ಕೊಡಗು-ಕೇರಳ ಗಡಿ ಚೆಕ್ಪೋಸ್ಟ್ಗಳಲ್ಲಿ ರಾತ್ರಿ ವೇಳೆ ಸಿಬ್ಬಂದಿಗಳ ಗೈರು: ಸ್ಥಳೀಯರಲ್ಲಿ ಆತಂಕ
ಕೊಡಗು-ಕೇರಳ ಗಡಿಯಲ್ಲಿ ರಾತ್ರಿಯ ಸಮಯದಲ್ಲಿ ಆರ್ಟಿಪಿಸಿಆರ್ ನೆಗೆಟಿವ್ ವರದಿ ಪರಿಶೀಲನೆಗಾಗಿ ಸಿಬ್ಬಂದಿಗಳಿಲ್ಲದಿರುವುದು ಇಲ್ಲಿನ ಸ್ಥಳೀಯ ನಿವಾಸಿಗಳಿಗೆ ಆಘಾತವನ್ನುಂಟು ಮಾಡಿದೆ.
Published: 08th April 2021 08:47 PM | Last Updated: 09th April 2021 02:03 PM | A+A A-

ಕೊಡಗು-ಕೇರಳ ಗಡಿ ಚೆಕ್ ಪೋಸ್ಟ್
ಮಡಿಕೇರಿ: ಕೊಡಗು-ಕೇರಳ ಗಡಿಯಲ್ಲಿ ರಾತ್ರಿಯ ಸಮಯದಲ್ಲಿ ಆರ್ಟಿಪಿಸಿಆರ್ ನೆಗೆಟಿವ್ ವರದಿ ಪರಿಶೀಲನೆಗಾಗಿ ಸಿಬ್ಬಂದಿಗಳಿಲ್ಲದಿರುವುದು ಇಲ್ಲಿನ ಸ್ಥಳೀಯ ನಿವಾಸಿಗಳಿಗೆ ಆಘಾತವನ್ನುಂಟು ಮಾಡಿದೆ. ಈ ಚೆಕ್ಪೋಸ್ಟ್ಗಳಲ್ಲಿ ಆರ್ಟಿಪಿಸಿಆರ್ ವರದಿಗಳಿಗಾಗಿ 24/7 ತಪಾಸಣೆ ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ಇದೀಗ ಭರವಸೆ ನೀಡಿದ್ದಾರೆ.
ಬುಧವಾರ ರಾತ್ರಿ, ಕೇರಳದಿಂದ ಕೊಡಗಿನ ಕುಟ್ಟ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಜಿಲ್ಲೆಗೆ ಪ್ರವೇಶಿಸುವಾಗ ಆರ್ಟಿಪಿಸಿಆರ್ ನೆಗೆಟಿವ್ ವರದಿ ಪರಿಶೀಲನೆಗೆ ಯಾರೊಬ್ಬ ಸಿಬ್ಬಂದಿಗಳೂ ಇಲ್ಲ ಎಂದು ಗಮನಿಸಿದ್ದಾರೆ.ಕೇರಳದಿಂದ ಪ್ರವೇಶಿಸುವ ಸಂದರ್ಶಕರಿಂದ ಆರ್ಟಿಪಿಸಿಆರ್ ನೆಗೆಟಿವ್ ವರದಿಗಳನ್ನು ಪರಿಶೀಲಿಸಲು ರಾತ್ರಿಯ ಸಮಯದಲ್ಲಿ ಕುಟ್ಟಾದ ಗಡಿ ಚೆಕ್ ಪೋಸ್ಟ್ನಲ್ಲಿ ಯಾವುದೇ ಸಿಬ್ಬಂದಿ ಇರಲಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಕೇರಳದ ಅನೇಕ ವಾಹನಗಳು ಇದರ ಲಾಭವನ್ನು ಪಡೆದು ರಾತ್ರಿ ವೇಳೆ ಜಿಲ್ಲೆಗೆ ಪ್ರವೇಶಿಸುತ್ತವೆ.
ಕೊಡಗು-ಕೇರಳ ಗಡಿ ಚೆಕ್ ಪೋಸ್ಟ್ಗಳಲ್ಲಿ ಆರಂಭದಲ್ಲಿ ಕಠಿಣ ತಪಾಸಣೆ ಖಾತ್ರಿಪಡಿಸಲಾಗಿದ್ದರೂ, ಕೆಲವು ಇಲಾಖಾ ಸಿಬ್ಬಂದಿಗಳು ಗೈರುಹಾಜರಾಗಿದ್ದಾರೆ, ವಿಶೇಷವಾಗಿ ಸಂಜೆ ನಂತರದ ಸಮಯದಲ್ಲಿ ನಿರ್ಲಕ್ಷ ಎದ್ದು ಕಾಣುತ್ತಿದೆ.
ವಿರಾಜಪೇಟೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಯತಿರಾಜ್, “ನಾವು ಚೆಕ್ ಪೋಸ್ಟ್ಗಳಲ್ಲಿ 24/7 ತಪಾಸಣೆ ನಡೆಸಲು ಕ್ರಮ ಕೈಗೊಂಡಿದ್ದೇವೆ. ತಪಾಸಣೆ ನಡೆಸಲು ಕಂದಾಯ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳ ಸಿಬ್ಬಂದಿಯನ್ನು ಎರಡು ಪಾಳಿಯಲ್ಲಿ ನೇಮಿಸಲಾಗಿದೆ. ಆದರೂ ರಾತ್ರಿಯ ಸಮಯದಲ್ಲಿ ತಪಾಸಣೆಯನ್ನು ನಿರ್ಲಕ್ಷಿಸಲಾಗಿದೆ ಎಂದು ನಾನು ಅರಿತಿದ್ದೇನೆ. ಅಲ್ಲದೆ ಮುಂದಿನ ದಿನದಲ್ಲಿ ಎಲ್ಲಾ ವೇಳೆಯಲ್ಲಿ ತಪಾಸಣೆ ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು" ಎಂದಿದ್ದಾರೆ.