ಸರ್ಕಾರಿ ಗೌರವಗಳೊಂದಿಗೆ ಜಾಲಪ್ಪ ಅಂತ್ಯಕ್ರಿಯೆ: ಮುಖ್ಯಮಂತ್ರಿ ಬೊಮ್ಮಾಯಿ

ಸರ್ಕಾರಿ ಗೌರವಗಳೊಂದಿಗೆ ಆರ್.ಎಲ್.ಜಾಲಪ್ಪ ಅವರ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆರ್ ಎಲ್ ಜಾಲಪ್ಪ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಿಎಂ ಬೊಮ್ಮಾಯಿ
ಆರ್ ಎಲ್ ಜಾಲಪ್ಪ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಿಎಂ ಬೊಮ್ಮಾಯಿ
Updated on

ಕೋಲಾರ: ಸರ್ಕಾರಿ ಗೌರವಗಳೊಂದಿಗೆ ಆರ್.ಎಲ್.ಜಾಲಪ್ಪ ಅವರ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಇಂದು ಕೋಲಾರದ ದೇವರಾಜ ಅರಸ್ ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ರಾಜಕಾರಣಿ ಹಾಗೂ ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಬಳಿಕ ಮಾತನಾಡಿದ ಅವರು, 'ಶಾಸಕರಾಗಿ, ಸಂಸತ್ ಸದಸ್ಯರಾಗಿ ಸಹಕಾರಿ ಹಾಗೂ ರಾಜ್ಯದ ಗೃಹ ಸಚಿವರಾಗಿ ಕೆಲಸ ಮಾಡಿದ ಅನುಭವ ಜಾಲಪ್ಪ ಅವರಿಗೆ ಇತ್ತು. ಕನ್ನಡ ಹಾಗೂ ಕರ್ನಾಟಕದ ಬಗ್ಗೆ ಅಪಾರವಾದ ತಮ್ಮದೇ ಛಾಪನ್ನು ಕರ್ನಾಟಕ ರಾಜಕಾರಣದಲ್ಲಿ ಮೂಡಿಸಿದ್ದರು. ಜಾಲಪ್ಪ ಅವರೊಬ್ಬ ಖಡಕ್ ನಾಯಕರು. ನೇರ ನುಡಿ , ಮುಲಾಜಿಲ್ಲದೆ ಸತ್ಯ ನುಡಿಯುವ ನಾಯಕರೆಂದು ಖ್ಯಾತಿ ಪಡೆದಿದ್ದರು ಎಂದರು.

ಅಂತೆಯೇ ನಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರೊಂದಿಗೆ ಜಾಲಪ್ಪನವರಿಗೆ ಬಹಳ ಆತ್ಮೀಯ ಒಡನಾಟವಿತ್ತು. ಜನತಾ ದಳದಲ್ಲಿದ್ದ ಸಂದರ್ಭದಲ್ಲಿ ನಮ್ಮ ತಂದೆಯೊಂದಿಗೆ ಬಹಳ ಗಟ್ಟಿಯಾಗಿ ನಿಂತವರು. ದೇವರಾಜ ಅರಸು ಅವರಿಗೆ ಬಹಳ ಹತ್ತಿರವಿದ್ದುದರಿಂದ ಅವರೇ ಒಬ್ಬ ಹಿಂದುಳಿದ ನಾಯಕರಾಗಬಹುದಿತ್ತು. ಆದರೆ ಹಲವಾರು ಹಿಂದುಳಿದ ವರ್ಗದ ನಾಯಕರನ್ನು ನಿಸ್ವಾರ್ಥವಾಗಿ ಬೆಳೆಸಿದ್ದಾರೆ. ತನು, ಮನ, ಧನದಿಂದ ಬೆಂಬಲ ನೀಡಿ ಬೆಳೆಸಿದ್ದಾರೆ ಎಂದರು.

*ಹಿಂದುಳಿದವರಿಗೆ ಸಮಾನವಾದ ಅವಕಾಶ*
ರಾಜ್ಯದಲ್ಲಿ ಹಿಂದುಳಿದವರಿಗೆ ಸಮಾನವಾದ ಅವಕಾಶಗಳು ದೊರಕಬೇಕೆಂದು ಆರ್.ಎಲ್ ಜಾಲಪ್ಪ ಹೋರಾಟ ಮಾಡಿದರು. ದೇವರಾಜ ಅರಸು ವೈದ್ಯಕೀಯ ಕಾಲೇಜನ್ನು ರಾಮಕೃಷ್ಣ ಹೆಗಡೆಯವರು ಮುಖ್ಯ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅವರೇ ಮುಂದೆ ಬಂದು, ಕಷ್ಟದಿಂದ ಈ ಸಂಸ್ಥೆಯನ್ನು ಕಟ್ಟಿದರು. ತಮ್ಮ ಜೀವನವನ್ನೇ ಸಂಸ್ಥೆಗಾಗಿ ಮುಡಿಪಿಟ್ಟವರು. ಗಡಿ ಭಾಗ ಕೋಲಾರದಲ್ಲಿ ವೈದ್ಯಕೀಯ ಸೌಲಭ್ಯ ನೀಡಬೇಕೆಂದು ಅವರು ಮಾಡಿದ ಪ್ರಯತ್ನ ಅತ್ಯಂತ ಶ್ಲಾಘನೀಯ.

ಒಡನಾಟ: ಜೆ.ಹೆಚ್.ಪಟೇಲ್ ಅವರ ರಾಜಕೀಯ ಕಾರ್ಯದರ್ಶಿಗಳಾಗಿದ್ದ ಸಂದರ್ಭದಲ್ಲಿ ಜಾಲಪ್ಪ ಅವರೊಂದಿಗಿನ ತಮ್ಮ ಹತ್ತಿರದ ಒಡನಾಟವನ್ನು ಸ್ಮರಿಸಿದ ಮುಖ್ಯ ಮಂತ್ರಿಗಳು ಅವರ ಮೇಲೆ ಸಂಕಷ್ಟ ಒದಗಿದಾಗ ಪಿ.ಜಿ.ಆರ್.ಸಿಂಧ್ಯಾ, ಸಿದ್ದರಾಮಯ್ಯ ಅವರು ಗಟ್ಟಿಯಾಗಿ ಜಾಲಪ್ಪ ಅವರೊಂದಿಗೆ ನಿಂತರು. ಅವರೊಂದಿಗೆ ಹಲವಾರು ಬಾರಿ ಒಟ್ಟಿಗೆ ಪ್ರಯಾಣಿಸಿದ್ದನ್ನು ಮುಖ್ಯ ಮಂತ್ರಿಗಳು ನೆನಪು ಮಾಡಿಕೊಂಡರು.

ಅವರು ಹಲವಾರು ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ ದೂರ ವಿದ್ದರೂ ಕೂಡ ಅವರ ಮಾರ್ಗದರ್ಶನ ಇಡೀ ರಾಜ್ಯದ ಶ್ರೇಯೋಭಿವೃದ್ಧಿಗೆ ಅಗತ್ಯವಿತ್ತು. 97 ರ ಹಿರಿತನ ಹಾಗೂ ಅನುಭವ ರಾಜ್ಯಕ್ಕೆ ಬೇಕಿತ್ತು. ಎರಡು ಬಾರಿ ಕೋವಿಡ್ ಆಗಿದ್ದೂ ಹೊರಬಂದಿದ್ದರು. ಅವರ ಹಲವಾರು ವಿಚಾರಗಳನ್ನು ನಮಗೆ ಬಿಟ್ಟುಹೋಗಿದ್ದಾರೆ. ವಿಚಾರಗಳನ್ನು ಪ್ರತಿಪಾದಿಸುವ ರೀತಿಯಲ್ಲಿ ನಾವು ಕೆಲಸ ಮಾಡಿ ಅವರಿಗೆ ನಿಜವಾದ ಶ್ರದ್ದಾಂಜಲಿಯನ್ನು ಸಲ್ಲಿಸುತ್ತೇವೆ.  ಜಾಲಪ್ಪ ಅವರ ಬದ್ಧತೆಯೇ  ನಮಗೆ ದಾರಿದೀಪ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com