಪದೇ ಕ್ಷುಲ್ಲಕ ಕಾರಣಕ್ಕೆ ಗಲಾಟೆ  ಮಾಡುವ ಪ್ರವೃತ್ತಿ ಇದ್ದ ಬಾಲಚಂದ್ರ ಪತ್ನಿಯನ್ನು ನೇರವಾಗಿ ರೂಮಿನೊಳಗೆ ಕರೆದೊಯ್ದು ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಆತ್ಮಹತ್ಯೆ ಅಂತ ಬಿಂಬಿಸಲು ಸಹ ಪ್ರಯತ್ನಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ಚೇಳೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪತಿ ಮಹಾಶಯ ಬಾಲಚಂದ್ರನನ್ನ ಬಂಧಿಸಿ ಮುಂದಿನ ಕಾನೂನುಕ್ರಮ ಕೈಗೊಂಡಿದ್ದಾರೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323(ಹಲ್ಲೆ), 342(ಮಹಿಳೆಯ  ಆತ್ಮಗೌರವಕ್ಕೆ ಚ್ಯುತಿ) 302(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com