ಶತಮಾನದಷ್ಟು ಹಳೆಯದಾದ ದೊಡ್ಡಜಾಲ ರೈಲ್ವೆ ನಿಲ್ದಾಣವನ್ನು ಪಾರಂಪರಿಕ ನಿಲ್ದಾಣವಾಗಿ ಪುನಃಸ್ಥಾಪನೆ!

ಬೆಂಗಳೂರು ವಿಭಾಗದ 105 ವರ್ಷಗಳಷ್ಟು ಹಳೆಯದಾದ ದೊಡ್ಡಜಾಲ ರೈಲು ನಿಲ್ದಾಣವನ್ನು ಪಾರಂಪರಿಕ ಕೇಂದ್ರವಾಗಿ ಪುನಃಸ್ಥಾಪಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.
ದೊಡ್ಡಜಾಲ ರೈಲ್ವೆ ನಿಲ್ದಾಣ
ದೊಡ್ಡಜಾಲ ರೈಲ್ವೆ ನಿಲ್ದಾಣ

ಬೆಂಗಳೂರು: ಬೆಂಗಳೂರು ವಿಭಾಗದ 105 ವರ್ಷಗಳಷ್ಟು ಹಳೆಯದಾದ ದೊಡ್ಡಜಾಲ ರೈಲು ನಿಲ್ದಾಣವನ್ನು ಪಾರಂಪರಿಕ ಕೇಂದ್ರವಾಗಿ ಪುನಃಸ್ಥಾಪಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾದೊಂದಿಗೆ ಯಾವುದೇ ಲಾಭೋದ್ದೇಶವಿಲ್ಲದ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ & ಕಲ್ಚರಲ್ ಹೆರಿಟೇಜ್ (ಐಎನ್‌ಟಿಎಸಿಎಚ್‌) ಈ ವಿಭಾಗಕ್ಕೆ ನಾಲ್ಕು ರೈಲ್ವೆ ನಿಲ್ದಾಣಗಳನ್ನು ಪುನಃಸ್ಥಾಪಿಸಲು ನಿರ್ಧರಿಸಿದೆ.

ಜೀರ್ಣೋದ್ಧಾರ ಕಾರ್ಯ ಆರಂಭಿಸಲು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾ ಸೋಮವಾರ (ಜುಲೈ 12) ಅಡಿಗಲ್ಲು ಹಾಕಿದರು. ದೊಡ್ಡಜಾಲದಲ್ಲಿ ಆರ್ಟ್ ಸೆಂಟರ್-ಕಮ್-ಕಲ್ಚರಲ್ ಸೆಂಟರ್-ಕಮ್ ಕನ್ವರ್ಶನಲ್ ಸೆಂಟರ್ ಅನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಇತಿಹಾಸ ಮತ್ತು ಪರಂಪರೆಗೆ ಸಂಬಂಧಿಸಿದ ವಿವಿಧ ವಿಷಯಗಳ ಆಧಾರದ ಮೇಲೆ ದೇವನಹಳ್ಳಿ, ಅವತಿಹಳ್ಳಿ, ನಂದಿ ಹಾಲ್ಟ್‌ನಲ್ಲಿರುವ ಪಾರಂಪರಿಕ ರೈಲ್ವೆ ನಿಲ್ದಾಣಗಳನ್ನು ಪುನಃಸ್ಥಾಪಿಸುವ ಮತ್ತು ಸಂರಕ್ಷಿಸುವ 2021ರ ಫೆಬ್ರವರಿ 25ರ ಒಪ್ಪಂದದಲ್ಲಿ ದೊಡ್ಡಜಾಲವು ಒಂದಾಗಿದೆ. ನಿಲ್ದಾಣಗಳು ಬೆಂಗಳೂರು-ಚಿಕ್ಕಬಳ್ಳಾಪುರ ಲಘು ರೈಲ್ವೆ ಮಾರ್ಗದಲ್ಲಿವೆ. 1915ರ ಆಗಸ್ಟ್ 1ರಂದು ಮೀಟರ್ ಗೇಜ್ ಪ್ರಾರಂಭವಾಯಿತು. ಇದು ಈ ಪ್ರದೇಶದ ಅತ್ಯಂತ ಹಳೆಯ ರೈಲ್ವೆ ಮಾರ್ಗವಾಗಿದೆ. ಈ ಕಟ್ಟಡಗಳು ವಸಾಹತುಶಾಹಿ ಶೈಲಿಯ ವಾಸ್ತುಶಿಲ್ಪದ ಸುಂದರವಾದ ಉದಾಹರಣೆಗಳಾಗಿವೆ.

ದೇವನಹಳ್ಳಿಯಲ್ಲಿ ಸ್ಮಾರಕಗಳು ಮತ್ತು ಇತಿಹಾಸಕ್ಕಾಗಿ ಒಂದು ವ್ಯಾಖ್ಯಾನ ಕೇಂದ್ರ, ಕೆಫೆ ಅಥವಾ ಲಘು ಕೌಂಟರ್ ಅನ್ನು ಸ್ಥಾಪಿಸಲಾಗುತ್ತದೆ. ಸಿಲ್ಕ್ ಮ್ಯೂಸಿಯಂ, ಉದ್ಯಾನವನದೊಂದಿಗೆ ಸಂಪನ್ಮೂಲ ಕೇಂದ್ರವನ್ನು ಸೂಕ್ತ ಮರ ನೆಡುವಿಕೆ ಮತ್ತು ಭೂದೃಶ್ಯದೊಂದಿಗೆ ಸ್ಥಾಪಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಅವತಿಹಳ್ಳಿ. ನಂದಿ ಹಾಲ್ಟ್ ನಿಲ್ದಾಣದಲ್ಲಿ ರೈಲ್ ಮ್ಯೂಸಿಯಂ, ಕೆಫೆ, ರೆಸ್ಟೋರೆಂಟ್, ಸಾಂಸ್ಕೃತಿಕ ಪ್ರದರ್ಶನ ಕೇಂದ್ರ, ಪಾಪ್-ಅಪ್ ವಾರಾಂತ್ಯದ ಕ್ರಾಫ್ಟ್ ಮಾರುಕಟ್ಟೆಗಳು, ಇಂಟರ್ಪ್ರಿಟೇಷನ್ ಸೆಂಟರ್, ಓಪನ್ ಏರ್ ಥಿಯೇಟರ್ ಮತ್ತು ಆಂಫಿಥಿಯೇಟರ್ ಬರಲಿವೆ.

ಎರಡು ಹಂತಗಳಲ್ಲಿ ಕಾಮಗಾರಿ ನಡೆಯಲಿದೆ. ಮೊದಲ ಹಂತದಲ್ಲಿ ರೈಲ್ವೆಯೊಂದಿಗೆ ಸಮಾಲೋಚಿಸಿ ನಿಲ್ದಾಣದ ಕಟ್ಟಡಗಳ ನವೀಕರಣ, ಪುನಃಸ್ಥಾಪನೆ ಮತ್ತು ಸಂರಕ್ಷಣೆಯನ್ನು ಇಂಟಾಚ್ ಕೈಗೆತ್ತಿಕೊಳ್ಳುತ್ತದೆ. ಸಿಎಸ್‌ಆರ್ ಅಡಿಯಲ್ಲಿ ಪಾಲುದಾರರನ್ನು ಗುರುತಿಸಲು ಪ್ರಯತ್ನಿಸುತ್ತದೆ. ಎರಡನೇ ಹಂತದಲ್ಲಿ, ನಿಲ್ದಾಣಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುವರಿ ಸೌಲಭ್ಯಗಳನ್ನು ಸೃಷ್ಟಿಸುವ ಮೂಲಕ ಸಂರಕ್ಷಿತ ಮತ್ತು ಪುನಃಸ್ಥಾಪಿಸಲಾದ ಕಟ್ಟಡಗಳ ಸುಸ್ಥಿರ ನಿರ್ವಹಣೆಯ ಮಾರ್ಗಗಳು ಮತ್ತು ವಿಧಾನಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಈ ಸಂದರ್ಭದಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ(ನಿರ್ವಹಣೆ) ಕುಸುಮಾ ಹರಿಪ್ರಸಾದ್, ಸೀನಿಯರ್ ವಿಭಾಗೀಯ ಎಂಜಿನಿಯರ್(ಸಮನ್ವಯ) ಎಸ್.ಪರ್ಶೇಶ್ ಕುಮಾರ್, ಜಯಂತ್ ರಾಮಚಂದ್ರನ್ ಮತ್ತು ಹಿರಿಯ ವಿಭಾಗೀಯ ಮೆಕ್ಯಾನಿಕಲ್ ಎಂಜಿನಿಯರ್ ಉಪಸ್ಥಿತರಿದ್ದರು. ಇಂಟಾಚ್‌ನ ಕನ್ವೀನರ್ ಮೀರಾ ಅಯ್ಯರ್, ಸಹ-ಕನ್ವೀನರ್ ಸಿ ಅರವಿಂದ್ ಮತ್ತು ಸಂರಕ್ಷಣಾ ವಾಸ್ತುಶಿಲ್ಪಿ ಪಂಕಜ್ ಮೋದಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com