ಮಂಗಳೂರು: ಸುಳ್ಯ ನಗರ ಪಂಚಾಯಿತಿ ವ್ಯಾಪ್ತಿಯ ದುಗ್ಗಲಡ್ಕ ಕಂದಡ್ಕಕ್ಕೆ ಜು.14ರ ರಾತ್ರಿ ಸಿ.ಡಿ.ಪಿ.ಒ.ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಈ ವೇಳೆ ಬಾಲ್ಯ ವಿವಾಹವೊಂದನ್ನು ತಡೆದ ಘಟನೆ ನಡೆದಿದೆ.
ಸುಳ್ಯದ ಕಂದಡ್ಕದ ತಮಿಳು ಕುಟುಂಬವೊಂದರ ಪ್ರತಾಪ ಎಂಬ 26 ವರ್ಷದ ಯುವಕನಿಗೆ ಜು.15 ರಂದು ಮೈಸೂರಿನ ಹುಡುಗಿಯೊಂದಿಗೆ ಮದುವೆ ನಡೆಯುವುದಿತ್ತು. ಆದರೆ ಈ ಹುಡುಗಿಗೆ 18 ವರ್ಷ ತುಂಬಿರಲಿಲ್ಲ.
ಈ ಬಗ್ಗೆ ಜು.14 ರಂದು ಸಂಜೆ ಸುಳ್ಯ ಸಿ.ಡಿ.ಪಿ.ಒ ಅವರಿಗೆ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಿ.ಡಿ.ಪಿ.ಒ ರಶ್ಮಿ ಅಶೋಕ್ ಅವರು, ಇಲಾಖೆಯ ಮೇಲ್ವಿಚಾರಕಿ ಹಾಗು ಸಹಾಯಕ ಮಕ್ಕಳ ಸಂರಕ್ಷಣಾಧಿಕಾರಿ ದೀಪಿಕಾ, ಗ್ರಾಮಕರಣಿಕ ತಿಪ್ಪೇಶ್, 4 ಮಂದಿ ಪೊಲೀಸರ ಜತೆಗೆ ಕಂದಡ್ಕ ಎಂಬ ವಿವಾಹ ನಡೆಯುತ್ತಿರುವ ಸ್ಥಳಕ್ಕೆ ತೆರಳಿದ್ದಾರೆ.
ಅಪ್ರಾಪ್ತ ಬಾಲಕಿ ಮೈಸೂರು ಮೂಲದವರಾಗಿದ್ದರು. ಮದುವೆಗೆ ಎರಡೂ ಕುಟುಂಬ ಒಪ್ಪಿಗೆ ನೀಡಿತ್ತು, ಬಾಲಕಿಯ ಕುಟುಂಬ ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಬಾಲ್ಯ ವಿವಾಹದ ಬಗ್ಗೆ ಅವರಿಗೆ ಅರಿವಿರಲಿಲ್ಲ. ವಿವಾಹ ಮಾಡಲು ಕುಟುಂಬ ಸುಳ್ಯಕ್ಕೆ ಬುದವಾರ ಸಂಜೆ ಆಗಮಿಸಿದ್ದು, ಹುಡುಗಿಗೆ 18 ವರ್ಷ ತುಂಬಿರುವುದನ್ನು ಸಾಬೀತುಪಡಿಸಲು ಅವರಲ್ಲಿ ಯಾವುದೇ ದಾಖಲೆಗಳೂ ಇರಲಿಲ್ಲ. ಬಳಿಕ ಬಾಲಕಿಯ ಪೋಷಕರಿಗೆ ಬಾಲ್ಯವಿವಾಹದಿಂದಾಗುವ ಸಮಸ್ಯೆಗಳನ್ನು ವಿವರಿಸಲಾಗಿತ್ತು. 18 ವರ್ಷ ತುಂಬಿದ ಬಳಿಕ ವಿವಾಹ ಮಾಡುವಂತೆ ತಿಳಿಸಲಾಗಿತ್ತು. ಬಳಿಕ ಎರಡೂ ಕುಟುಂಬ ಒಪ್ಪಿಗೆ ನೀಡಿ ವಿವಾಹ ರದ್ದುಪಡಿಸಿತ್ತು ಎಂದು ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ ಅವರು ಹೇಳಿದ್ದಾರೆ.
ವಿವಾಹ ರದ್ದುಪಡಿಸಿದ ಬಳಿಕ ಬಾಲಕಿಯ ಪೋಷಕರಿಂದ ಪತ್ರವೊಂದಕ್ಕೆ ಸಹಿ ಮಾಡಿಸಿಕೊಳ್ಳಲಾಗಿತ್ತು. ಪತ್ರದಲ್ಲಿ ಪುತ್ರಿಗೆ 18 ವರ್ಷ ತುಂಬಿದ ಬಳಿಕ ಇದೇ ಯುವಕನೊಂದಿಗೆ ವಿವಾಹ ಮಾಡುವುದಾಗಿ ಪತ್ರದಲ್ಲಿ ತಿಳಿಸಿದ್ದರು ಎಂದು ಸಿಡಿಪಿಒ ರಶ್ಮೀ ಅವರು ತಿಳಿಸಿದ್ದಾರೆ.
Advertisement