ಲಾಕ್ಡೌನ್ ಹೊರತುಪಡಿಸಿ ಬೆಡ್ ಕೊರತೆ ನೀಗಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ ವಿಪಕ್ಷ ಶಾಸಕರು

 ಬೆಂಗಳೂರಿನಲ್ಲಿ ಕೋವಿಡ್ 19 ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಬೆಂಗಳೂರಿನ ಸಚಿವರು, ಸಂಸದರು ಹಾಗೂ ಶಾಸಕರ ಜೊತೆ ನಡೆಸಿದ ವಿಡಿಯೋ ಸಂವಾದದಲ್ಲಿ ಲಾಕ್ಡೌ‍ನ್ ಹೊರತು ಪಡಿಸಿ ಬೆಡ್ ಕೊರತೆ ನೀಗಿಸಲು, ಅಂತ್ಯಕ್ರಿಯೆಗೆ ಸಮರ್ಪಕ ವ್ಯವಸ್ಥೆ, ಆಕ್ಸಿಜನ್ ಕೊರತೆ ನಿವಾರಣೆ ಸೇರಿದಂತೆ ಇತರೆ ಕಠಿಣ ಕ್ರಮಕ್ಕೆ ವಿಪಕ್ಷ ಶಾಸಕರು ಸಲಹೆ ನೀಡ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಬೆಂಗಳೂರು: ಬೆಂಗಳೂರಿನಲ್ಲಿ ಕೋವಿಡ್ 19 ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಬೆಂಗಳೂರಿನ ಸಚಿವರು, ಸಂಸದರು ಹಾಗೂ ಶಾಸಕರ ಜೊತೆ ನಡೆಸಿದ ವಿಡಿಯೋ ಸಂವಾದದಲ್ಲಿ ಲಾಕ್ಡೌ‍ನ್ ಹೊರತು ಪಡಿಸಿ ಬೆಡ್ ಕೊರತೆ ನೀಗಿಸಲು, ಅಂತ್ಯಕ್ರಿಯೆಗೆ ಸಮರ್ಪಕ ವ್ಯವಸ್ಥೆ, ಆಕ್ಸಿಜನ್ ಕೊರತೆ ನಿವಾರಣೆ ಸೇರಿದಂತೆ ಇತರೆ ಕಠಿಣ ಕ್ರಮಕ್ಕೆ ವಿಪಕ್ಷ ಶಾಸಕರು ಸಲಹೆ ನೀಡಿದರು.

ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ಸರ್ಕಾರದ ನಿಲುವು ಸ್ಪಷ್ಟಪಡಿಸಿದಲ್ಲಿ ಪೂರಕವಾಗಿ ಏನು ಮಾಡಬಹುದು ಎಂದು ಪ್ರಶ್ನಿಸಿದಾಗ ಸರ್ಕಾರದ ಪರವಾಗಿ ಉತ್ತರಿಸಿದ ಸಚಿವ ಆರ್.ಅಶೋಕ್, ತಮ್ಮ ಅಭಿಪ್ರಾಯ, ವಿಶೇಷವಾಗಿ, ರಚನಾತ್ಮಕ ಸಲಹೆಗಳನ್ನು ಪಡೆದು, ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸರ್ಕಾರದ ನಿಲುವು ಪ್ರಕಟಿಸುವುದಾಗಿ ಹೇಳಿದರು.

ಮತ್ತೆ ಮಾತನಾಡಿದ ರಾಮಲಿಂಗಾರೆಡ್ಡಿ, ಈ ಸಂದರ್ಭದಲ್ಲಿ ನಮ್ಮ ಸಂಪೂರ್ಣ ಸಹಕಾರ ತಮಗೆ  ಇದೆ. ನಾವು ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ. ಈ ವಿಚಾರದಲ್ಲಿ ರಾಜಕಾರಣ ಮಾಡಬೇಡಿ. ಆಹಾರವಾಗಲೀ ಅಥವಾ ಔಷಧಿಯಾಗಲೀ ನ್ಯಾಯಯುತವಾಗಿ ವಿತರಿಸಿ. ರಾಜ್ಯದಲ್ಲಿ ಒಂದೆಡೆ ಹಾಸಿಗೆ ಇಲ್ಲ, ಮತ್ತೊಂದೆಡೆ ತೀವ್ರ ನಿಗಾ ಘಟಕದಲ್ಲಿ ಸ್ಥಳಾವಕಾಶ ಇಲ್ಲ, ಮಗದೊಂದೆಡೆ ಆಮ್ಲಜನಕದ ದಾಸ್ತಾನು ಇಲ್ಲ ಎಂಬ ಭಯಾನಕ ಪರಿಸ್ಥಿತಿ ಉಂಟಾಗಿದೆ ಎಂದರು. 

ಸಾರ್ವಜನಿಕ ಹಿತದೃಷ್ಟಿಯಿಂದ ಬೆಂಗಳೂರು ನಗರದಲ್ಲಿ ಕನಿಷ್ಠ 25,000 ಹಾಸಿಗೆಗಳನ್ನು ವ್ಯವಸ್ಥೆ ಮಾಡಿ. ಮನೆಯಲ್ಲಿ ದಿಗ್ಬಂಧನದಲ್ಲಿರುವ (ಹೋಮ್ ಐಸೋಲೇಷನ್  ) ಜನರು ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಲಾಕ್ ಡೌನ್ ಗಿಂತಲೂ  ದಂಡಪ್ರಕ್ರಿಯಾ ಸಂಹಿತೆ  ಪರಿಚ್ಛೇಧ 144 ಜಾರಿ ಮಾಡಿ ಗುಂಪು ಸೇರುವುದನ್ನು ತಡೆಯುವುದು ಉತ್ತಮ. ಕಲ್ಯಾಣ ಮಂಟಪ, ಸಮುದಾಯ ಭವನ, ಮಾರುಕಟ್ಟೆ ಗಳಲ್ಲಿ ಜನಸಂದಣಿ ನಿಯಂತ್ರಿಸಬೇಕು. ನೈಟ್ ಕರ್ಫ್ಯೂ ಸಮಯ ಬದಲಾವಣೆ ಅಗತ್ಯವಿಲ್ಲ. ಕೊಳಗೇರಿಗಳಲ್ಲಿ ಲಸಿಕಾ ಅಭಿಯಾನಕ್ಕೆ ಒತ್ತು ಕೊಡಿ ಎಂದು ಸಲಹೆ ನೀಡಿದರು.

ಶಾಸಕ ಬಿ ಝಡ್ ಜಮೀರ್ ಅಹಮದ್ ಮಾತನಾಡಿ, ಬಡವರು, ಮಧ್ಯಮ ವರ್ಗಕ್ಕೆ ಲಾಕ್ ಡೌನ್ ಕಷ್ಟ ತಂದೊಡ್ಡುತ್ತದೆ. ಲಾಕ್ ಡೌನ್ ಪರಿಹಾರ ಅಲ್ಲ. ಪ್ರತಿ ಶಾಸಕರಿಗೂ ಕನಿಷ್ಠ 25 ಹಾಸಿಗೆಗಳು ಮೀಸಲಿರಿಸಿ. ಹಾಸಿಗೆಗಳನ್ನು ವಿತರಿಸಲು ಅವಕಾಶ ನೀಡಿ. ಚಾಮರಾಜಪೇಟೆ ಕ್ಷೇತ್ರದ ಜಮಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು 20,000 ಜನರಿಗೆ ಅವಕಾಶ ಇದ್ದರೂ, ಪವಿತ್ರ ರಂಜಾನ್ ಮಾಸದಲ್ಲಿ ಈ ಸಾಮರ್ಥ್ಯದ ಕಾಲು ಭಾಗ ಅಂದರೆ 5,000 ಜನರಿಗೆ ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕೋವಿಡ್-19 ರ ಸೋಂಕಿತರಿಗೆ ಸರ್ಕಾರದ ವತಿಯಿಂದಲೇ ಚಿಕಿತ್ಸೆ ಕೊಡಿಸಿ.ರೆಮಿಡೆಸಿವರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರನ್ನು ಬಂಧಿಸಬೇಕೆಂದು ಸಭೆಯಲ್ಲಿ ಆಗ್ರಹಿಸಿದರು. 

ವಿಧಾನ ಪರಿಷತ್ ಸದಸ್ಯ ಸಿ. ಎಂ. ಇಬ್ರಾಹಿಂ ಮಾತನಾಡಿ, ತಮ್ಮ.ಸ್ವಂತ  ತಂದೆತಾಯಿಯನ್ನು ಹೆತ್ತ ಮಕ್ಕಳೂ ಮುಟ್ಟುತ್ತಿಲ್ಲ. ಶವದ ಮೂಲಕ ಕೋವಿಡ್-19 ರ ಸೋಂಕು ಹರಡುವುದಿಲ್ಲ ಎಂಬ ವಿಷಯವನ್ನು ಜನಸಾಮಾನ್ಯರಿಗೆ ವೈದ್ಯರ ಮೂಲಕ ಮನವರಿಕೆ ಮಾಡಿಕೊಡಬೇಕು.ಕನಿಷ್ಠ ವಾರಕ್ಕೊಮ್ಮೆ ಅಥವಾ ಹತ್ತು ದಿನಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಎಂದು ಸಲಹೆ ನೀಡಿದರು. 

ದಾಸರಹಳ್ಳಿ ಶಾಸಕ ಮಂಜು ಮಾತನಾಡಿ,  ಸಂಚಾರಿ ವೈದ್ಯರ ತಂಡ ರಚಿಸಿ ಹೋಮ್ ಐಸೋಲೇಷನ್ ನಲ್ಲಿ ಇರುವವರಿಗೆ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಮೂಲಕ ಉಚಿತ ಔಷಧಿ ವಿತರಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಬೇಕು. ಸತ್ತವರನ್ನು ಅವರ ಜಮೀನುಗಳಲ್ಲಿ ಅಂತ್ಯ ಸಂಸ್ಕಾರ ಮಾಡಲು ಅವಕಾಶ ಕಲ್ಪಿಸಿ. ಇದರಿಂದ ಸ್ಮಶಾನಗಳಲ್ಲಿ ಅಂತ್ಯ ಸಂಸ್ಕಾರಕ್ಕೆ ಸಾಲುಗಟ್ಟಿ ನಿಲುವುದು ತಪ್ಪುತ್ತದೆ ಎಂದು ಸಲಹೆ ನೀಡಿದರು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com