ಗದಗದಲ್ಲಿ ಇಳಿದ ಕೊರೋನಾ ಅಬ್ಬರ: 28 ದಿನಗಳಲ್ಲಿ ಒಂದೂ ಸಾವಿಲ್ಲ!

ಗದಗ ಜಿಲ್ಲೆಯಲ್ಲಿ ದಿನ ಕಳೆಯುತ್ತಿದ್ದಂತೆ ಕೊರೋನಾ ಮಹಾಮಾರಿ ಆರ್ಭಟ ಇಳಿಯುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿದೆ. ಕಳೆದ 28 ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಕೊರೋನಾ ಸಾವುಗಳೂ ದಾಖಲಾಗಿಲ್ಲ. ಕೊನೆಯ ಕೋವಿಡ್-19 ಸಾವು ಅಕ್ಟೋಬರ್ 17 ರಂದು ವರದಿಯಾಗಿತ್ತು.
ಕೊರೋನಾ ಕುರಿತು ಜಾಗೃತಿ ಮೂಡಿಸಲು ವಾಹನ
ಕೊರೋನಾ ಕುರಿತು ಜಾಗೃತಿ ಮೂಡಿಸಲು ವಾಹನ

ಗದಗ: ಗದಗ ಜಿಲ್ಲೆಯಲ್ಲಿ ದಿನ ಕಳೆಯುತ್ತಿದ್ದಂತೆ ಕೊರೋನಾ ಮಹಾಮಾರಿ ಆರ್ಭಟ ಇಳಿಯುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿದೆ. ಕಳೆದ 28 ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಕೊರೋನಾ ಸಾವುಗಳೂ ದಾಖಲಾಗಿಲ್ಲ. ಕೊನೆಯ ಕೋವಿಡ್-19 ಸಾವು ಅಕ್ಟೋಬರ್ 17 ರಂದು ವರದಿಯಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ಕೊರೋನಾ ಸೋಂಕಿಗೊಳಗಾದವರ ಒಂದೂ ಸಾವು ಸಂಭವಿಸಿಲ್ಲ.

ಅಷ್ಟೆ ಅಲ್ಲ. ಒಟ್ಟು ಕೋವಿಡ್ 19 ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ ಜಿಲ್ಲೆಯಲ್ಲಿ 100 ಕ್ಕಿಂತ ಕಡಿಮೆಯಾಗಿದೆ. ಭಾನುವಾರ ಮಧ್ಯಾಹ್ನದ ಹೊತ್ತಿಗೆ ಆಸ್ಪತ್ರೆಗಳಲ್ಲಿ 92 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆಂದು ವರದಿಗಳು ತಿಳಿಸಿವೆ. 

ಸೋಂಕಿತನ್ನು ಶೀಘ್ರಗತಿಯಲ್ಲಿ ಪತ್ತೆ ಹಚ್ಚಿ ಸಮಯಕ್ಕೆ ಸರಿಯಾಗಿ ವೈದ್ಯರ ತಂಡ ಹಾಗೂ ಕೊರೋನಾ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಚಿಕಿತ್ಸೆ ನೀಡುತ್ತಿರುವುದರಿಂದ ಸಾವು ಹಾಗೂ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. 

ಜಿಲ್ಲೆಯಲ್ಲಿನ ಈ ಬೆಳವಣಿಗೆಯು ಜನರಲ್ಲಿ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಿದೆ. ಕೊರೋನಾ ಇಳಿಯುತ್ತಿದೆ ಎಂದು ಹೆಚ್ಚೆಚ್ಚು ಜನರು ಮಾಸ್ಕ್ ಗಳನ್ನು ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಪ್ರಕರಣಗಳನ್ನೋು ನಿಯಂತ್ರಣಕ್ಕೆ ತರಲು ಹಾಗೂ ಸಾವು ಪ್ರಕರಣಗಳನ್ನು ಕಡಿಮೆ ಮಾಡಲು ಜನರು ನಿಯಮ ಪಾಲನೆ ಮಾಡುವುದು ಅತ್ಯಂತ ಅಗತ್ಯವಾಗಿದೆ. ಇದಕ್ಕಾಗಿ ಜಿಲ್ಲಾಡಳಿವು ಶೀಘ್ರದಲ್ಲಿಯೇ ಜಿಲ್ಲೆಯಾದ್ಯಂತ ಬೃಹತ್ ಜಾಗೃತಿ ಅಭಿಯಾನವನ್ನು ಕೈಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಸರ್ಕಾರವು ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಎಲ್ಇಡಿ ವಾಹನಗಳಿಂದ ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 

ಜಿಲ್ಲೆಗೆ ಇಲಾಖೆಯ ಎರಡು ವಾಹನಗಳು ಆಗಮಿಸಲಿದ್ದು, ಜಿಲ್ಲೆಯ 153 ಗ್ರಾಪಂ ವ್ಯಾಪ್ತಿಯ 180 ಗ್ರಾಮಗಳಿಗೆ, 7 ತಾಲೂಕುಗಳ 9 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ 25 ಸಿಹೆಚ್'ಸಿ ಮತ್ತು ಪಿಹೆಚ್'ಸಿಗಳಲ್ಲಿ ವಾಹನಗಳು ಸಂಚರಿಸಲಿವೆ. ಗ್ರಾಮೀಣ ಭಾಗದ ಜನರು ಆರೋಗ್ಯದ ಹಿತದೃಷ್ಟಿಯಿಂದ ಜಾಗೃತಿ ವಾಹನಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿಯವರು ಹೇಳಿದ್ದಾರೆ. 

ಶ್ರವ್ಯ-ದೃಶ್ಯ ಮಾಧ್ಯಮದ ಮೂಲಕ ಬೃಹತ್ ಎಲ್ಇಡಿ ಪರದೆ ಹೊಂದಿರುವ ಮೊಬೈಲ್ ವಾಹನಗಳನ್ನು ಬಳಸಿಕೊಂಡು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸಾರ್ವಜನಿಕರ ಹಿತದೃಷ್ಟಿಯಿಂದ ವಿಶೇಷ ಜಾಗೃತಿ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com