ಬಳ್ಳಾರಿ: ಬಳ್ಳಾರಿಯ ಹಂಪಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್ ಪಾರ್ಕ್ ಉತ್ತರ ಕರ್ನಾಟಕ ವಲಯಕ್ಕೆ ತನ್ನ ಸೇವೆಗಳನ್ನು ವಿಸ್ತರಿಸಲು ಸಜ್ಜಾಗಿದೆ. ಹಂಪಿ ಮೃಗಾಲಯ ಎಂದು ಹೆಸರಾಗಿರುವ ಇಲ್ಲಿ ಚಿರತೆ, ಕರಡಿಗಳು, ಮತ್ತಿತರ ವನ್ಯಜೀವಿಗಳ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರವಾಗಿದೆ.
ಈ ಪಾರ್ಕಿನ ಆವರಣದಲ್ಲಿ ಪಶುವೈದ್ಯಕೀಯ ಆಸ್ಪತ್ರೆ ಸ್ಥಾಪಿಸಲು ಮೈಸೂರು ಮೃಗಾಲಯ ನೆರವು ನೀಡಿದ ಒಂದು ತಿಂಗಳ ನಂತರ ಈ ಬೆಳವಣಿಗೆಯಾಗಿದೆ.ವನ್ಯಜೀವಿ ಮತ್ತು ಮನುಷ್ಯರ ನಡುವಿನ ಸಂಘರ್ಷವನ್ನು ತಗ್ಗಿಸಲು ನೆರವು ನೀಡುವುದು ಈ ರಕ್ಷಣಾ ಕೇಂದ್ರದ ಗುರಿಯಾಗಿದೆ. ಅಲ್ಲದೇ, ಕಲ್ಯಾಣ ಕರ್ನಾಟಕ ಪ್ರದೇಶದ ಯಾವುದೇ ರೀತಿಯ ವನ್ಯಜೀವಿಗಳಿಗೆ ರಕ್ಷಣೆ ಒದಗಿಸುವ ಅತ್ಯಾಧುನಿಕ ಸೌಲಭ್ಯಗಳನ್ನು ಸಹ ಹೊಂದಿದೆ.
80 ಲಕ್ಷ ರೂ. ವೆಚ್ಚದಲ್ಲಿ ಸಂರಕ್ಷಣಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಬೆಂಗಳೂರು, ಮೈಸೂರು ನಂತರ ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಇಂತಹ ಸೌಕರ್ಯವಿರಲಿದೆ. ಇಲ್ಲಿ ಗಾಯಗೊಂಡ ವನ್ಯಜೀವಿಗಳಿಗೆ ಚಿಕಿತ್ಸೆ ಕೂಡಾ ನೀಡಲಾಗುವುದು.
ನೂತನ ಸಂರಕ್ಷಣಾ ಕೇಂದ್ರದಿಂದ ಮಾನವ ಮತ್ತು ವನ್ಯಜೀವಿಗಳ ನಡುವಣ ಸಂಘರ್ಷ ಪ್ರಮಾಣ ಕಡಿಮೆಯಾಗಲಿದೆ. ವನ್ಯಜೀವಿಗಳನ್ನು ಸಂರಕ್ಷಿಸಲು ಇದರಿಂದ ಸಹಾಯವಾಗಲಿದೆ ಎಂದು ಹಂಪಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎನ್. ಕಿರಣ್ ಹೇಳಿದರು.
ಬಲ್ಲಾರಿ ಮೃಗಾಲಯದಲ್ಲಿ ಪ್ರಸ್ತುತ ಇತರ ಪ್ರಾಣಿಗಳಲ್ಲದೆ ಬಿಳಿ ಹುಲಿ ಮತ್ತು ಸಿಂಹಗಳಿವೆ. ಮೃಗಾಲಯದ ಆವರಣದಲ್ಲಿ ರಕ್ಷಣಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು, ಸೌಲಭ್ಯಕ್ಕಾಗಿ ಪ್ರತ್ಯೇಕ ಸಿಬ್ಬಂದಿ ಇರುತ್ತಾರೆ.
ಮನುಷ್ಯರಿರುವ ಪ್ರದೇಶದಲ್ಲಿ ಚಿರತೆ ಮತ್ತು ಕರಡಿಗಳು ಗಾಯಗೊಳ್ಳುವುದು ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಸಂರಕ್ಷಣೆ ಕೇಂದ್ರ ಮಹತ್ವದ ಪಾತ್ರ ನಿರ್ವಹಿಸಲಿದೆ. ಮನುಷ್ಯರ ಜೊತೆಗೆ ವನ್ಯಜೀವಿಗಳ ಸಂಘರ್ಷ ನಿಯಂತ್ರಿಸುವಲ್ಲಿ ಇದರಿಂದ ನೆರವಾಗಲಿದೆ ಎಂದು ಬಳ್ಳಾರಿಯ ವನ್ಯಜೀವಿ ತಜ್ಞರೊಬ್ಬರು ಅಭಿಪ್ರಾಯಪಟ್ಟರು.
Advertisement