ನಟ ದರ್ಶನ್ ಆಸ್ತಿ ಪತ್ರಗಳ ನಕಲು ಮಾಡಿ ವಂಚನೆಗೆ ಯತ್ನ: ಮಹಿಳೆ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

ನಟ ದರ್ಶನ್ ತೂಗುದೀಪ ಅವರಿಗೆ ಸೇರಿದ ಮೈಸೂರಿನ ಆಸ್ತಿ ಪತ್ರಗಳನ್ನು ಫೋರ್ಜರಿ ಮಾಡಿ, ದರ್ಶನ್ ಸ್ನೇಹಿತರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಬ್ಯಾಂಕ್ ನಕಲಿ ಮಹಿಳಾ ಅಧಿಕಾರಿ ಸೇರಿ ಮೂವರನ್ನು ಮೈಸೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 
ನಟ ದರ್ಶನ್
ನಟ ದರ್ಶನ್
Updated on

ಮೈಸೂರು: ನಟ ದರ್ಶನ್ ತೂಗುದೀಪ ಅವರಿಗೆ ಸೇರಿದ ಮೈಸೂರಿನ ಆಸ್ತಿ ಪತ್ರಗಳನ್ನು ಫೋರ್ಜರಿ ಮಾಡಿ, ದರ್ಶನ್ ಸ್ನೇಹಿತರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಬ್ಯಾಂಕ್ ನಕಲಿ ಮಹಿಳಾ ಅಧಿಕಾರಿ ಸೇರಿ ಮೂವರನ್ನು ಮೈಸೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

ನಟ ದರ್ಶನ್ ಆಸ್ತಿ ಪತ್ರ ಮತ್ತು ಸಹಿಯನ್ನು ನಕಲು ಮಾಡಿ, ಅದರ ಆಧಾರದ ಮೇಲೆ ಬ್ಯಾಂಕಿನಲ್ಲಿ ರೂ.25 ಕೋಟಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವ ದಾಖಲಾತಿ ಸೃಷ್ಟಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನಕಲಿ ಬ್ಯಾಂಕ್ ಅಧಿಕಾರಿ ಅರುಣಕುಮಾರಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ. ವಿಚಾರ ತಿಳಿದು ನಟ ದರ್ಶನ್ ಅವರು ಭಾನುವಾರ ತಮ್ಮ ಸ್ನೇಹಿತರಾದ ದೂರುದಾರ ಹರ್ಷ ಮಲೆಂಟಾ, ನಿರ್ಮಾಪಕ ಉಮಾಪತಿ ಹಾಗೂ ಇತರರೊಂದಿಗೆ ಮೈಸೂರಿನ ಎನ್.ಆರ್.ಉಪ ವಿಭಾಗದ ಎಸಿಪಿ ಕಚೇರಿಗೆ ಖುದ್ದು ಹಾಜರಾಗಿದ್ದರು.

ಜೂನ್.16ರಂದು ನಿರ್ಮಾಪಕ ಉಮಾಪತಿ ಅವರು ಹರ್ಷ ಮಲೆಂಟಾಗೆ ಕರೆ ಮಾಡಿ, ಕೆನರಾ ಬ್ಯಾಂಕಿನ ಮಾನ್ಯೇಜರ್ ಅರುಣಕುಮಾರಿ ನನಗೆ ಸಿಕ್ಕಿದ್ದು, ನೀನು ರೂ.25 ಕೋಟಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದೀಯಾ? ಅದರ ಭದ್ರತೆಗಾಗಿ ನಿನ್ನ ಆಸ್ತಿ ಮತ್ತು ದರ್ಶನ್ ಆಸ್ತಿ ಪತ್ರಗಳನ್ನು  ನಕಲು ಮಾಡಿ ಸಲ್ಲಿಸಿದ್ದೀಯಾ ಎಂದು ಕೇಳಿದ್ದಾರೆ. 

ಗಾಬರಿಯಾದ ಹರ್ಷ ಬ್ಯಾಂಕಿನ ಅಧಿಕಾರಿಗೆ ಕರೆ ಮಾಡಿ ವಿಚಾರಿಸಿದ್ದು, ಅದೇ ದಿನ ಅರುಣಕುಮಾರಿ, ಮಧುಕೇಶವ ಮತ್ತು ನಂದೀಶ ಎಂಬುವವರೊಂದಿಗೆ ಮೈಸೂರಿಗೆ ಬಂದು, ಕೆಲವು ಆಸ್ತಿಪತ್ರಗಳ ಜೆರಾಕ್ಸ್ ಪ್ರತಿಯನ್ನು ಹರ್ಷ ಮಲೆಂಟಾ ಅವರಿಗೆ ತೋರಿಸಿದ್ದಾರೆ. 

ನೀವು ಗಣ್ಯವ್ಯಕ್ತಿಯೊಬ್ಬರ ಆಸ್ತಿಪತ್ರ ಫೋರ್ಜರಿ ಮಾಡಿದ್ದು, ಅದನ್ನು ಮಾಧ್ಯಮಗಳ ಮುಂದೆ ಹೇಳುವುದಾಗಿ ಬೆದರಿಸಿ ರೂ.25 ಲಕ್ಷಕ್ಕಾಗಿ ಬೇಡಿಕೆ ಇರಿಸಿ ಹೊರಟಿದ್ದಾರೆ. 

ಜೂನ್.17ರಂದು ಬೆಂಗಳೂರಿನಲ್ಲಿರುವ ಕೆನರಾ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಬಂದಿದ್ದ ಮಹಿಳೆ ನಕಲಿ ಬ್ಯಾಂಕ್ ಮ್ಯಾನೇಜರ್ ಎಂಬುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಹರ್ಷ ಮಾಲೆಂಟಾ ಜು.3ರಂದು ಮೈಸೂರಿನ ಹೆಬ್ಬಾಳ ಠಾಣೆಯಲ್ಲಿ ಅರುಣಕುಮಾರಿ, ಮಧುಕೇಶವ ಮತ್ತು ನಂದೀಶ ಎಂಬುವವರ ವಿರುದ್ಧ ದೂರು ನೀಡಿದ್ದರು. 

ಹೆಬ್ಬಾಳದ ರಿಂಗ್ ರೋಡ್ ಬಳಿ ಬರುವಂತೆ ತಿಳಿಸಿದ್ದರು. ಈ ವೇಳೆ ಅಲ್ಲಿಗೆ ಹೋಗಾದ ಸಾಲಕ್ಕೆ ಸಲ್ಲಿಸಿದ್ದ ಅರ್ಜಿ ಪತ್ರವನ್ನು ಹಾಗೂ ಇತರೆ ಆಸ್ತಿ ಪತ್ರಗಳ ಜೆರಾಕ್ಸ್ ಪ್ರತಿಯನ್ನು ನೀಡಿದರು. ಈ ವೇಳೆ ನಾನು ಆಸ್ತಿ ಪತ್ರಗಳ ಫೋರ್ಜರಿ ಮಾಡಿರುವುದಾಗಿ ಆರೋಪ ಮಾಡಿದರು. ಬಳಿಕ ಮಾಧ್ಯಮಗಳು ಹಾಗೂ ಪೊಲೀಸರಿಗೆ ದೂರು ನೀಡಬಾರದು ಎಂದಾದರೆ ರೂ.25 ಲಕ್ಷ ನೀಡಬೇಕೆಂದು ಬೆದರಿಕೆ ಹಾಕಿದ್ದರು ಎಂದು ಹರ್ಷ ಅವರು ದೂರಿನಲ್ಲಿ ಹೇಳಿಕೊಂಡಿದ್ದಾರೆ. 

ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ದರ್ಶನ್ ಅವರು ನನ್ನ ಆಸ್ತಿ ಪತ್ರಗಳು ಫೋರ್ಜರಿ ಆಗಿರುವ ವಿಚಾರ 1 ತಿಂಗಳ ಹಿಂದೆ ತಿಳಿದಿತ್ತು. ಬಂಧಿತ ಆರೋಪಿ ಬಾಯಿ ಬಿಟ್ಟರೆ ಎಲ್ಲವೂ ಗೊತ್ತಾಗುತ್ತದೆ. ಪೊಲೀಸರು ಠಾಣೆ ಕರೆದಿದ್ದಕ್ಕೆ ಹೋಗಿದ್ದೆ. ಸ್ನೇಹಿತರಿಂದಲೇ ಮೋಸವಾಗಿದೆ ಎಂದು ತಿಳಿದಿದ್ದೇ ಆದರೆ, ಯಾರನ್ನೂ ಬಿಡುವುದಿಲ್ಲ. ನನ್ನ ಹೆಸರು ಬಳಕೆಯಾಗಿದೆ. ಅದ್ದರಿಂದಲೇ ಪೊಲೀಸ್ ಠಾಣೆಗೆ ಹೋಗಿದ್ದೆ. ಇದಕ್ಕೆ ರೆಕ್ಕೆಪುಕ್ಕ ಬೆಳೆಸೋದು ಬೇಡ. ಯಾರೂ ಎಂದು ತಿಳಿಯಲಿ ರೆಕ್ಕೆಪುಕ್ಕವಲ್ಲ, ತಲೆಯನ್ನೇ ಕಡಿಯೋನು ಎಂದು ನಿಮಗೆಲ್ಲರಿಗೂ ಗೊತ್ತು ಎಂದು ಗುಡಿಗಿದ್ದಾರೆ. 

ಡಿಸಿಪಿ ಪ್ರದೀಪ್ ಅವರು ಮಾತನಾಡಿ, ಪ್ರಕರಣ ಸಂಬಂಧ ಈ ವರೆಗೂ ಯಾರನ್ನೂ ವಶಕ್ಕೆ ಪಡೆದಿಲ್ಲ. ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಮೂಲಗಳ ಪ್ರಕಾರ ಪೊಲೀಸರು ಅರುಣಕುಮಾರಿ, ಮಧುಕೇಶವ ಹಾಗೂ ನಂದೀಶ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com