ಬೆಂಗಳೂರು: ಕೊರೋನಾ ಮೂರನೇ ಅಲೆ ಎದುರಿಸಲು ನಡೆಸಬೇಕಾದ ಸಿದ್ಧತೆಗಳ ಕುರಿತು ಇನ್ನೊಂದು ವಾರದಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತೆದ ಎಂದು ಉನ್ನತ ಮಟ್ಟದ ತಜ್ಞ ಸಮಿತಿಯ ಅಧ್ಯಕ್ಷ ಖ್ಯಾತ ವೈದ್ಯ ಡಾ.ದೇವಿಶೆಟ್ಟಿಯವರು ಹೇಳಿದ್ದಾರೆ.
ನಿನ್ನೆಯಷ್ಟೇ ಸಬೆ ನಡೆಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕೊರೋನಾ ಮೂರನೇ ಅಲೆ ಎದುರಿಸಲು ನಡೆಸಬೇಕಾದ ಸಿದ್ಧತೆಗಳ ಬಗ್ಗೆ ಒಂದು ವಾರದೊಳಗೆ ವಿಸ್ತೃತ ವರದಿ ನೀಡುವಂತೆ ಉನ್ನತ ಮಟ್ಟದ ತಜ್ಞರ ಸಮಿತಿಗೆ ಸೂಚನೆ ನೀಡಿದ್ದರು.
ಇದಕ್ಕೆ ಒಪ್ಪಿಗೆ ನೀಡಿರುವ ತಜ್ಞರ ಸಮಿತಿಯ ಅಧ್ಯಕ್ಷ ದೇವಿಶೆಟ್ಟಿಯವರು, ವಾರದೊಳಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಸಭೆಯಲ್ಲಿ ಕೊರೋನಾ 3ನೇ ಅಲೆ ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಅಗತ್ಯವಿರುವ ಮೂಲಸೌಕರ್ಯ, ಅಗತ್ಯವಾದ ಮಾನವ ಸಂಪನ್ಮೂಲಗಳ ಅಂದಾಜು, ತರಬೇತಿ, ಔಷಧಿಗಳು ಮತ್ತು ಚಿಕಿತ್ಸಾ ವಿಧಾನಗಳ ಕುರಿತು ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಈ ವಿಷಯಗಳ ಕುರಿತು ತಜ್ಞರ ಸಮಿತಿಯು ತನ್ನ ವರದಿಯನ್ನು ಒಂದು ವಾರದೊಳಗೆ ಸಲ್ಲಿಸಲಿದೆ ಎಂದು ಡಾ.ದೇವಿ ಶೆಟ್ಟಿಯವರು ಸಭೆಯಲ್ಲಿ ಭರವಸೆ ನೀಡಿದ್ದಾರೆಂದು ಮುಖ್ಯಮಂತ್ರಿ ಕಚೇರಿಯ ಮಾಹಿತಿ ನೀಡಿದೆ.
ಡಾ ಎಂ ಎಂ ಸುದರ್ಶನ್ ನೇತೃತ್ವದಲ್ಲಿ ಈಗಾಗಲೇ ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿ ಅಸ್ತಿತ್ವದಲ್ಲಿದ್ದು, ಇದರ ಜೊತೆಗೆ 13 ಸದಸ್ಯರ ಕಾರ್ಯಪಡೆಯು ಕೊರೋನಾ 3ನೇ ಅಲೆ ಸಿದ್ಧತೆ ಕುರಿತು ಸರ್ಕಾರಕ್ಕೆ ನೆರವು ನೀಡಲಿದೆ.
ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದ್ದು, ಹೀಗಾಗಿ ಪ್ರಸ್ತುತ ರಚಿಸಲಾಗಿರುವ ತಜ್ಞರ ಸಮಿತಿಯಲ್ಲಿ ಮಕ್ಕಳ ವೈದ್ಯರನ್ನು ಸೇರ್ಪಡೆಗೊಳಿಸಲಾಗಿದೆ. ಈ ನಡುವೆ ಸಿದ್ಧತಾ ಭಾಗವಾಗಿ ಮಕ್ಕಳಿಗೆ ಪ್ರತ್ಯೇಕ ಕೋವಿಡ್ ವಾರ್ಡ್ ಸ್ಥಾಪನೆ ಮಾಡುವುದಾಗಿ ಸರ್ಕಾರ ತಿಳಿಸಿದೆ.
Advertisement