ಮೈಸೂರು: ಸರ್ಕಾರದ 3,666 ಎಕರೆ ಭೂಮಿಯನ್ನು ಮನಸೋ ಇಚ್ಛೆ ಬೆಲೆಗೆ ಜಿಂದಾಲ್ ಗ್ರೂಪ್ ಗೆ ಸಂಪೂರ್ಣವಾಗಿ ಮಾರಾಟ ಮಾಡುವ ನಿರ್ಧಾರವನ್ನು ಬಿಜೆಪಿ ನಾಯಕ ಎ ಎಚ್ ವಿಶ್ವನಾಥ್ ವಿರೋಧಿಸಿದ್ದು ಸಚಿವ ಸಂಪುಟ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ ತೀರ್ಮಾನಕ್ಕೆ ಅನುಮೋದನೆ ನೀಡಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆಯಬೇಕು ಎಂದು ಸಚಿವರನ್ನು ವಿಶ್ವನಾಥ್ ಅವರು ಒತ್ತಾಯಿಸಿದ್ದು ಹಲವರ ಹುಬ್ಬೇರುವಂತೆ ಮಾಡಿದೆ. ಸರ್ಕಾರದ ತರಾತುರಿ ನಿರ್ಧಾರ ಹಲವರನ್ನು ಸಂಶಯಕ್ಕೀಡುಮಾಡಿದೆ.
ಪ್ರತಿ ಎಕರೆಗೆ 1.7 ಲಕ್ಷ ರೂಪಾಯಿಗಳೆಂದು ಕೈಗೆ ಸಿಕ್ಕಿದ ಬೆಲೆಗೆ ಏಕೆ ಒಬ್ಬ ಉದ್ಯಮಿಗೆ ಸರ್ಕಾರ ಮಾರಾಟ ಮಾಡುತ್ತಿದೆ, 1995ರ ಮಾರ್ಗಸೂಚಿ ಪ್ರಕಾರ ಮಾರುಕಟ್ಟೆ ಬೆಲೆಯೇ 70 ಲಕ್ಷ ರೂಪಾಯಿಗಳಿದೆ. ಈ ಬಗ್ಗೆ ಮುಖ್ಯಮಂತ್ರಿಗಳನ್ನು ಸಚಿವ ಸಂಪುಟ ಸದಸ್ಯರು ಏಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಕೇಳಿರುವ ಬಿಜೆಪಿ ನಾಯಕ ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಸರ್ಕಾರ ಜಂಟಿ ಶಾಸನ ಸಮಿತಿಯನ್ನು ರಚಿಸಿ ಅದು ಭೂಮಿಯ ಬಳಕೆ, ಜಿಂದಾಲ್ ಕಂಪೆನಿಯಿಂದ ಸರ್ಕಾರಕ್ಕೆ ಬರಬೇಕಾದ ಬಾಕಿ ಮೊತ್ತ ಮತ್ತು ಜಿಂದಾಲ್ ಮತ್ತು ಸರ್ಕಾರದ ನಡುವೆ ಆದ ಒಪ್ಪಂದ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಬೇಕು ಎಂದು ಒತ್ತಾಯಿಸಿದ್ದಾರೆ.
Advertisement