ಕೊಪ್ಪಳ: ಮಹಾಮಾರಿ ಕೊರೋನಾ ದೇಶದ ಪ್ರತೀ ಕ್ಷೇತ್ರವನ್ನೂ ನಲುಗಿ ಹೋಗುವಂತೆ ಮಾಡಿದೆ. ಪ್ರಮುಖವಾಗಿ ಮಕ್ಕಳಿಗೆ ವಿದ್ಯೆ, ಬುದ್ಧಿ ಹೇಳಿಕೊಡುವಂತಹ ಶಿಕ್ಷಕರ ಪಾಡಂತೂ ಹೇಳತೀರದಾಗಿದೆ. ಶಾಲೆಗಳು ಆರಂಭವಾಗದ ಕಾರಣ ವೇತನವಿಲ್ಲದೆ ಶಿಕ್ಷಕರು ಜೀವನ ನಡೆಸಲು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
22 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ದುಡಿದು, ಸಾಕಷ್ಟು ಮಕ್ಕಳಿಗೆ ವಿದ್ಯೆ ನೀಡಿ ಉನ್ನತ ಮಟ್ಟಕ್ಕೇರುವಂತೆ ಮಾಡಿ, ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ಅತ್ಯುತ್ತಮ ಶಿಕ್ಷಕ ಎಂಬ ಹೆಗ್ಗಳಿಕೆಯನ್ನೂ ಪಡೆದಿರುವ ಇಲ್ಲಿನ ಶಿಕ್ಷಕರೊಬ್ಬರು ಟೀ ಅಂಗಡಿ ತೆರೆದು ಜೀವನ ನಡೆಸುತ್ತಿದ್ದಾರೆ.
ಕರ್ನೂಲ್ನ ಕಟ್ಟಮಂಚಿ ರಾಮಲಿಂಗರೆಡ್ಡಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದ ವೇಣುಗೋಪಾಲ್ ಎಂಬುವವರು ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಕೃಷ್ಣನಗರ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಚಹಾ ಅಂಗಡಿ ಆರಂಭಿಸಿ, ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
1994ರಿಂದಲೇ ಶಿಕ್ಷಕರಾಗಿ ಸೇವೆ ಸಲ್ಲಿಸಲು ಆರಂಭಿಸಿದ್ದ ವೇಣುಗೋಪಾಲ್ ಅವರು, ಬೆಥಮ್ಚೆರ್ಲಾದ ಪ್ರಸಿದ್ಧ ಸಂಸ್ಥೆಯಾದ ಪೆಂಡೆಕಂತಿ ಪಬ್ಲಿಕ್ ಶಾಲೆಯಲ್ಲಿ ಮೊದಲು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ನಂತರ 1998 ರಲ್ಲಿ ಕ್ಯಾಟಮಂಚಿ ರಾಮಲಿಂಗ ರೆಡ್ಡಿ ವಸತಿ ಶಾಲೆಯಲ್ಲಿ ಜೀವಶಾಸ್ತ್ರ ಶಿಕ್ಷಕರಾಗಿ ಸೇರ್ಪಡೆಗೊಂಡಿದ್ದರು. ಇದಾದ ಬಳಿಕ ಇದೇ ಶಾಲೆಯಲ್ಲಿಯೇ ಪ್ರಾಂಶುಪಾಲರೂ ಆಗಿದ್ದರು.
ಕೊರೋನಾ ಸಾಂಕ್ರಾಮಿಕ ರೋಗ ಪರಿಣಾಮ ಕಡಿಮೆ ವೇತನ ಪಡೆದು ಕೆಲಸ ಮಾಡುವಂತೆ ಹಾಗೂ ಇತರೆ ಒತ್ತಡಗಳನ್ನು ಶಾಲಾ ಆಡಳಿತ ಮಂಡಳಿ ಹೇರಿದ್ದು ಪರಿಣಾಮ ವೇಣುಗೋಪಾಲ್ ಅವರು ಮನಸ್ಸಿಲ್ಲದ ಮನಸ್ಸಿನಲ್ಲಿ ಕೆಲಸ ಬಿಡುವಂತೆ ಮಾಡಿತ್ತು. ಮೇ ತಿಂಗಳವರೆಗೂ ಶಾಲೆಯಲ್ಲಿ ವೇಣುಗೋಪಾಲ್ ಅವರು ಕಾರ್ಯನಿರ್ವಹಿಸಿದ್ದು, ಶಾಲೆ ಬಿಡುವ ವೇಳೆ ಕೇವಲ ಅರ್ಧದಷ್ಟು ವೇತನವನ್ನು ಮಾತ್ರ ನೀಡಲಾಗಿದೆ. ಮುಂದಿನ ದಿನಗಳ ಜೀವನ ನಡೆಸುವುದು ಹೇಗೆ ಎಂಬ ಆತಂಕ ಈ ವೇಳೆ ವೇಣುಗೋಪಾಲ್ ಅವರಿಗೆ ಶುರುವಾಗಿದೆ.
ಈ ಸಂದರ್ಭದಲ್ಲಿ ನನ್ನ ಪತ್ನಿ ಚಿಲ್ಲರೆ ಅಂಗಡಿ ಅಥವಾ ಔಷಧಿ ಮಳಿಗೆ ತೆರೆಯುವಂತೆ ನನ್ನ ಪತ್ನಿ ಸಲಹೆ ನೀಡಿದ್ದರು. ಆದರೆ, ಇದಕ್ಕೆಲ್ಲಾ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಬೇಕಾಗುತ್ತದೆ. ಅದು ನನಗೆ ಸಾಧ್ಯವಿಲ್ಲವೆಂದು ತಿಳಿದು ಟೀ ಅಂಗಡಿ ತೆರೆಯಲು ನಿರ್ಧರಿಸಿದ್ದೆ ಎಂದು ವೇಣುಗೋಪಾಲ್ ಅವರು ಹೇಳಿದ್ದಾರೆ.
ಅಂಗಡಿ ಆರಂಭಿಸಲು ನನ್ನ ಸ್ನೇಹಿತನಿಂದ ರೂ.1 ಲಕ್ಷ ಸಾಲ ಪಡೆದುಕೊಂಡಿದ್ದೆ. ಆಗಸ್ಟ್ ಮೊದಲ ವಾರದಲ್ಲೇ ಅಂಗಡಿ ಪ್ರಾರಂಭಿಸಿದೆ. ಸ್ಕೂಲ್ ಮಾಸ್ಟರ್ ನಿಂದ ಇದೀಗ ನಾನು ಟೀ ಮಾಸ್ಟರ್ ಆಗಿದ್ದೇನೆ. ಪ್ರತೀನಿತ್ಯ ರೂ.500-600ರವರೆಗೂ ಸಂಪಾದನೆ ಮಾಡುತ್ತಿದ್ದೇನೆಂದು ತಿಳಿಸಿದ್ದಾರೆ.
Advertisement