ಮೈಸೂರು: ಕೊರೋನಾ ಲಸಿಕೆ ಕುರಿತು ರಾಜ್ಯ ಸರ್ಕಾರ ಸಾಕಷ್ಟು ಜಾಗೃತಿಗಳನ್ನು ಮೂಡಿಸುತ್ತಿದ್ದರೂ, ಕೆಲವು ಗ್ರಾಮಗಳಲ್ಲಿ ಆಂತಕ ಇನ್ನೂ ಮುಂದುವರೆದಿದೆ. ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಗುಂಡ್ಲುಪೇಟೆ ತಾಲೂಕಿನ ಶಿವಪುರದ ಗ್ರಾಮಸ್ಥರು ಆಶಾ ಕಾರ್ಯಕರ್ತೆಯರಿಗೆ ಬೆದರಿಕೆ ಹಾಕಿರುವುದು ಇದೀಗ ಬೆಳಕಿಗೆ ಬಂದಿದೆ.
ಗುಂಡ್ಲುಪೇಟೆಯ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಚಿವ ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಿನ್ನೆಯಷ್ಟೇ ಕೊರೊನಾ ಟಾಸ್ಕ್ ಫೋರ್ಸ್ ಸಭೆ ನಡೆದಿದ್ದು, ಸಭೆ ವೇಳೆ ತಾನು ಅನುಭವಿಸುತ್ತಿರುವ ಸಂಕಷ್ಟಗಳನ್ನು ಆಶಾ ಕಾರ್ಯಕರ್ತೆಯೊಬ್ಬರು ವಿವರಿಸಿದ್ದಾರೆ.
ಲಸಿಕೆ ಹಾಕಿಸಿಕೊಳ್ಳಿ ಎಂದು ಬಲವಂತ ಮಾಡಿದರೆ ನಿಮಗೇನೋ ಇದರಲ್ಲಿ ಪ್ರಾಫಿಟ್ ಇರಬೇಕು ಅದಕ್ಕೆ ಬಲವಂತ ಮಾಡ್ತೀರಿ ಎಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಹೆಚ್ಚು ಒತ್ತಡ ಹೇರಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕುತ್ತಾರೆ. ಮತ್ತಿತ್ತರರು ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾದರೆ ಜವಾಬ್ದಾರಿ ಹೊರುತ್ತೇವೆ ಎಂದು ಬಾಂಡ್ ಪೇಪರ್ನಲ್ಲಿ ಬರೆದುಕೊಡಿ ಎನ್ನುತ್ತಾರೆಂದು ಅಳಲು ತೋಡಿಕೊಂಡರು.
ಗುಂಡ್ಲುಪೇಟೆ ತಾಲೂಕಿನ ಬರಗಿ ಕಾಲೋನಿಯಲ್ಲಿ ನಡೆದ ಮತ್ತೊಂದು ಘಟನೆಯನ್ನು ವಿವರಿಸಿದ ಮತ್ತೊಬ್ಬರು ಆಶಾ ಕಾರ್ಯಕರ್ತೆ, ಲಸಿಕೆ ಪಡೆಯುವಂತೆ ಮನೆ ಮನೆ ಬಾಗಿಲಿಗೆ ತೆರಳಲಾಗಿತ್ತು. ಈ ವೇಳೆ ಕೆಲವು ಅಸಭ್ಯವಾಗಿ ವರ್ತಿಸಿದ್ದರು. ಲಸಿಕೆ ಪಡೆಯುವಂತೆ ತಿಳಿಸಿದಾಗ ವಿಕಲ ಚೇತನರಾಗಿದ್ದ ಮುನಿಯಪ್ಪ ಎಂಬುವವರು ಕುಡಗೋಲು ಹಿಡಿದು ಹೊರಗೆ ಬಂದಿದ್ದರು. ಬಳಿಕ ಅವರ ಅಜ್ಜಿ ಮಧ್ಯ ಪ್ರವೇಶಿಸಿ ಕುಡಗೋಲನ್ನು ಕೈಯಿಂದ ಕಸಿದುಕೊಂಡಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಳಿಕ ಮುನಿಯಪ್ಪ ಅವರ ಕುಟುಂಬ ಸದಸ್ಯರು ಆರೋಗ್ಯ ಸಿಬ್ಬಂದಿಗಳ ಹತ್ತಿರ ಬಂದು ಪೊಲೀಸರಿಗೆ ದೂರು ನೀಡದಂತೆ ಮನವಿ ಮಾಡಿಕೊಂಡಿದ್ದರು. ಬಳಿಕ ಲಸಿಕೆ ಬಗ್ಗೆ ಮುನಿಯಪ್ಪ ಅವರಿಗೆ ವಿವರಿಸಲಾಗಿತ್ತು. ಬಳಿಕ ಸುಮ್ಮನೆ ಮನೆಗೆ ತೆರಳಿದ್ದರು ಎಂದು ತಿಳಿಸಿದ್ದಾರೆ.
ಮತ್ತೋರ್ವ ಆಶಾ ಕಾರ್ಯಕರ್ತೆ ಮಾತನಾಡಿ, ಲಸಿಕೆ ಅಭಿಯಾನದಲ್ಲಿ ಗ್ರಾಪಂ ಅಧ್ಯಕ್ಷರು, ಸದಸ್ಯರು ಬಂದರೆ ಜನರ ಮನವೊಲಿಸಬಹುದು. ಮುಖ್ಯವಾಗಿ ಗ್ರಾಪಂ ಸದಸ್ಯರು ಲಸಿಕೆ ಹಾಕಿಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.
Advertisement