5 ಜಿಲ್ಲೆಗಳ 26 ಕ್ರೈಂ ಎಕ್ಸ್​​ಪರ್ಟ್​ಗಳ ತನಿಖೆ, ಬಾಲಾಪರಾಧಿ ಸೇರಿ ಐವರ ಬಂಧನ: ಗ್ಯಾಂಗ್ ರೇಪ್ ಆರೋಪಿಗಳ ಪತ್ತೆಯೇ ರೋಚಕ!

ಇಡೀ ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಕಾರಣವಾಗಿದ್ದ ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದು, ಪೊಲೀಸ್ ಇಲಾಖೆಗೆ ತಲೆನೋವಾಗಿದ್ದ ಈ ಪ್ರಕರಣವನ್ನು ಅಧಿಕಾರಿಗಳು ಬೇಧಿಸಿದ ಪರಿಯೇ ರೋಚಕ..
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್
Updated on

ಮೈಸೂರು: ಇಡೀ ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಕಾರಣವಾಗಿದ್ದ ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದು, ಪೊಲೀಸ್ ಇಲಾಖೆಗೆ ತಲೆನೋವಾಗಿದ್ದ ಈ ಪ್ರಕರಣವನ್ನು ಅಧಿಕಾರಿಗಳು ಬೇಧಿಸಿದ ಪರಿಯೇ ರೋಚಕ..

ಹೌದು.. ಈ ಬಗ್ಗೆ ಸ್ವತಃ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮಾಹಿತಿ ನೀಡಿದ್ದು, ಅತ್ಯಾಚಾರದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳ ಶೋಧಕ್ಕಾಗಿ ಪೊಲೀಸರು ಹರಸಾಹಸವನ್ನೇ ಪಟ್ಟಿದ್ದಾರೆ. ಈ ಕುರಿತ ವಿವರವನ್ನು ಸುದ್ದಿಗೋಷ್ಠಿಯಲ್ಲಿ ಪ್ರವೀಣ್ ಸೂದ ಅವರು ನೀಡಿದ್ದಾರೆ.

ಗ್ಯಾಂಗ್ ರೇಪ್ ಗೆ ಸಂಬಂಧಿಸಿದಂತೆ ದೂರು ದಾಖಲಾದ ಬೆನ್ನಲ್ಲೇ ಈ ಸುದ್ದಿ ಮಾಧ್ಯಮಗಳ ಮೂಲಕ ಕಾಡ್ಗಿಚ್ಚಿನಂತೆ ರಾಜ್ಯಾದ್ಯಂತ ಹಬ್ಬಿತ್ತು, ವಿಪಕ್ಷಗಳ ಟೀಕೆ, ಆಡಳಿತ ನಾಯಕರ ತಿರುಗೇಟು ಹಿನ್ನಲೆಯಲ್ಲಿ ಈ ಪ್ರಕರಣ ಸರ್ಕಾರಕ್ಕೆ ಪ್ರತಿಷ್ಠೆಯಾಗಿ ಪರಿಣಮಿಸಿತ್ತು. ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೂ ಈ ಪ್ರಕರಣ ಸವಾಲಾಗಿ ಪರಿಣಮಿಸಿತ್ತು. ಹೀಗಾಗಿ ಈ ಪ್ರಕರಣವನ್ನು ಪೊಲೀಸ್ ಇಲಾಖೆ ಸೂಚಿಸಿದ್ದ ಅವರು, ಸ್ವತಃ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ರನ್ನೇ ಅಕಾಡಕ್ಕೆ ಇಳಿಸಿ ಮೈಸೂರಿಗೆ ಕಳುಹಿಸಿದರು. ಅಲ್ಲದೆ ಪ್ರವೀಣ್ ಸೂದ್ ಅವರು ತನಿಖೆಗಾಗಿ ವಿಶೇಷ ನುರಿತ ಅಧಿಕಾರಿಗಳ ತಂಡ ರಚಿಸಿದರು.

5 ಜಿಲ್ಲೆಗಳ 26 ಕ್ರೈಂ ಎಕ್ಸ್​​ಪರ್ಟ್​ಗಳಿಂದ ಕಾರ್ಯಾಚರಣೆ
ತನಿಖೆಗಾಗಿ ಪೊಲೀಸ್​ ಇಲಾಖೆ ರಾಜ್ಯದ 5 ಜಿಲ್ಲೆಗಳಿಂದ ಅಪರಾಧ ಕೃತ್ಯಗಳ ತನಿಖೆಯಲ್ಲಿ ಪರಿಣಿತರಾದ ಪೊಲೀಸರನ್ನು ಆರಿಸಿಕೊಂಡಿದ್ದು, 26 ಪರಿಣಿತ ಅಧಿಕಾರಿಗಳನ್ನು ಒಳಗೊಂಡ ಒಂದು ತಂಡವನ್ನು ರಚಿಸಲಾಗಿತ್ತು.  ಈ ತಂಡದಲ್ಲಿ ಇನ್ಸ್ಪೆಕ್ಟರ್, ‌ಸಬ್ ಇನ್ಸ್ಪೆಕ್ಟರ್, ಪೋಲಿಸ್ ಕಾನ್ಸ್‌ಟೇಬಲ್​ ಇದ್ದಾರೆ ಎನ್ನಲಾಗಿದೆ. ದುಷ್ಕೃತ್ಯದ ಕುರಿತಾದ ತ್ವರಿತ ತನಿಖೆಗೆ ಚಾಮರಾಜನಗರ, ಮಂಡ್ಯ, ಮೈಸೂರು, ಕೊಡಗು, ಹಾಸನ ಜಿಲ್ಲೆಗಳ ಪೊಲೀಸರ ಸಹಾಯವನ್ನು ಪಡೆಯಲಾಗಿದ್ದು, ಈ ಹಿಂದೆ ದೊಡ್ಡ ದೊಡ್ಡ ಅಪರಾಧ ಪ್ರಕರಣಗಳನ್ನು ಭೇದಿಸಿದ್ದ ಪೊಲೀಸರನ್ನೇ ಆರಿಸಿ ಈ ತಂಡ ರಚಿಸಲಾಗಿದೆ. ಇದಕ್ಕಾಗಿ ಮೈಸೂರು ಜಿಲ್ಲೆಯ 7 ಪೊಲೀಸರು, ಚಾಮರಾಜನಗರ ಜಿಲ್ಲೆಯ 5 ಪೊಲೀಸರು, ಕೊಡಗು ಜಿಲ್ಲೆಯ 4 ಪೊಲೀಸರು, ಹಾಸನ ಜಿಲ್ಲೆಯ 5 ಪೊಲೀಸರು, ಮಂಡ್ಯ ಜಿಲ್ಲೆಯ 5 ಪೊಲೀಸರು ನಿಯೋಜನೆಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ವೈಜ್ಞಾನಿಕ ದಾಖಲೆಗಳ ಸಂಗ್ರಹ
ಇನ್ನು ಘಟನೆ ನಡೆಯುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು ಆರಂಭದಿಂದಲೇ ಸೂಕ್ಷ್ಮ ಸಾಕ್ಷ್ಯಗಳನ್ನು ಕಲೆಹಾಕಲು ಆರಂಭಿಸಿದ್ದರು. ಘಟನೆ ನಡೆದ ಸ್ಥಳ ಪರೀಶೀಲನೆ ವೇಳೆ ದೊರೆತ ಭೌತಿಕ ಸಾಕ್ಷ್ಯಗಳ ಜೊತೆಗೇ ವೈಜ್ಞಾನಿಕ ಸಾಕ್ಷ್ಯಗಳನ್ನೂ ಕಲೆ ಹಾಕಿದ್ದರು. ಈ ಪೈಕಿ ಶಂಕಿತರ ಮೊಬೈಲ್ ಟವರ್ ಲೊಕೇಷನ್ ಪತ್ತೆ ಕೂಡ ಸೇರಿದೆ. ಅಲ್ಲದೆ ಸ್ಥಳೀಯರು ನೀಡಿದ್ದ ಮಾಹಿತಿ ಮತ್ತು ಪೊಲೀಸರು ಕಲೆಹಾಕಿದ್ದ ಸಂತ್ರಸ್ಥರ ಹೇಳಿಕೆಗಳನ್ನು ಕ್ರೋಢೀಕರಿಸಿ ತನಿಖೆ ನಡೆಸಿ ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದರು.

ಬಾಲ ಆರೋಪಿ ಸೇರಿ, ತಮಿಳುನಾಡಿನಲ್ಲಿ ಐದು ಮಂದಿ ಬಂಧನ
ಇನ್ನು ಪೊಲೀಸರ ತನಿಖೆ ವೇಳೆ ದೊರೆತ ಸಾಕ್ಷ್ಯಾಧಾರಗಳನ್ನು ಆಧರಿಸಿ ಇದೀಗ ಪೊಲೀಸರು ಐದು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. 6 ಆರೋಪಿಗಳ ಪೈಕಿ ಓರ್ವ ತಲೆಮರೆಸಿಕೊಂಡಿದ್ದಾನೆ.  ಬಂಧಿತ ಐದೂ ಮಂದಿ ಶಂಕಿತರು ತಮಿಳುನಾಡಿನ ತಿರುಪುರ ಮೂಲದವರು ಎನ್ನಲಾಗಿದೆ. ಬಂಧಿತರೆಲ್ಲರೂ ಕೆಲಸದ ನಿಮಿತ್ತ ಆಗಾಗ ಮೈಸೂರಿಗೆ ಬಂದು ಹೋಗುತ್ತಿದ್ದರು. 7ನೇ ತರಗತಿ 8 ತರಗತಿ ಓದಿದ ಇವರೆಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ. ಡ್ರೈವರ್​, ಕಾರ್ಪೆಂಟರ್​ ಸೇರಿದಂತೆ ಬೇರೆ ಬೇರೆ ಕೆಲಸ ಮಾಡುತ್ತಿದ್ದರು. ಈ ಪೈಕಿ ಓರ್ವ ಆರೋಪಿ ಬಾಲಾಪರಾಧಿಯಾಗಿದ್ದು, ಅತನಿಗೆ 17 ವರ್ಷ ವಯಸ್ಸು ಎಂದು ಹೇಳಲಾಗಿದೆ. 

ಬಾಲಾಪರಾಧಿಯಾದರೂ ಶಿಕ್ಷೆ ಪ್ರಮಾಣ ತಗ್ಗಲ್ಲ
ಈ ಹಿಂದೆ ದೆಹಲಿಯ ನಿರ್ಭಯ ಪ್ರಕರಣದ ಬಳಿಕ ದೇಶದ ಕಾನೂನಿನಲ್ಲಿ ಕೆಲ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದ್ದು, ಹಿಂದಿನಂತೆ ಬಾಲಪರಾಧಿ ಎಂಬ ಕಾರಣಕ್ಕೆ ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಈಗ ಅಸಾಧ್ಯ ಎನ್ನಲಾಗುತ್ತಿದೆ. ಏಕೆಂದರೆ, ಬಾಲಾಪರಾಧ ಕಾಯ್ದೆಯಲ್ಲೂ ಬದಲಾವಣೆ ಆಗಿದೆ. ಗಂಭೀರ ಪ್ರಕರಣದಲ್ಲಿ 16 ವರ್ಷ ಆಗಿದ್ದರೆ ಪ್ರಧಾನ ನ್ಯಾಯಾಲಯದಲ್ಲಿಯೇ ವಿಚಾರಣೆ ಆಗಲಿದೆ. 

3ಲಕ್ಷ ರೂಗೆ ಬೇಡಿಕೆ ಇಟ್ಟಿದ್ದ ಆರೋಪಿಗಳು
ಆರೋಪಿಗಳು ತಮಿಳುನಾಡಿನಿಂದ ಮೈಸೂರಿಗೆ ಬಂದು ಹೋಗುತ್ತಿದ್ದರು. ಮೈಸೂರಿನ ಬಂಡೀಪಾಳ್ಯ ಮಾರುಕಟ್ಟೆಗೆ ಬಂದು ಹೋಗುತ್ತಿದ್ದರು. ಚಾಲಕನಾಗಿದ್ದ ಆರೋಪಿ ಆಗಾಗ ಮೈಸೂರಿಗೆ ಬಂದುಹೋಗ್ತಿದ್ದ. ಅವರೆಲ್ಲಾ ಎಲೆಕ್ಟ್ರಿಕಲ್, ಕಾರ್ಪೆಂಟಿಗ್, ಡ್ರೈವರ್​ ಕೆಲಸ ಮಾಡುತ್ತಿದ್ದರು. ಮೈಸೂರಿನಿಂದ ವಾಪಸ್ ಹೋಗುವಾಗ ಪಾರ್ಟಿ ಮಾಡುತ್ತಿದ್ದರು. ಮೈಸೂರಿನ ಹೊರವಲಯದಲ್ಲಿ ಮದ್ಯ ಸೇವಿಸಿ ಹೋಗುತ್ತಿದ್ದರು. ಅದೇ ರೀತಿ ಆಗಸ್ಟ್ 24ರಂದು ನಿರ್ಜನ ಪ್ರದೇಶದಲ್ಲಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿಗೆ ಯುವಕ, ಯುವತಿ ಹೋಗಿದ್ರು. ಜೋಡಿಯನ್ನು ದರೋಡೆ ಉದ್ದೇಶದಿಂದ 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದು ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಪ್ರಸ್ತುತ ಪೊಲೀಸ್ ತನಿಖೆ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಸಾಕಷ್ಟು ಅಂಶಗಳು ಬಯಲಾಗುವ ಸಾಧ್ಯತೆ ಇದೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com