ಬಾಗಲಕೋಟೆ: ನೂರಾರು ಕಾರ್ಯಕ್ರಮಗಳ ಮೂಲಕ ಸಮಾಜದ ಪ್ರತಿ ರಂಗದಲ್ಲೂ ತನ್ನನ್ನು ತೊಡಗಿಸಿಕೊಂಡಿರುವ ಎಂಆರ್ಎನ್ (ನಿರಾಣಿ) ಪೌಂಡೇಶನ್ ಇದೀಗ ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಉದ್ಯೋಗ ವಂಚಿತರಾಗಿ ವಾಪಸ್ಸಾಗಿರುವ ಸ್ಥಳೀಯ ಪ್ರತಿಭೆಗಳ ಅರ್ಹತೆಗೆ ತಕ್ಕಂತೆ ಉದ್ಯೋಗ ಸೃಷ್ಟಿಸಲು ಮುಂದಾಗಿದೆ.
ಮಹಾಮಾರಿ ಕೊರೋನಾ ದಾಳಿಯಿಂದಾಗಿ ವಿಶ್ವವೇ ತತ್ತರಿಸಿ ಹೋಗಿದ್ದು, ಉದ್ಯೋಗಕ್ಕಾಗಿ ದೇಶದಲ್ಲಿನ ನಾನಾ ರಾಜ್ಯಗಳು ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಿಗೆ ವಲಸೆ ಹೋಗಿದ್ದ ಜಿಲ್ಲೆಯ ಸಾವಿರಾರು ಜನ ಇಂದು ಕೊರೋನಾದಿಂದಾಗಿ ಉದ್ಯೋಗ ಕಳೆದುಕೊಂಡು, ಇರುವ ಉದ್ಯೋಗ ತ್ಯಜಿಸಿ ಸ್ವಗ್ರಾಮಗಳಿಗೆ ವಾಪಸ್ಸಾಗುತ್ತಿದ್ದಾರೆ.
ಹೀಗೆ ವಾಪಸ್ಸಾದವರಲ್ಲಿ ಬಹುತೇಕರು ಸ್ಥಳೀಯವಾಗಿಯೇ ಉಳಿದುಕೊಂಡು ಇಲ್ಲಿಯೇ ಉದ್ಯೋಗ ಹುಡುಕುವ ಪ್ರಯತ್ನದಲ್ಲಿದ್ದಾರೆ. ಈಗಾಗಲೇ ಸಾಕಷ್ಟು ಜನ ಯುವಕರು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಇನ್ನೂ ಕೆಲವರು ತಮ್ಮ ಮನೆ ಕೆಲಸ ಮುಂದುವರಿಸಲು ಮನಸ್ಸು ಮಾಡಿದ್ದಾರೆ. ಜತೆಗೆ ಅನೇಕರು ಸ್ಥಳೀಯವಾಗಿಯೇ ಇರುವ ಕೈಗಾರಿಕೆ ವಲಯದಲ್ಲಿ ಕೆಲಸ ಮಾಡಲು ಮನಸ್ಸು ಮಾಡಿದ್ದಾರೆ. ಆದರೆ ಸ್ಥಳೀಯವಾಗಿ ಉದ್ಯೋಗ ಸಿಗುವುದು ಕಷ್ಟ ಎನ್ನುತ್ತಿರುವ ವೇಳೆ ಎಂ.ಆರ್.ಎನ್ (ನಿರಾಣಿ) ಪೌಂಡೇಶನ್ ಉದ್ಯೋಗ ವಂಚಿತರಾಗಿ ಸ್ವಗ್ರಾಮಗಳಿಗೆ ವಾಪಸ್ಸಾಗಿರುವ ಪ್ರತಿಭೆಗಳಿಗೆ ಅವರ ಅರ್ಹತೆಗೆ ಅನುಸಾರ ಉದ್ಯೋಗ ಸೃಷ್ಟಿಗೆ ಮನಸ್ಸು ಮಾಡಿದೆ.
ಎಂ.ಆರ್.ಎನ್(ನಿರಾಣಿ) ಪೌಂಡೇಶನ್ ಸಕ್ಕರೆ, ಸಿಮೆಂಟ್, ಶಿಕ್ಷಣ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಯುವಕರಿಗೆ ಉದ್ಯೋಗ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ.
ಕೊರೋನಾ ಮಾರಕ ವೈರಸ್ನಿಂದಾಗಿ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಪೌಂಡೇಶನ್ ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದ ನೆರೆ ರಾಜ್ಯಗಳ ಯುವಕರು ಉದ್ಯೋಗ ಬಿಟ್ಟು ವಾಪಸ್ಸಾಗಿದ್ದಾರೆ. ಜನತೆ ಅನೇಕ ಕ್ಷೇತ್ರದಲ್ಲಿ ಯುವಕರ ಅಗತ್ಯವಿದೆ. ಕೊರೋನಾ ಹಾವಳಿಯಿಂದಾಗಿ ಉದ್ಯೋಗ ವಂಚಿತರಾಗಿ, ಉದ್ಯೋಗ ಬಿಟ್ಟು ಗ್ರಾಮಗಳಿಗೆ ವಾಪಸ್ಸಾಗಿರುವ ಯುವಕರಿಗೆ ಅವರ ಅರ್ಹತೆಗೆ ಅನುಗುಣವಾಗಿ ಉದ್ಯೋಗ ಕಲ್ಪಿಸಲು ಫೌಂಡೇಶನ್ ಗಂಭೀರವಾಗಿ ಚಿಂತನೆ ನಡೆಸಿದೆ ಎಂದು ಪೌಂಡೇಶನ್ನ ನಿರ್ದೇಶಕರಲ್ಲೊಬ್ಬರಾದ ಮೇಲ್ಮನೆ ಸದಸ್ಯ ಎಚ್.ಆರ್. ನಿರಾಣಿ ಮಾಧ್ಯಮಗಳಿಗೆ ವಿವರಿಸಿದ್ದಾರೆ.
ಎಂಆರ್ಎನ್ ಪೌಂಡೇಶನ್ನ ಈ ನಿರ್ದಾರದಿಂದ ಉದ್ಯೋಗ ವಂಚಿತರಾಗಿ ದೇಶ ಮತ್ತು ವಿದೇಶಗಳಿಂದ ಜಿಲ್ಲೆಯಲ್ಲಿನ ಸ್ವಗ್ರಾಮಗಳಿಗೆ ವಾಪಸ್ಸಾಗಿರುವ ಯುವ ಪ್ರತಿಭೆಗಳು ನಿಟ್ಟುಸಿರು ಬಿಡುವಂತಾಗಿದೆ. ನದಿಯಲ್ಲಿ ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿ ಆಸರೆ ಎನ್ನುವಂತೆ ಕೊರೋನಾ ಮಹಾಮಾರಿಯಿಂದ ತತ್ತರಿಸಿ ಬದುಕೆ ದುರ್ಬರವಾಗಿರುವ ಸನ್ನಿವೇಶದಲ್ಲಿ ಅರ್ಹತೆಗೆ ತಕ್ಕಂತೆ ಉದ್ಯೋಗ ಕಲ್ಪಿಸಲು ಮುಂದಾಗಿರುವ ಎಂಆರ್ಎನ್ ಪೌಂಡೇಶನ್ ಚಿಂತನೆಗೆ ಈಗಾಗಲೇ ವ್ಯಾಪಕ ಶ್ಲಾಘನೆ ವ್ಯಕ್ತ ವಾಗುತ್ತಿದೆ. ಕೊರೋನಾದಿಂದಾಗಿ ಜಿಲ್ಲೆಯ ಸ್ವಗ್ರಾಮಗಳಿಗೆ ವಾಪಸ್ಸಾಗಿರುವ ಯುವಕರಲ್ಲಿ ಬಹುತೇಕರಿಗೆ ಉದ್ಯೋಗ ಕಲ್ಪಿಸುವ ಸಾಮರ್ಥ್ಯ ಹೊಂದಿರುವ ಪೌಂಡೇಶನ್ ಕೆಲವರಿಗಾದರೂ ಉದ್ಯೋಗಾವಕಾಶ ಕಲ್ಪಿಸಿದಲ್ಲಿ ಪೌಂಡೇಶನ್ ಚಿಂತನೆ ಅಷ್ಟರ ಮಟ್ಟಿಗೆ ಸಾರ್ಥಕವಾಗಲಿದೆ. ಹೊಟ್ಟೆ ತುಂಬ ಸಿಗದಿದ್ದರೂ ಸ್ವಗ್ರಾಮದಲ್ಲಿ ಒಪ್ಪತ್ತಿನ ಗಂಜಿಗಾದರೂ ತೊಂದರೆ ಇಲ್ಲವಲ್ಲ ಎನ್ನುವಂತಾಗಲಿದೆ.
ಎಂಆರ್ಎನ್ ಪೌಂಡೇಶನ್ ಚಿಂತನೆಯಂತೆ ಜಿಲ್ಲೆಯಲ್ಲಿನ ಇತರ ಕೈಗಾರಿಕೆಗಳು, ಶೈಕ್ಷಣಿಕ ಸಂಸ್ಥೆಗಳು ಉದ್ಯೋಗ ಸೃಷ್ಟಿಗೆ ಮುಂದಾದಲ್ಲಿ ಕೊರೋನಾದಿಂದ ಉದ್ಯೋಗ ವಂಚಿತರಾಗಿ ದೇಶ,ವಿದೇಶಗಳಿಂದ ವಾಪಸ್ಸಾಗಿರುವ ಜಿಲ್ಲೆಯ ಬಹುತೇಕ ಯುವ ಪ್ರತಿಭೆಗಳಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎನ್ನುವ ಅಭಿಪ್ರಾಯ ವ್ಯಾಪಕವಾಗಿದೆ.
ಎಂಆರ್ಎನ್ ಪೌಂಡೇಶನ್ ಈಗಾಗಲೇ ಮಹಾಮಾರಿ ಕೊರೋನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಜನತೆಯ ನೆರವಿಗೆ ಮುಂದಾಗಿದೆ. ಬೀಳಗಿ ಕ್ಷೇತ್ರದಲ್ಲಿ 25 ಸಾವಿರ ಮಾಸ್ಕ್ಗಳನ್ನು ವಿತರಿಸಿದೆ. 9500 ಜನ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದೆ. ಅಲೆಮಾರಿ ಕುಟುಂಬಳಿಗೆ ಬಟ್ಟೆ,ಹಾಸಿಗೆ ಹೊದಿಕೆಗಳನ್ನು ನೀಡಿದೆ. 263 ಬೂತ್ಗಳಿಗೆ ಪ್ರತಿ ಬೂತ್ಗಳಿಗೆ 20 ಲೀಟರ್ ಸೆನಿಟೈಸರ್ ನೀಡಿದೆ. ರೈತರ ಉತ್ಪನ್ನಗಳನ್ನು ಖರೀದಿಸಿ ವಿತರಿಸಿದೆ.
ವರದಿ: ವಿಠ್ಠಲ ಆರ್. ಬಲಕುಂದಿ
Advertisement