ಬೆಂಗಳೂರು: ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿನ ಪಾರ್ಕಿಂಗ್ ಗುತ್ತಿಗೆ ಅವಧಿ ಮುಗಿದಿದ್ದು, ಗುತ್ತಿಗೆಯನ್ನು ಹೊಸದಾಗಿ ಇನ್ನೂ ಯಾರಿಗೂ ನೀಡಿಲ್ಲ. ಇದರಿಂದಾಗಿ ಇಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ಕೆಲಸಕ್ಕೆ ತೆರಳುವ ನೂರಾರು ಮೆಟ್ರೋ ಪ್ರಯಾಣಿಕರಲ್ಲಿ ಆತಂಕ ಮನೆಮಾಡಿದೆ.
ಉಚಿತ ದರದಲ್ಲಿ ಪ್ರಯಾಣಿಕರ ವಾಹನಗಳ ನಿಲುಗಡೆಗೆ ಅವಕಾಶ ನೀಡಿರುವುದರಿಂದ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಪಾರ್ಕಿಂಗ್ ಗಾರ್ಡ್ ಗಳಿಲ್ಲ, ಸಿಸಿಟಿವಿ ವ್ಯವಸ್ಥೆಗಳಿಲ್ಲದಿರುವುದರಿಂದ ಇಲ್ಲಿ ಉಚಿತವಾಗಿ ಪಾರ್ಕಿಂಗ್ ಮಾಡುವವರು ತಮ್ಮ ವಾಹನಗಳಿಗೇ ಏನಾದರೂ ಆದರೆ ತಾವೇ ಜವಬ್ದಾರರಾಗಿರುತ್ತಾರೆಂದು ಅಧಿಕಾರಿಗಳು ಬೋರ್ಡ್ ವೊಂದನ್ನು ಹಾಕಿ ಕೈತೊಳೆದುಕೊಳ್ಳುವ ಕೆಲಸ ಮಾಡಿದ್ದಾರೆ.
ಕಳೆದ ಸೆಪ್ಟಂಬರ್ 7 ರಿಂದಲೂ ಇಲ್ಲಿನ ಪರಿಸ್ಥಿತಿ ಇದೇ ರೀತಿ ಇದ್ದು, ಪ್ರಯಾಣಿಕರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.
ಹೊಸಕೋಟೆಯಿಂದ ಬೆಂಗಳೂರಿಗೆ ಆಗಾಗ ಕೆಲಸ ಮೇರೆಗೆ ಬರುವ ಉದ್ಯಮಿ ಇ ಕಿಶೋರ್ ಎಂಬುವವರು ಮಾತನಾಡಿ, ಪ್ರತೀನಿತ್ಯ ಇಲ್ಲಿ ಬೈಕ್ ಪಾರ್ಕ್ ಮಾಡಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ತೆರಳುತ್ತೇನೆ. ಈ ಸ್ಥಳದಲ್ಲಿ ಕೆಲ ಯುವಕರ ಗುಂಪೊಂದು ಓಡಾಡಿಕೊಂಡು ಇರುತ್ತಾರೆ. ಅವರನ್ನು ನೋಡಿದರೆ ಸಮಾಜಘಾತುಕರಂತೆ ಕಾಣುತ್ತಾರೆಂದು ಹೇಳಿದ್ದಾರೆ.
ವಿದ್ಯಾರ್ಥಿ ದೇವ್ ಆಶಿಶ್ ಎಂಬುವವರು ಮಾತನಾಡಿ, ಮೆಟ್ರೋ ನಿಲ್ದಾಮದ ಬಳಿಕ ಬೈಕ್ ಪಾರ್ಕ್ ಮಾಡುವುದು ಅಭದ್ರತೆಯನ್ನು ಕಾಡುತ್ತದೆ. ಇಲ್ಲಿ ಯಾವುದೇ ರೀತಿಯ ಸಿಸಿಟಿವಿ ಕ್ಯಾಮೆರಾಗಳಿಲ್ಲ. ನಮ್ಮ ವಾಹನಕ್ಕೆ ಏನಾದರೂ ಆದರೆ, ನಾವು ಯಾರನ್ನು ಕೇಳಬೇಕು? ಎಂದು ಪ್ರಶ್ನಿಸಿದ್ದಾರೆ.
ರಾಕೇಶ್ ಶರ್ಮಾ ಎಂಬುವವರು ಮಾತನಾಡಿ, ನನಗಿಲ್ಲಿ ಉಚಿತವಾಗಿ ಕಾರು ಪಾರ್ಕಿಂಗ್ ಮಾಡಲು ದೊಡ್ಡ ಜಾಗ ದೊರೆಯುತ್ತಿದೆ. ಪ್ರತೀನಿತ್ಯ ನಾನು ಜಯನಗರಕ್ಕೆ ಮೆಟ್ರೋದಲ್ಲಿ ಹೋಗುತ್ತಿರುತ್ತೇನೆ. ಇದೇ ರೀತಿ ಮುಂದುವರೆಯಲಿ ಎಂದು ಆಶಿಸುತ್ತೇನೆಂದು ತಿಳಿಸಿದ್ದಾರೆ.
ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಎಂಆರ್'ಸಿಎಲ್'ನ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯ ಅಧಿಕಾರಿ ಬಿ.ಎಲ್.ಯಶವಂತ ಚಾವಣ್ ಅವರು, ಈ ಹಿಂದೆ ನೀಡಿದ್ದ ಗುತ್ತಿಗೆ ಅವಧಿ ಪೂರ್ಣಗೊಂಡಿದೆ. ಶೀಘ್ರದಲ್ಲೇ ಹೊಸಬರಿಗೆ ಹೊಸದಾಗಿ ಗುತ್ತಿಗೆಯನ್ನು ನೀಡಲಾಗುತ್ತದೆ ಎಂದಿದ್ದಾರೆ.
Advertisement