ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಪರಿಣಾಮ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸುವಂತೆ ಕರೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಯಾರೂ ಕೊರೋನಾ ಮಾರ್ಗಸೂಚಿಗಳನ್ನು ಮರೆಯಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಸಿಎಂ ಯಡಿಯೂರಪ್ಪ ಅವರು, ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಕಾಲದ ರಾಜ್ಯೋತ್ಸವ ಆಚರಣೆ ಸರಳವಾಗಿದ್ದು, ರಾಜ್ಯವನ್ನು ಆದಷ್ಟು ಬೇಗ ವೈರಸ್'ನಿಂದ ಮುಕ್ತ ಮಾಡುವಂತೆ ತಾಯಿ ಭುವನೇಶ್ವರಿಯಲ್ಲಿ ಕೇಳಿಕೊಂಡಿದ್ದೇನೆಂದು ಹೇಳಿದರು.
ಇದೇ ವೇಳೆ ಸರಳ ರಾಜ್ಯೋತ್ಸವಕ್ಕೆ ಕರೆ ನೀಡಿದ ಯಡಿಯೂರಪ್ಪ ಅವರು, ಯಾರೂ ಕೊರೋನಾ ಮಾರ್ಗಸೂಚಿಗಳನ್ನು ಮರೆಯದಂತೆ ಮನವಿ ಮಾಡಿಕೊಂಡಿದ್ದಾರೆ.
Advertisement