ಬೆಂಗಳೂರು: ಕುಖ್ಯಾತ ರೌಡಿ ಬಾಂಬೆ ಸಲೀಂ ಪತ್ನಿ ಜೊತೆ ಸಂಪರ್ಕ ಹೊಂದಿದ್ದ ಯುವಕನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ಪೊಲೀಸರು ನಡೆಸಿದ ತನಿಖೆಯಲ್ಲಿ ಆರು ತಿಂಗಳ ಬಳಿಕ ಘಟನೆ ಬಹಿರಂಗವಾಗಿದೆ. ಕಳೆದ ಮಾರ್ಚ್ 15ರಂದು ನಡೆದ ಕೊಲೆ ಪ್ರಕರಣದ ಆರೋಪಿ ಬಾಂಬೆ ಸಲೀಂ ಎಂದು ಪತ್ತೆಯಾಗಿದ್ದು, ಈತ ಉತ್ತರ ಪ್ರದೇಶದ ಮೂಲದ ಯುವಕ ಪೃಥ್ವಿರಾಜ್ ನನ್ನು ಕೊಲೆ ಮಾಡಿರುವುದು ಖಚಿತವಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಂಬೆ ಸಲೀಂ ಈಗಾಗಲೇ ತಲಘಟ್ಟಪುರ ಪೊಲೀಸ್ ಠಾಣಾ ವ್ತಾಪ್ತಿಯ ಬಾಬು ಕೊಲೆ ಪ್ರಕರಣದಲ್ಲಿ ಪರಪ್ಪನ ಆಗ್ರಹಾರ ಜೈಲು ಸೇರಿದ್ದಾನೆ. ಕೃತ್ಯದಲ್ಲಿ ಭಾಗಿಯಾದ ಬಾಗೇಪಲ್ಲಿಯ ನಾರಾಯಣಸ್ವಾಮಿ, ಚೇತನ್ ಕುಮಾರ್, ವಿನೋದ್, ಬಾಲಚಂದ್ರ ಎಂಬವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಕಾರು, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಉತ್ತರ ಪ್ರದೇಶ ಮೂಲದ ಯುವಕ ಪೃಥ್ವಿರಾಜ್, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಾಂಬೆ ಸಲೀಂ ಜೈಲಿನಲ್ಲಿದ್ದು, ಆತನ ಪತ್ನಿ ಸಖೀನಾ ಪೃಥ್ವಿರಾಜ್ ಜೊತೆ ಚಾಟಿಂಗ್ ಮಾಡುತ್ತಿದ್ದಳು.
ಜೈಲಿನಿಂದ ಜಾಮೀನಿನ ಮೇಲೆ ಹೊರಬಂದ ಸಲೀಂ ಇದನ್ನು ಗಮನಿಸಿ ಪತ್ನಿ ಬಳಿ ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದು, ಸಂಚು ಮಾಡಿ ಮಾರ್ಚ್ ೧೫ ರಂದು ಪತ್ನಿ ಸಖೀನಾ ಮೂಲಕವೇ ಪ್ರಥ್ವಿರಾಜ್ಗೆ ಕರೆ ಮಾಡಿಸಿ, ತಾನು ಕಾರಿನಲ್ಲಿ ಚಾಲಕನ ಜೊತೆ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದು, ನೀನು ಬಾ ಎಂದು ಪೃಥ್ವಿರಾಜ್ಗೆ ಹೇಳಿಸಿದ್ದರು.
ಪತ್ನಿ ಭುಜದ ಮೇಲೆ ಕೈಹಾಕಿದ್ದ
ಸಖೀನಾ ಮಾತು ಕೇಳಿ ಬಂದ ಪೃಥ್ವಿರಾಜ್, ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಹತ್ತಿ ಸಖೀನಾ ಮೇಲೆ ಕೈ ಹಾಕಿ ಕೂತಿದ್ದ. ಆದರೆ ಅದೇ ಕಾರಿನಲ್ಲಿ ಚಾಲಕನಾಗಿ ಸಖೀನಾ ಪತಿ ಬಾಂಬೆ ಸಲೀಂ ಬಂದಿದ್ದ. ಇದು ಪ್ರಥ್ವಿರಾಜ್ಗೆ ತಿಳಿದಿರಲಿಲ್ಲ. ಮೊದಲೇ ಸಂಚು ಮಾಡಿದಂತೆ ಬಾಂಬೆ ಸಲೀಂ ತನ್ನ ಪತ್ನಿಯನ್ನು ವಾಪಸ್ ಕಳುಹಿಸಿ, ಬಾಗೇಪಲ್ಲಿಯ ತನ್ನ ನಾಲ್ವರು ಸಹಚರರ ಜೊತೆ ಪೃಥ್ವಿರಾಜ್ ನನ್ನ ಕರೆದುಕೊಂಡು ಹೋಗಿ ಚಿತ್ರಾವತಿ ಡ್ಯಾಂ ಬಳಿಯ ನಿರ್ಜನ ಪ್ರದೇಶದಲ್ಲಿ ಮಾರ್ಚ್ ೧೫ರ ರಾತ್ರಿ ಡ್ರ್ಯಾಗರ್ ಹಾಗೂ ಮಾರಕಾಸ್ತ್ರ ಗಳಿಂದ ಮನಸ್ಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಿದ್ದರು.
ಮಾರ್ಚ್ ೧೬ರ ಬೆಳಗ್ಗೆ ವಿಷಯ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬಾಗೇಪಲ್ಲಿ ಸಿಪಿಐ, ಅಂದಿನ ಪ್ರಭಾರ ಎಸ್ಪಿ ಜಾಹ್ನವಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಟ್ಯಾಟೂ ಗುರು ಪ್ರೀತ್
ಮೃತ ಯುವಕನ ಕೈ ಮೇಲೆ ಇದ್ದ ಟ್ಯಾಟೂ ಗುರು ಪ್ರೀತ್ ಅನ್ನುವ ಗುರುತುಗಳು ಬಿಟ್ಟರೆ ಮೃತನ ಹೆಸರು, ವಿಳಾಸ ಯಾವುದು ತಿಳಿದುಬಂದಿರದಿದ್ದರಿಂದ ಕಳೆದ ೬ ತಿಂಗಳಿಂದ ಪ್ರಕರಣ ಬೇಧಿಸಲಾಗಿರಲಿಲ್ಲ ಮತ್ತು ಪೊಲೀಸರಿಗೂ ಇದು ಸವಾಲಾಗಿತ್ತು.
ರಹಸ್ಯ ಬಯಲಾಗಿದ್ದು ಹೇಗೆ?
ಕೊಲೆ ಮಾಡಿದ್ದ ಆರೋಪಿಗಳಲ್ಲಿ ಇಬ್ಬರು ಬಾಗೇಪಲ್ಲಿಯ ಡಾಬಾ ಬಳಿ ಊಟ ಮಾಡುತ್ತ ಬಾಂಬೆ ಸಲೀಂ ಅಣ್ಣ ಎಲ್ಲಿ ಅಣ್ಣನಿಗೆ ಬೇಲ್ ಸಿಗುತ್ತಾ, ಇಲ್ವಾ? ಏನು ಎಂದು ಮಾತನಾಡಿದ್ದಾರೆ. ಇದೇ ವೇಳೆ ನಾವು ಬಚಾವ್ ಆದೆವು, ಕೊಲೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿಲ್ಲ ಎಂದು ಮಾತನಾಡುತ್ತಿದ್ದರು. ಇದನ್ನು ಕೇಳಿಸಿಕೊಂಡ ಮಾರುವೇಷದಲ್ಲಿದ್ದ ಪೊಲೀಸರು ವಿಷಯ ತಿಳಿದು ಸಿಪಿಐ ಗಮನಕ್ಕೆ ತಂದು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಕೊಲೆ ಪ್ರಕರಣದಲ್ಲಿ ಬಾಂಬೆ ಸಲೀಂ ಪತ್ನಿ ಸಖೀನಾ ಪಾತ್ರದ ಬಗ್ಗೆ ಕರೆಸಿ ಹೆಚ್ಚಿನ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಇತ್ತ ಯುವಕ ಸತ್ತು ಆರು ತಿಂಗಳು ಕಳೆದರೂ ಕುಟುಂಬಸ್ಥರಿಗೆ ಮಾಹಿತಿಯೇ ಇರಲಿಲ್ಲ. ಕಾಣೆಯಾಗಿರುವ ಕುರಿತು ದೂರು ನೀಡಿ ಸುಮ್ಮನಾಗಿದ್ದರು ಎಂದು ತಿಳಿದುಬಂದಿದೆ.
Advertisement