ಚಾಮರಾಜನಗರ: ಜೂ.25 ರಂದು ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಕೊಲೆಯಾಗಿದ್ದ ಪ್ರಾಧಿಕಾರದ ನೌಕರನ ಕೊಲೆ ಪ್ರಕರಣಕ್ಕೆ ಪತ್ನಿಯ ಹಳೇ ಪ್ರೇಮಕಥೆಯೇ ಕಾರಣ ಎಂದು ತಿಳಿದುಬಂದಿದೆ.
ಈ ಕುರಿತು ಪತ್ರಿಕೆಗೆ ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದು, ಮೃತ ಮಹಾದೇವ ಪ್ರಸಾದ್ನ ಪತ್ನಿ ಅನಿತಾ ಎಂಬಾಕೆ ಮದುವೆಗೆ ಮುನ್ನ ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ಯುವಕನೋರ್ವನೊಂದಿಗೆ ಇರಿಸಿಕೊಂಡಿದ್ದ ಪ್ರೇಮವನ್ನು ಮುಂದುವರೆಸಿದ್ದು ಪತಿಯ ಸಾವಿಗೆ ಕಾರಣವಾಗಿದೆ.
ಏನಿದು ಪ್ರಕರಣ:
ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾವೇರಿ ಪಂಪ್ ಹೌಸ್ನಲ್ಲಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಹಾದೇವಪ್ರಸಾದ್ ನಂಜನಗೂಡು ತಾಲೂಕಿನ ತೆಳ್ಳೂರು ಗ್ರಾಮದ ಅನಿತಾ ಎಂಬಾಕೆಯನ್ನು ವಿವಾಹ ಮಾಡಿಕೊಂಡಿದ್ದರು. ಆದರೆ, ಅನಿತಾ ಅದಾಗಲೇ ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ಬಸವಣ್ಣ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ.
ವಿವಾಹದ ಬಳಿಕವೂ ಮುಂದುವರೆದಿದ್ದ ಇವರ ಪ್ರೇಮಪುರಾಣ ಪತಿ ಮಹಾದೇವಪ್ರಸಾದ್ಗೆ ತಿಳಿದಿದ್ದರಿಂದ ಕಸಿವಿಸಿಗೊಂಡ ಅನಿತಾ ಪತಿಯನ್ನು ಹತ್ಯೆ ಮಾಡಿ ಬಸವಣ್ಣನೊಂದಿಗೆ ಜೀವನ ಸಾಗಿಸಲು ನಿಶ್ಚಯಿಸಿದ್ದಳು. ಪತಿಯನ್ನು ತನ್ನೂರಿಗೆ ಬರುವಂತೆ ಹೇಳಿ ಮಹದೇಶ್ವರ ಬೆಟ್ಟದ ತಾಳಬೆಟ್ಟದಲ್ಲಿ ಪ್ರಿಯಕರನಿಂದ ಕೊಲೆ ಮಾಡಿಸಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊಲೆ ಮಾಡಿದ ಪ್ರಿಯಕರ ಬಸವಣ್ಣನಿಗೆ ಶರತ್ ಎಂಬಾತನೂ, ಸಾಥ್ ನೀಡಿರುವುದಾಗಿ ತಿಳಿದುಬಂದಿದೆ. ಅನಿತಾಳನ್ನು ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿದ್ದು ತನಿಖೆ ಕೈಗೊಂಡಿದ್ದಾರೆ. ಉಳಿದ ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ವರದಿ: ಗುಳಿಪುರ ನಂದೀಶ
Advertisement