ಕೋರಮಂಗಲ ಎಲಿವೇಟೆಡ್ ರಸ್ತೆ ಕಾಮಗಾರಿ ಪರಿಶೀಲಿಸಿದ ಬಿಬಿಎಂಪಿ ಆಯುಕ್ತ
ಬೆಂಗಳೂರು: ಕೋರಮಂಗಲ 100 ಅಡಿ ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈಜಿಪುರ ಸಿಗ್ನಲ್ ನಿಂದ ಕೇಂದ್ರೀಯ ಸದನ ಜಂಕ್ಷ್ ವರೆಗೆ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ಬಿಬಿಎಂಪಿಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು ಶುಕ್ರವಾರ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೂ.203 ಕೋಟಿ ವೆಚ್ಚದಲ್ಲಿ ಉದ್ದದ ಮೇಲ್ಸೇತುವೆ ನಿರ್ಮಾಮ ಮಾಡಲಾಗುತ್ತಿದೆ. ಈಗಾಗಲೇ ಶೇ.45ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಶೇ.32ರಷ್ಟು ಹಣವನ್ನು ಗುತ್ತಿಗೆದಾರರಿಗೆ ಬಿಡುಗಡೆಗೊಳಿಸಲಾಗಿದೆ. ಉಳಿದ ಮೊತ್ತವನ್ನು ಬಿಡುಗಡೆಗೊಳಿಸಲು ಕ್ರಮವಹಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು ಸೇಂಟ್ ಜಾನ್ಸ್ ಸಂಶೋಧನಾ ಕಾಲೇಜಿನ ಬಳಿ ಒಂದು ರ್ಯಾಂಪ್ ಬರಲಿದ್ದು, ಜಾಗ ನೀಡುವಂತೆ ಸೇಂಟ್ ಜಾನ್ಸ್ ಕಾಲೇಜಿಗೆ ಕೋರಲಾಗಿತ್ತು. ಆದರೆ, ಇದೂವರೆಗೆ ಜಾಗವನ್ನು ಹಸ್ತಾಂತರ ಮಾಡಿಲ್ಲ. ಈ ಸಂಬಂಧ ಸೇಂಟ್ ಜಾನ್ಸ್ ಮುಖ್ಯಸ್ಥರ ಜೊತೆ ಸಭೆ ನಡೆಸಿ ಜಾಗ ಪಡೆದು ಕಾಮಗಾರಿಗೆ ವೇಗ ನೀಡಲಾಗುವುದು ಎಂದು ತಿಳಿಸಿದರು.
ಮೇಲ್ಸೇತುವೆಗೆ ಒಟ್ಟು 81 ಕಂಬಗಳು ಬರಲಿದ್ದು, ಈಗಾಗಲೇ 67 ಕಂಬಗಳನ್ನು ನಿರ್ಮಿಸಲಾಗಿದೆ. ಮೇಲ್ಸೇತುವೆ ಮಾರ್ಗದಲ್ಲಿ 7 ಜಂಕ್ಷನ್ ಗಳು ಬರಲಿದ್ದು, 4 ರ್ಯಾಂಪ್ ನಿರ್ಮಿಸಲಾಗುವುದು. ರಸ್ತೆಯ ಎರಡು ಬದಿಯಲ್ಲಿ ತಲಾ 2 ಪಥಗಳು ಬರಲಿವೆ. ಮೇಲ್ಸೇವುತೆ ಮಾರ್ಗದಲ್ಲಿ 25 ಮರಗಳನ್ನು ಸ್ಥಲಾಂತರಿಸಲಾಗುವುದು. ಜೊತೆಗೆ ರಸ್ತೆ ಮಾರ್ಗದಲ್ಲಿ ಬರುವ 83 ಮರಗಳಲ್ಲಿ ರೆಂಬೆ-ಕೊಂಬೆಗಳನ್ನು ಕಟಾವು ಮಾಡಲಾಗುವುದು ಎಂದು ವಿವರಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ