ಮಂಗಳೂರು: ಹಿಂದೂ ಧರ್ಮದ ಯುವತಿಯೊಂದಿಗೆ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವಕ ಮೇಲೆ ಭಜರಂಗದಳದ ಕಾರ್ಯಕರ್ತರು ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಈ ಘಟನೆ ಮೊನ್ನೆ ಗುರುವಾರ ರಾತ್ರಿ 9.30 ರ ಸುಮಾರಿಗೆ ಮಂಗಳೂರಿನ ಪಂಪ್ ವೆಲ್ ಸಮೀಪ ನಡೆದಿದ್ದು ಹಿಂದೂ ಯುವತಿ ಮತ್ತು ಮುಸ್ಲಿಂ ಧರ್ಮದ ಯುವಕ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿ ಕುಮಾರ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಿ ಅವರ ವಿರುದ್ಧ ಕೋಮು ಸೌಹಾರ್ದತೆಗೆ ಧಕ್ಕೆ ಮಾಡಿದ, ಗಲಭೆ ಎಬ್ಬಿಸಿದ, ಹಲ್ಲೆ ಮತ್ತು ಕೊಲೆಗೆ ಯತ್ನ ನಡೆಸಿದ ಆರೋಪದ ಮೇಲೆ ಮಂಗಳೂರು ಪೊಲೀಸರು ಕೇಸು ದಾಖಸಿದ್ದಾರೆ. ನಂತರ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಮಂಗಳೂರು ಪೊಲೀಸ್ ಆಯುಕ್ತರು ಹೇಳಿದ್ದೇನು?: ಘಟನೆಗೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಅಶ್ವಿದ್ ಅನ್ಸರ್ ಮೊಹಮ್ಮದ್ ಮತ್ತು ಆತನ ಸ್ನೇಹಿತೆ ಅಶ್ವಿನಿ ಶಾನುಭಾಗ್ ಇಬ್ಬರೂ ಒಂದೇ ತರಗತಿಯಲ್ಲಿ ಓದಿದವರಾಗಿದ್ದು ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಹೊರಟಿದ್ದರು.
ಈ ವೇಳೆ ಗುರುವಾರ ರಾತ್ರಿ 9.30ರ ಸುಮಾರಿಗೆ ಭಜರಂಗ ದಳದ ಕಾರ್ಯಕರ್ತರು ಬಸ್ಸನ್ನು ತಡೆದು ನಿಲ್ಲಿಸಿದರು. ಬಸ್ಸಿಗೆ ಹತ್ತಿ ಏಕಾಏಕಿ ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿದರು. ಘಟನೆಯಲ್ಲಿ 23 ವರ್ಷದ ಯುವತಿಗೆ ಸಹ ಗಾಯವಾಗಿದೆ ಎಂದಿದ್ದಾರೆ.
ಬಂಧಿತರನ್ನು ಮಂಗಳೂರು ಸಮೀಪ ಅತ್ತಾವರದ ಬಾಲಚಂದ್ರ (28), ಕಂದುಕಾದ ಧನುಷ್ ಭಂಡರಿ (25), ಶಕ್ತಿನಗರದ ಜಯಪ್ರಶಾಂತ್ (27) ಮತ್ತು ಉರ್ವಾದ ಅನಿಲ್ ಕುಮಾರ್ (38). ನಾಲ್ಕು ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಧನುಷ್ ಒಳಗೊಂಡಿದ್ದಾರೆ. ಕಳೆದ ಮೂರು ತಿಂಗಳಲ್ಲಿ, ಇಂತಹ ನಾಲ್ಕು ದಾಳಿ ಪ್ರಕರಣಗಳು ನಡೆದಿವೆ. ಇವರಿಬ್ಬರ ಮೇಲೆ ಹಲ್ಲೆ ನಡೆಸಲು ಯಾರು ಪ್ರೇರೇಪಿಸಿದರು ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಯುವತಿ ದೂರು ದಾಖಲು: ಗಾಯಗೊಂಡ ಯುವತಿ ಕಂಕನಾಡಿ ಪೊಲೀಸರಿಗೆ ದೂರು ನೀಡಿದ್ದು, ಯುವತಿ ಮತ್ತು ಯುವಕ ಇಬ್ಬರೂ ಹಲವು ವರ್ಷಗಳಿಂದ ಪರಿಚಿತರು. ಪದವಿ ಮುಗಿಸಿ ಬೆಂಗಳೂರಿನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕಲು ತೆರಳುತ್ತಿದ್ದೆ ಎಂದು ಹೇಳಿಕೊಂಡಿದ್ದಾಳೆ.
ದಾಳಿ ನಡೆದ ಸ್ಥಳದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ದಾಳಿಕೋರರು ಈ ಹಿಂದೆ ಹಲವು ಬಾರಿ ಯುವತಿ ಮತ್ತು ಯುವಕ ಒಟ್ಟಿಗೆ ಇರುವುದನ್ನು ನೋಡಿದ್ದರು ಎಂದು ಹೇಳಲಾಗುತ್ತಿದೆ.
Advertisement