ಬೆಂಗಳೂರು: ತಮ್ಮೂರಿಗೆ ತೆರಳಲು ಸಹಸ್ರಾರು ವಲಸಿಗ ಕಾರ್ಮಿಕರು ಸರದಿಯಲ್ಲಿ, ಅರಮನೆ ಮೈದಾನದಲ್ಲಿ ಅವ್ಯವಸ್ಥೆ
ಬೆಂಗಳೂರು: ಮೇ 31ರವರೆಗೂ ಶ್ರಮಿಕ್ ವಿಶೇಷ ರೈಲುಗಳಲ್ಲಿ ತೆರಳುವ ವಲಸಿಗ ಕಾರ್ಮಿಕರ ಪ್ರಯಾಣ ವೆಚ್ಚವನ್ನು ಸರ್ಕಾರವೇ ಭರಸಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ ನಂತರ, ತಮ್ಮ ತಮ್ಮ ರಾಜ್ಯಗಳಿಗೆ ತೆರಳಲು ಸೇವಾ ಸಿಂಧು ಆಪ್ ನಲ್ಲಿ ಹೆಸರನ್ನು ದಾಖಲಿಸಲು ಒಡಿಶಾ, ಮಣಿಪುರ, ಜಾರ್ಖಂಡ್, ಬಿಹಾರ ಮತ್ತು ಉತ್ತರ ಪ್ರದೇಶದ ಸಹಸ್ರಾರು ಸಂಖ್ಯೆಯ ವಲಸಿಗ ಕಾರ್ಮಿಕರು ಅರಮನೆ ಮೈದಾನಕ್ಕೆ ಲಗ್ಗೆ ಇಟ್ಟಿದ್ದರಿಂದ ಗೊಂದಲಕಾರಿ ವಾತವಾರಣ ನಿರ್ಮಾಣವಾಯಿತು.
ತಮ್ಮ ತಮ್ಮ ಊರುಗಳಿಗೆ ತೆರಳಲು ಅರಮನೆ ಮೈದಾನದಲ್ಲಿ ಉಚಿತವಾಗಿ ರೈಲು ಟಿಕೆಟ್ ಪಡೆಯಬಹುದು ಎನ್ನುವ ವಾಟ್ಸಾಪ್ ಸಂದೇಶವನ್ನು ಪಡೆದ ನಂತರ ಸುಮಾರು 10 ಸಾವಿರ ವಲಸಿಗ ಕಾರ್ಮಿಕರು ಆಗಮಿಸಿದಲ್ಲದೇ, ತಮ್ಮೂರಿಗೆ ಕಳುಹಿಸಿ ಎಂದು ಪೊಲೀಸರಿಗೆ ಮನವಿ ಮಾಡಿಕೊಳ್ಳುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಲಸಿಗರ ಕಾರ್ಮಿಕರು ಮನೆಗೆ ತೆರಳಲು ಸಹಾಯ ಮಾಡುವುದಾಗಿ ಭರವಸೆ ನೀಡುವ ಮೂಲಕ ಪರಿಸ್ಥಿತಿ ಕೈ ಮೀರದಂತೆ ಎಚ್ಚರ ವಹಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ರೈಲನ್ನು ವ್ಯವಸ್ಥೆ ಮಾಡಲಾಗಿದೆಯೇ ಎಂಬ ಅರಿವಿಲ್ಲದಿದ್ದರೂ ಸಹಸ್ರಾರು ಸಂಖ್ಯೆಯ ವಲಸಿಗ ಕಾರ್ಮಿಕರು ನೀರು, ಅನ್ನ, ವಿಶ್ರಾಂತಿ ಕೊಠಡಿ ಇಲ್ಲದೆ ಸರದಿಯಲ್ಲಿ ನಿಂತು ಕಾಯುತ್ತಿದ್ದರು. ಅನೇಕ ಮಂದಿ ವಲಸಿಗರ ಕಾರ್ಮಿಕರು ಒಡಿಶಾದ ಭಾದ್ರಾಕ್ ನಿಂದ ಬಂದವರು ಆಗಿದ್ದಾರೆ. ವಲಸಿಗ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಹೆಚ್ಚುವರಿ ರೈಲುಗಳ ವ್ಯವಸ್ಥೆ ಮಾಡುವಂತೆ ರೈಲ್ವೆಯನ್ನು ಕೋರಲಾಗಿದೆ. ಸಾಧ್ಯವಾದಷ್ಟು ಮಟ್ಟಿಗೆ ಅವರ ಸ್ವ ಗ್ರಾಮಗಳಿಗೆ ಕಳುಹಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿರುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.
ಶನಿವಾರ ಶ್ರಮಿಕ ರೈಲೊಂದು ಒಡಿಶಾದ 2 ಸಾವಿರ ಕೆಲಸಗಾರರನ್ನು ಕರೆದೊಯ್ಯುದಿದೆ. ಉಳಿದವರನ್ನು ತಮ್ಮೂರಿಗೆ ಕಳುಹಿಸುವುದಾಗಿ ಭರವಸೆ ನೀಡಿದ ನಂತರ ಜನದಟ್ಟಣೆ ಕಡಿಮೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತರ ರಾಜ್ಯಗಳ ವಲಸಿಗ ಕಾರ್ಮಿಕರು ರೈಲು ಪ್ರಯಾಣದ ಭರವಸೆಯೊಂದಿಗೆ ಅರಮನೆ ಮೈದಾನದ ಇತರ ದ್ವಾರಗಳ ಹೊರಗೆ ಕಾಯುತ್ತಾ ಕುಳಿತಿರುವ ದೃಶ್ಯ ಕಂಡುಬಂದಿತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ