ಮೈಸೂರು: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ವೇಳೆ, ಕಾರ್ಮಿಕರಿಲ್ಲದೆ ಮಕ್ಕಳನ್ನು ದಿನಗೂಲಿ ಕಾರ್ಮಿಕರಾಗಿ ದುಡಿಸಿಕೊಂಡ ಆಘಾತಕಾರಿ ಪ್ರಕರಣಗಳು ವರದಿಯಾಗಿವೆ.
ಮೈಸೂರಿನಲ್ಲಿ ಶೇ. 26 ರಷ್ಟು ಬಾಲಕರು, ಧಾರವಾಡದಲ್ಲಿ ಶೇ, 29( ಶೇ. 9 ಬಾಲಕಿಯರನ್ನು ಒಳಗೊಂಡಂತೆ) ಮತ್ತು ಬೆಂಗಳೂರಿನಲ್ಲಿ ಶೇ. 13 (ಶೇ.4 ಹುಡುಗಿಯರು ಸೇರಿದಂತೆ) ಲಾಕ್ಡೌನ್ ಅವಧಿಯಲ್ಲಿ(ಮಾರ್ಚ್ನಿಂದ ಜೂನ್ವರೆಗೆ) ದಿನ ಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುವ ಮಕ್ಕಳು ಪ್ರೌಢಶಾಲಾ ವಿದ್ಯಾರ್ಥಿಗಳಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಲಾಕ್ಡೌನ್ ಪರಿಣಾಮ ಮಾರ್ಚ್ನಿಂದ ವಿದ್ಯಾರ್ಥಿಗಳ ಎಲ್ಲಾ ಕಲಿಕಾ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಕೊವಿಡ್-19 ಸನ್ನಿವೇಶದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಗ್ರಹಿಕೆಗಳನ್ನು ಅರ್ಥಮಾಡಿಕೊಳ್ಳಲು ಸ್ವಾಮಿ ವಿವೇಕಾನಂದ ಯುವ ಚಳವಳಿ(ಎಸ್ವಿವೈಎಂ) ಶಾಲಾ ಶಿಕ್ಷಣ ಕಾರ್ಯಕ್ರಮ ಈ ಸಮೀಕ್ಷೆ ನಡೆಸಿದೆ.
ಜೂನ್ ಕೊನೆಯ ವಾರದಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಬೆಂಗಳೂರು, ಧಾರವಾಡ ಮತ್ತು ಮೈಸೂರು ಜಿಲ್ಲೆಗಳಲ್ಲಿ 1572 ವಿದ್ಯಾರ್ಥಿಗಳು, 452 ಶಿಕ್ಷಕರು ಮತ್ತು 770 ಪೋಷಕರನ್ನು ಸಂದರ್ಶಿಸಿಲಾಗಿದೆ.
“ಶಾಲೆಗಳನ್ನು ಮುಚ್ಚಿವುದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಪೋಷಕರು ಭಾವಿಸಿದ್ದಾರೆ ಮತ್ತು ಕೆಲವು ಪೋಷಕರು ತಮ್ಮ ಮಕ್ಕಳು ಶಿಕ್ಷಣ ಅರ್ಧಕ್ಕೆ ನಿಲ್ಲಿಸಬಹುದು ಅಥವಾ ‘ಕೆಟ್ಟ’ಅಭ್ಯಾಸಕ್ಕೆ ಒಳಗಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ, 53% ಪೋಷಕರು ಈ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ” ಎಂದು ಎಸ್ವಿವೈಎಂನ ಉಪ ಸಿಇಒ ಮತ್ತು ಮುಖ್ಯಸ್ಥ ಎಸ್.ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
Advertisement