ಚಾಮರಾಜನಗರ: ನೆಚ್ಚಿನ ಶಿಕ್ಷಕರು ಬಡ್ತಿ ಹೊಂದಿ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಚಂದಾ ಎತ್ತಿ ಭರ್ಜರಿ ಬೀಳ್ಕೊಡುಗೆ ನೀಡಿದ್ದು ಗುರು ಮತ್ತು ಶಿಷ್ಯರ ನಡುವಿನ ಹೃದಯಸ್ಪರ್ಶಿ ಸಂಬಂಧಕ್ಕೆ ಸಾಕ್ಷಿಯಾದ ಘಟನೆ ಕಳೆದ ಭಾನುವಾರ ಜಿಲ್ಲೆಯಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ರಂಗೂಪೂರ ಪ್ರಾಥಮಿಕ ಶಾಲೆಯ ಶಿಕ್ಷಕ ಲೋಕೇಶ್ ದೊಡ್ಡಹುಂಡಿ ಅವರು ಬಡ್ತಿ ಹೊಂದಿ ಚಿಕ್ಕಾಟಿ ಪ್ರೌಢಶಾಲೆಗೆ ವರ್ಗವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಹಳೇಯ ವಿದ್ಯಾರ್ಥಿಗಳು ಸೇರಿ ಶಿಕ್ಷಕ ಲೋಕೇಶ್ ಅವರನ್ನು ಗ್ರಾಮದ ತುಂಬಾ ಮಂಗಳವಾದ್ಯ ಸಮೇತ ಮೆರವಣಿಗೆ ಮಾಡಿದ್ದಾರೆ. ಈ ವೇಳೆ, ವಿದ್ಯಾರ್ಥಿಗಳು ಪುಷ್ಪವೃಷ್ಟಿಯನ್ನೇ ಸುರಿಸಿದ್ದಾರೆ.
ಇಷ್ಟೇ ಅಲ್ಲದೇ ಊರ ಜನರಿಗೆ ಪಾಯಸದ ಊಟ ಹಾಕಿಸಿ ಶಿಕ್ಷಕನಿಗೆ 15 ಸಾವಿರ ರೂ. ಗೂ ಹೆಚ್ಚು ಮೌಲ್ಯದ ಗಣಪತಿಯ ಬೆಳ್ಳಿ ಮೂರ್ತಿಯನ್ನು ಉಡುಗೊರೆ ನೀಡಿದ್ದಾರೆ. ಸಮಾರಂಭಕ್ಕೆ ಅಂದಾಜು 80 ಸಾವಿರ ರೂ. ಖರ್ಚಾಗಿದೆ ಎಂದು ತಿಳಿದುಬಂದಿದೆ. ಗ್ರಾಮಸ್ಥರ ನೆನಪಿನಲ್ಲಿ ಉಳಿಯಲೆಂದು ಶಿಕ್ಷಕ ಲೋಕೇಶ್ ಅವರು ಗ್ರಾಮದ ಪ್ರತಿ ಮನೆಗೇ ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್ ಇಟ್ಟುಕೊಳ್ಳುವಂತ ಫೈಲ್ ವೊಂದನ್ನು ಉಡುಗೊರೆಯಾಗಿ ನೀಡಿ ಗಮನ ಸೆಳೆದಿದ್ದಾರೆ.
ವರ್ಗಾವಣೆಯಾದ ಶಿಕ್ಷಕ ಲೋಕೇಶ್ ಗ್ರಾಮದಲ್ಲಿ 21 ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದು ಯಾವ ಕಾನ್ವೆಂಟಿಗೂ ಕಡಿಮೆಯಿಲ್ಲದಂತೆ ಶಾಲಾಭಿವೃದ್ಧಿ ಮಾಡಿದ್ದರು. ಸರ್ಕಾರ ಅಧಿಕಾರಿಗಳ ಮಕ್ಕಳು, ಶಿಕ್ಷಕರ ಮಕ್ಕಳು ಕೂಡ ರಂಗೂಪುರ ಶಾಲೆಯಲ್ಲಿ ಕಲಿಯಲು ಮುಗಿ ಬೀಳುವಂತೆ ಶಿಕ್ಷಕ ಲೋಕೇಶ್ ಕಾರ್ಯನಿರ್ವಹಿಸಿದ್ದರು.
ವರದಿ: ಗುಳಿಪುರ ನಂದೀಶ
Advertisement