ಬೆಂಗಳೂರು: ಟಿಕೆಟ್ ಬದಲಿಗೆ ಪಾಸ್ ವಿತರಿಸಿ ಪ್ರಯಾಣಿಕರಿಂದ ಭಾರೀ ವಿರೋಧ ಹಾಗೂ ಟೀಕೆ ಎದುರಿಸಿದ ಬಿಎಂಟಿಸಿ, ಪಾಸ್ ವ್ಯವಸ್ಥೆ ನಿಲ್ಲಿಸಿ ಇದೀಗ ಮತ್ತೆ ಟಿಕೆಟ್ ನೀಡುವ ವ್ಯವಸ್ಥೆಯನ್ನು ಮುಂದುವರೆಸಲು ನಿರ್ಧರಿಸಿದೆ.
ಕೊರೋನಾ ಸೋಂಕು ಕಾರಣ ಮುಂದಿಟ್ಟುಕೊಂಡ ಬಿಎಂಟಿಸಿ ಟಿಕೆಟ್ ವ್ಯವಸ್ಥೆ ಸ್ಥಗಿತಗೊಳಿಸಿ ಪಾಸ್ ವ್ಯವಸ್ಥೆಯನ್ನು ಜಾರಿ ಮಾಡಿತ್ತು. ಇದಕ್ಕೆ ಪ್ರಯಾಣಿಕರಿಂದ ತೀವ್ರ ವಿರೋಧಗಳು ವ್ಯಕ್ತವಾಗಿತ್ತಲ್ಲದೇ, ಪ್ರಯಾಣಿಕರ ಸಂಖ್ಯೆ ಕೂಡ ಭಾರೀ ಸಂಖ್ಯೆಯಲ್ಲಿ ಇಳಿಕೆ ಕಂಡಿತ್ತು.
ಕೆಎಸ್ಆರ್ಟಿಸಿಯಲ್ಲಿ ಟಿಕೆಟ್ ನೀಡುವುದರಿಂದ ಬಾರದ ಕೊರೋನಾ ಬಿಎಂಟಿಸಿಯಲ್ಲಿ ಹೇಗೆ ಬರುತ್ತದೆ. ಟಿಕೆಟ್ ಹಾಗೂ ಪಾಸ್ ಕಾಗದದಿಂದಲೇ ತಯಾರಾಗುತ್ತದೆ. ಟಿಕೆಟ್ ನಿಂದ ಕೊರೋನಾ ಬರುವುದಾದರೆ ಪಾಸ್ ನಿಂದಲೂ ಬರಬೇಕು ಅಲ್ಲವೇ ಎಂದು ಪ್ರಯಾಣಿಕರು ಬಿಎಂಟಿಸಿ ಅಧಿಕಾರಿಗಳನ್ನು ಪ್ರಶ್ನಿಸಿದ್ದರು.
ಈ ಎಲ್ಲಾ ಟೀಕೆ ಹಾಗೂ ವಿರೋಧದ ಬೆನ್ನಲ್ಲೇ ಇದೀಗ ಬಿಎಂಟಿಸಿ ಪಾಸ್ ವ್ಯವಸ್ಥೆ ನಿಲ್ಲಿಸಿ, ಟಿಕೆಟ್ ವ್ಯವಸ್ಥೆಯನ್ನೇ ಮತ್ತೆ ಮುಂದುರೆಸಲು ಮುಂದಾಗಿದೆ.
ಹೆಚ್ಚು ಬಸ್ ಗಳನ್ನು ಬಿಡುವ ಯಾವುದೇ ಯೋಜನಗೆಳಿಲ್ಲ. ಎಂದಿನಂತೆ ಬಸ್ ಟಿಕೆಟ್ ದರ ರೂ.5 ರಿಂದ ರೂ.15 ಹಾಗೂ ಅದಕ್ಕೂ ಹೆಚ್ಚಿನ ದರದಲ್ಲಿಯೇ ಮುಂದುವರೆಯಲಿದೆ. ಚಿಲ್ಲರೆ ಕೊಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಸ್ ವಿತರಿಸಲಾಗಿತ್ತಷ್ಟೇ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
Advertisement