ಮೈಸೂರು: ರೈತ ಮುಖಂಡರು ಕರೆ ನೀಡಿರುವ ಕರ್ನಾಟಕ ಬಂದ್ ರಾಜಕೀಯ ಪ್ರೇರಿತ ಎಂಬ ಸಚಿವ ಸೋಮಶೇಖರ್ ಅವರ ಹೇಳಿಕೆಗೆ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಬಂದ್'ಗೆ ರೈತರು ಕರೆ ಕೊಟ್ಟಿಲ್ಲ. ಕೆಲವು ಸಂಘಟನೆಗಳು ಬಂದ್'ಗೆ ಕರೆ ಕೊಟ್ಟಿವೆ. ಇದಕ್ಕೆ ರೈತರ ಬೆಂಬಲ ಇಲ್ಲ. ಆದರೆ, ರೈತರ ಹೆಸರಿನಲ್ಲಿ ಕೆಲ ಸಂಘಟನೆಗಳು ರಾಜಕೀಯ ಮಾಡುತ್ತಿವೆ ಎಂದು ಸಚಿವ ಎಸ್'ಟಿ ಸೋಮಶೇಖರ್ ಅವರು ಹೇಳಿಕೆ ನೀಡಿತ್ತು.
ಸಿದ್ಧಾರ್ಥನಗರದಲ್ಲಿರುವ ಹೊಸ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ದಸರಾ ಕುರಿತು ಪೂರ್ವ ಸಿದ್ಧತಾ ಸಭೆ ನಿಗದಿಯಾಗಿತ್ತು. ಈ ವಿಚಾರ ತಿಳಿದ ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿಯವರು ಅಲ್ಲಿಗೆ ಧಾವಿಸಿ ದಿಢೀರ್ ಪ್ರತಿಭಟನೆ ನಡೆಸಿ ಘೇರಾವ್ ಹಾಕಲು ಯತ್ನಿಸಿದರು.
ಈ ವೇಳೆ ರೈತ ಮುಖಂಡರು, ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಲವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
Advertisement