24/7 ಗಂಟೆಗಳ ಕಾಲ ಜನರ ಸುರಕ್ಷತೆ ಮತ್ತು ಭದ್ರತೆ ಸರ್ಕಾರದ ಜವಾಬ್ದಾರಿ: ಗೃಹ ಸಚಿವ ಆರಗ ಜ್ಞಾನೇಂದ್ರ

ಗೃಹ ಸಚಿವರಾಗಿ ಆರಗ ಜ್ಞಾನೇಂದ್ರ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಪ್ರತಿಪಕ್ಷದವರಿಂದ ತೀವ್ರ ಟೀಕೆಗೆ ಗುರಿಯಾದ ಬಳಿಕ ಪೊಲೀಸರು ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣವನ್ನು ಭೇದಿಸಿದ ನಂತರ ಚುರುಕಾಗಿದ್ದಾರೆ.
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ

ಬೆಂಗಳೂರು: ಗೃಹ ಸಚಿವರಾಗಿ ಆರಗ ಜ್ಞಾನೇಂದ್ರ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಪ್ರತಿಪಕ್ಷದವರಿಂದ ತೀವ್ರ ಟೀಕೆಗೆ ಗುರಿಯಾದ ಬಳಿಕ ಪೊಲೀಸರು ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣವನ್ನು ಭೇದಿಸಿದ ನಂತರ ಚುರುಕಾಗಿದ್ದಾರೆ.

ತಮ್ಮ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು ಕಳೆದ ನಾಲ್ಕು ದಶಕಗಳಿಂದ ತಾನು ಸಾರ್ವಜನಿಕ ಜೀವನದಲ್ಲಿದ್ದು ಹಲವು ಶಾಸನ ಸಮಿತಿಗಳ ಭಾಗವಾಗಿದ್ದೆ. ರಾಜಕೀಯವಾಗಿ ಅನುಭವವಿದೆ ಎಂದಿದ್ದಾರೆ. ಈ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ ಹೀಗಿದೆ:

ಮೈಸೂರು ಗ್ಯಾಂಗ್ ರೇಪ್ ಕೇಸು ರಾಜ್ಯಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ. ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ, ಪೊಲೀಸರ ಕಾರ್ಯವೈಖರಿ ಬಗ್ಗೆ ಏನು ಹೇಳುತ್ತೀರಿ?
-ಪಾರಂಪರಿಕ, ಸಾಂಸ್ಕೃತಿಕ ನಗರಿ ಮೈಸೂರಿಗೆ ದೇಶ ವಿದೇಶಗಳಿಂದ ಸಾಕಷ್ಟು ಜನರು ಬರುತ್ತಾರೆ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಗೃಹ ಇಲಾಖೆ, ಪೊಲೀಸರ ಮೇಲಿದೆ. ಅದೇ ರೀತಿ ಮೈಸೂರು ನಗರದ ಗೌರವ, ಪ್ರತಿಷ್ಠೆಯನ್ನು ಕೂಡ ಎತ್ತಿ ಹಿಡಿಯಬೇಕು. ಗ್ಯಾಂಗ್ ರೇಪ್ ಪ್ರಕರಣವನ್ನು ಅತ್ಯಂತ ಕ್ಷಿಪ್ರವಾಗಿ ಭೇದಿಸಿ ಪೊಲೀಸರು ನಿಜಕ್ಕೂ ಕಾರ್ಯಕ್ಷಮತೆ ಮೆರೆದಿದ್ದಾರೆ. ರಾಜ್ಯದ ಜನತೆಗೆ ದಿನಪೂರ್ತಿ, ವಾರಪೂರ್ತಿ, ವರ್ಷಪೂರ್ತಿ ಹಗಲು-ರಾತ್ರಿ ಸುರಕ್ಷತೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ.

ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ಪೊಲೀಸರು ವೃತ್ತಿಹೀನರಾಗುತ್ತಿದ್ದಾರೆ, ಸಂವೇದನರಹಿತರಾಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ, ಈ ಬಗ್ಗೆ ಏನು ಹೇಳುತ್ತೀರಿ?
-ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ಅತ್ಯುನ್ನತ ವಿದ್ಯಾವಂತರು, ಪಿ ಎಚ್ ಡಿ, ಸ್ನಾತಕೋತ್ತರ ಪದವಿ ಓದಿದವರು ಕೂಡ ಪೊಲೀಸ್ ಇಲಾಖೆಗೆ ಸೇರುತ್ತಿದ್ದಾರೆ. ಮಹಿಳೆಯರಿಗೆ ಕೋಟಾ ಇರುವುದರಿಂದ ಅವರು ಕೂಡ ಸೇರುತ್ತಿದ್ದಾರೆ. ಇಲಾಖೆಯ ಇಮೇಜ್ ಬದಲಾಗುತ್ತಿದೆ.

ಇನ್ನು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆಯನ್ನು ಹೆಚ್ಚು ಪಾರದರ್ಶಕಗೊಳಿಸಲು ಪ್ರಯತ್ನಗಳು ನಡೆಯುತ್ತಿದ್ದು, ಇತ್ತೀಚೆಗೆ ಹೆಚ್ಚು ಪಾರದರ್ಶಕವಾಗುತ್ತಿದೆ. ದೂರುಗಳ ದಾಖಲಾತಿ ಕಂಪ್ಯೂಟರೀಕರಣಗೊಳ್ಳುತ್ತಿದೆ, ಪೊಲೀಸ್ ಠಾಣೆಗೆ ಬರುವ ಜನರು ದೂರು ಸಲ್ಲಿಸಿದ ನಂತರ ರಶೀದಿಗೆ ಕಾಯಬೇಕಾಗಿಲ್ಲ.ವರ್ಗಾವಣೆಗಳನ್ನು ತರ್ಕಬದ್ಧಗೊಳಿಸಲಾಗಿದೆ ಮತ್ತು ಪೊಲೀಸ್ ಸ್ಥಾಪನಾ ಮಂಡಳಿಯು ನಿರ್ವಹಿಸುತ್ತಿದೆ.ಕಾನೂನುಬಾಹಿರ ಸಂಘಟನೆಗಳು ಮತ್ತು ಭೂಗತ ಜಗತ್ತಿನೊಂದಿಗೆ ಸಂಬಂಧ ಹೊಂದಿರುವ ಯಾರನ್ನಾದರೂ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ನಾನು ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದೇನೆ.

ಮೈಸೂರು ಪೊಲೀಸರು ನಾಲ್ಕು ದಿನಗಳಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಭೇದಿಸಿದ ನಂತರ ನೀವು ಉತ್ಸಾಹಭರಿತರಾಗಿರುವಂತೆ ತೋರುತ್ತಿದೆ.
-ಹೌದು. ಸಂತ್ರಸ್ತೆಯ ಹೇಳಿಕೆಯಿಲ್ಲದೆ, ಪೋಲಿಸರು ಲಭ್ಯವಿರುವ ತಾಂತ್ರಿಕ ಮತ್ತು ಇತರ ಪುರಾವೆಗಳನ್ನು ಪಡೆದು ಆರೋಪಿಗಳನ್ನು ಹಿಡಿದಿರುವುದು ಶ್ಲಾಘನೀಯ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಚ್ಚಿನ ಅನುಭವ ಹೊಂದಿರುವವರನ್ನು ಗೃಹ ಸಚಿವರನ್ನಾಗಿ ನೇಮಿಸಬೇಕೆಂದು ಕಾಂಗ್ರೆಸ್ ಹೇಳಿದೆ, ಈ ಬಗ್ಗೆ ಏನು ಹೇಳುತ್ತೀರಿ?
-ನಾನು ಹೊಸಬ ಅಲ್ಲ, ಕಳೆದ ನಾಲ್ಕು ದಶಕಗಳಿಂದ ರಾಜಕೀಯದಲ್ಲಿದ್ದೇನೆ. ಇದು ನಾನು ನಾಲ್ಕನೇ ಬಾರಿ ಶಾಸಕನಾಗಿರುವುದು. ಹಲವು ಶಾಸನ ಸಮಿತಿಗಳಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಪ್ರಮುಖ ಸಾರ್ವಜನಿಕ ಲೆಕ್ಕಪರಿಶೋಧನೆ ಸಮಿತಿಯಲ್ಲಿ ಕೂಡ ಇದ್ದೆ. ಕಾಂಗ್ರೆಸ್ ನಾಯಕರು ಮೈಸೂರಿನಲ್ಲಿ ನಡೆದ ದುರದೃಷ್ಟಕರ ಘಟನೆಯಿಂದ ರಾಜಕೀಯ ಲಾಭ ಪಡೆದುಕೊಳ್ಳಲು ನೋಡುತ್ತಿದ್ದಾರೆ. ಅತ್ಯಾಚಾರ ಘಟನೆ ಬೆಳಕಿಗೆ ಬಂದ ಕೂಡಲೇ ಮೈಸೂರಿಗೆ ಹೋಗಿ ತನಿಖೆ ಪ್ರಗತಿ ಬಗ್ಗೆ ಪೊಲೀಸರೊಂದಿಗೆ ಚರ್ಚಿಸುತ್ತಲೇ ಇದ್ದೆ.

ಪೊಲೀಸ್ ಇಲಾಖೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆ ಬಗ್ಗೆ ಕಾಂಗ್ರೆಸ್ ನಾಯಕರು ಸಲಹೆ ನೀಡುತ್ತಿದ್ದಾರೆ. ಈ ಬಗ್ಗೆ ನೀವು ಏನು ಹೇಳುತ್ತೀರಿ, ಏನಾದರೂ ಯೋಜನೆಗಳಿವೆಯೇ?
-ಪೊಲೀಸರ ಕಾರ್ಯಚರಣೆಯಲ್ಲಿ ಹೆಚ್ಚಿನ ಜನರನ್ನು ಒಳಗೊಳ್ಳಲು ನಾವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಪೊಲೀಸ್ ಸುಧಾರಣಾ ಆಯೋಗ, ರಾಷ್ಟ್ರೀಯ ಕಾನೂನು ಆಯೋಗ ಮತ್ತು ಸುಪ್ರೀಂ ಕೋರ್ಟ್‌ಗಳಿಂದ ಶಿಫಾರಸುಗಳು ಬಂದಿವೆ. ನಾವು ಸಮುದಾಯ ಪೊಲೀಸರನ್ನು ಪ್ರೋತ್ಸಾಹಿಸುತ್ತೇವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com