15 ದಿನದಲ್ಲಿ ಸರ್ಕಾರಿ ಡಿಪ್ಲೊಮಾ, ಪಾಲಿಟೆಕ್ನಿಕ್, ಚಿತ್ರಕಲಾ ಸಿಬ್ಬಂದಿಗಳಿಗೆ ವೇತನ: ಸರ್ಕಾರದ ಭರವಸೆ

ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಹಾಗೂ ಖಾಸಗಿ ಅನುದಾನಿತ ಚಿತ್ರಕಲಾ ಮಹಾವಿದ್ಯಾಲಯಗಳ ಅತಿಥಿ ಉಪನ್ಯಾಸಕರಿಗೆ, ಸಿಬ್ಬಂದಿಗಳ ಬಾಕಿ ವೇತನವನ್ನು ಇನ್ನು 15 ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಮೇಲ್ಮನೆಯ ಸದನಕ್ಕೆ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್
ವಿಧಾನ ಪರಿಷತ್

ಬೆಂಗಳೂರು: ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಹಾಗೂ ಖಾಸಗಿ ಅನುದಾನಿತ ಚಿತ್ರಕಲಾ ಮಹಾವಿದ್ಯಾಲಯಗಳ ಅತಿಥಿ ಉಪನ್ಯಾಸಕರಿಗೆ, ಸಿಬ್ಬಂದಿಗಳ ಬಾಕಿ ವೇತನವನ್ನು ಇನ್ನು 15 ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಮೇಲ್ಮನೆಯ ಸದನಕ್ಕೆ ಭರವಸೆ ನೀಡಿದ್ದಾರೆ.
 
ಶೂನ್ಯ ವೇಳೆಯಲ್ಲಿ  ಬಿಜೆಪಿಯ ಎಸ್.ವಿ ಸಂಕನೂರು, ರಾಜ್ಯದ ನೂರಾರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಅರೆಕಾಲಿಕ ಉಪನ್ಯಾಸಕರಿಗೆ ಕಳೆದೊಂದು ವರ್ಷದಿಂದ ವೇತನ ಬಿಡುಗಡೆಯಾಗದೇ ಸಿಬ್ಬಂದಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ವೇತನ ಪಾವತಿಯಾಗದೇ ಅವರೆಲ್ಲ ಮಾನಸಿಕ ಹಿಂಸೆಗೊಳಗಾದ್ದರಿಂದ ವಿದ್ಯಾರ್ಥಿಗಳಿಗೆ ಸರಿಯಾಗಿ ಬೋಧನೆ ಮಾಡಲಾಗುತ್ತಿಲ್ಲ. ತಕ್ಷಣವೇ ವೇತನ ಬಿಡುಗಡೆ ಮಾಡಬೇಕೆಂದು ಸಂಕನೂರು ಒತ್ತಾಯಿಸಿದರು.

ತಕ್ಷಣ ವೇತನ ಬಿಡುಗಡೆ ಮಾಡಬೇಕು, ಹೊರಗುತ್ತಿಗೆ ಆಧಾರದಲ್ಲಿ‌ ನೇಮಕಗೊಂಡಿರುವ ಡಿ ದರ್ಜೆ ನೌಕರರ ವೇತನವೂ ಇದೇ ಆಗಿದೆ, ಚಿತ್ರಕಲಾ‌ ಮಹಾವಿದ್ಯಾಲದ ಉಪನ್ಯಾಸಕರ ವೇತನ ಕೂಡ ಬಿಡುಗಡೆ ಮಾಡಬೇಕು ಎಂದು ಸದನಕ್ಕೆ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್, ಸರ್ಕಾರಿ‌ ಡಿಪ್ಲೊಮಾ ಕಾಲೇಜು, ಚಿತ್ರಕಲಾ ವಿದ್ಯಾಲಯ ಅತಿಥಿ ಉಪನ್ಯಾಸಕರಿಗೆ ತಾಂತ್ರಿಕ ಕಾರಣದಿಂದ ವೇತನ ಕೊಡಲು‌ ಸಾಧ್ಯವಾಗಿಲ್ಲ, ತಕ್ಷಣ ವೇತನ ಕೊಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸಚಿವರ ಉತ್ತರಕ್ಕೆ ತೃಪ್ತರಾಗದ ಪ್ರತಿಪಕ್ಷ ಸದಸ್ಯರು, ತಾಂತ್ರಿಕ ಕಾರಣ‌ ಎಂದರೇನು? ಎಂದು ವಿವರಿಸುವಂತೆ ಒತ್ತಾಯಿಸಿದರು.

ಆಗ ಜೆಡಿಎಸ್.ನ ಭೋಜೇಗೌಡ ತಾಂತ್ರಿಕ‌ ಕಾರಣ ಎಂದರೇನು? ಆರ್ಥಿಕ ನಷ್ಟವೇ ಎಂದರು. ಇದಕ್ಕೆ ತೃಪ್ತರಾಗದ ವಿಪಕ್ಷ ಸದಸ್ಯರು ಸಮರ್ಪಕ ಕಾರಣ ಮತ್ತು ಉತ್ತರಕ್ಕೆಆಗ್ರಹಿಸಿ, ಯಾವಾಗ ಸಂಬಳ ಕೊಡುತ್ತೀರಿ ಎಂದು ನಿಖರವಾಗಿ ಹೇಳುವಂತೆ ಸದನದಲ್ಲಿ ಒತ್ತಾಯ ಮಾಡಿ‌ ಗದ್ದಲ ಎಬ್ಬಿಸಿದರು. ಆಗ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಚರ್ಚೆಗೆ ಅವಕಾಶವಿಲ್ಲ ಎಂದರು.
ಯಾವುದೇ ಸಿಬ್ಬಂದಿ ಯಾವುದೇ ಆಗ ಜೆಡಿಎಸ್ ಹಿರಿಯ ಸದಸ್ಯ ಹೊರಟ್ಟಿ ಹಾಗೂ ವಿಪಕ್ಷ‌ ನಾಯಕ ಎಸ್.ಆರ್.ಪಾಟೀಲ್, ಇವರು ಶಿಕ್ಷಕರಿಗೆ ಸಂಬಂಳ ಕೊಡುವುದಿಲ್ಲ ಎಂದರೆ ಏನು ಅರ್ಥ. ಕಳೆದ ಆರು ತಿಂಗಳಿಂದ ಆಗದ್ದು ಇನ್ನು ಹದಿನೈದು ದಿನಗಳ ಒಳಗೆ ಆಗುತ್ತದೆಯೇ? ನಿಮಗೆ ಎಂತಹ ಸ್ಥಿತಿ ಬಂತಪ್ಪ ಎಂದು ಬಿಜೆಪಿಗರನ್ನು ಲೇವಡಿ ಮಾಡಿದರು.

ಪ್ರತಿಪಕ್ಷ ಸದಸ್ಯರ ಒತ್ತಾಯಕ್ಕೆ ಮಣಿದ  ಉನ್ನತ ಶಿಕ್ಷಣ ಸಚಿವ  ಡಾ.ಅಶ್ವತ್ಥನಾರಾಯಣ್,‌ ಯಾವುದೇ ಇಲಾಖೆಯಲ್ಲಿದ್ದರೂ ಸಂಬಳ ಕೊಡಬೇಕಾದುದು ಪ್ರಮುಖ ವಿಚಾರ‌. ಖಂಡಿತ ಇನ್ನು ಹದಿನೈದು ದಿನಗಳ ಒಳಗೆ  ಸಂಪೂರ್ಣ ಸಂಬಳ ಕೊಡಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com