ಬೆಂಗಳೂರು: ರಸ್ತೆ ಗುಂಡಿ ಖಂಡಿಸಿ ಎಎಪಿಯಿಂದ ಹತ್ತು ದಿನಗಳ ಜನಜಾಗೃತಿ, ಸಹಿ ಸಂಗ್ರಹ ಅಭಿಯಾನ

ರಸ್ತೆ ಗುಂಡಿ ಮುಕ್ತ ಬೆಂಗಳೂರು ನಿರ್ಮಾಣದ ಗುರಿ ಹೊಂದಿರುವ ಆಮ್ ಆದ್ಮಿ ಪಕ್ಷ(ಆಪ್) ಬೆಂಗಳೂರಿನಲ್ಲಿರುವ ರಸ್ತೆ ಗುಂಡಿಗಳ ಬಗ್ಗೆ ಸರ್ಕಾರದ ವಿರುದ್ಧ ಜನಜಾಗೃತಿ ಸಹಿ ಸಂಗ್ರಹಣಾ ಚಳುವಳಿ ಹಮ್ಮಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಸ್ತೆ ಗುಂಡಿ ಮುಕ್ತ ಬೆಂಗಳೂರು ನಿರ್ಮಾಣದ ಗುರಿ ಹೊಂದಿರುವ ಆಮ್ ಆದ್ಮಿ ಪಕ್ಷ(ಆಪ್) ಬೆಂಗಳೂರಿನಲ್ಲಿರುವ ರಸ್ತೆ ಗುಂಡಿಗಳ ಬಗ್ಗೆ ಸರ್ಕಾರದ ವಿರುದ್ಧ ಜನಜಾಗೃತಿ ಸಹಿ ಸಂಗ್ರಹಣಾ ಚಳುವಳಿ ಹಮ್ಮಿಕೊಂಡಿದೆ.
 
ಈ ಸಂಬಂಧ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಬೆಂಗಳೂರು ನಗರ ಆಪ್ ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಮಾಹಿತಿ ನೀಡಿ, ನಾಳೆ ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣದ ಹತ್ತಿರವಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.

ತೆರೆದ  ವಾಹನ  ಮೂಲಕ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ಭ್ರಷ್ಟಾಚಾರವನ್ನು ಬೆಂಗಳೂರಿನ ಮೂಲೆಮೂಲೆಗೆ ತಲುಪಿಸುತ್ತೇವೆ. ಹತ್ತು ದಿನಗಳಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಜನಜಾಗೃತಿ ಮಾಡಿ, ಲಕ್ಷಾಂತರ ಬೆಂಗಳೂರಿಗರ ಸಹಿ ಸಂಗ್ರಹ ಮಾಡಿ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದರು.

ವಾಹನಗಳ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ರಸ್ತೆಯ ಗುಣಮಟ್ಟವನ್ನು ನಿರ್ಧರಿಸಬೇಕು. ಆದರೆ ಇಲಾಖೆಗಳು ಈ ನಿಯಮವನ್ನು ಅನುಸರಿಸುತ್ತಿಲ್ಲ. ರಸ್ತೆಯ ಎಲ್ಲ ಪದರಗಳಿಗೂ ಗುಣಮಟ್ಟದ ಸಾಮಗ್ರಿ ಬಳಸಿ ನಿರ್ಮಿಸಬೇಕು. ಆದರೆ ಗುಣಮಟ್ಟದ ಸಾಮಗ್ರಿಗೆ ಖರ್ಚಾಗಬೇಕಾದ ಹಣವನ್ನು ಗುತ್ತಿಗೆದಾರರು ಲಪಟಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅದರಲ್ಲಿ ಎಂಜಿನಿಯರ್‌ಗಳು, ಕಾರ್ಪೊರೇಟರ್‌ ಹಾಗೂ ಶಾಸಕರಿಗೆ ಪಾಲು ಸಿಗುತ್ತಿದೆ. ತಮಿಳುನಾಡು ಹಾಗೂ ಆಂಧ್ರದ ರಸ್ತೆಗಳು ಕರ್ನಾಟಕದ ರಸ್ತೆಗಳಿಗಿಂತಲೂ ಚೆನ್ನಾಗಿರಲು ಕಾರಣವೇನೆಂದು ನಾವು ಯೋಚಿಸಬೇಕು. ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ಎಂದೂ ಅಲ್ಲಿ ಆಡಳಿತ ಮಾಡಿಲ್ಲದಿರುವುದೇ ಇದಕ್ಕೆ ಕಾರಣ” ಎಂದು ಆರೋಪಿಸಿದರು.

ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಉಪಾಧ್ಯಕ್ಷ ಸುರೇಶ್‌ ರಾಥೋಡ್‌ ಮಾತನಾಡಿ, “ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ 20,000 ಕೋಟಿ ರೂಪಾಯಿ ಎಲ್ಲಿ ಮತ್ತು ಹೇಗೆ ಖರ್ಚಾಗಿದೆ ಎಂಬ ವಿವರವನ್ನು ಸರ್ಕಾರ ಬಹಿರಂಗಪಡಿಸಬೇಕು. ಆ ಹಣವನ್ನು ನುಂಗಿದವರಿಗೆ ಜೈಲು ಶಿಕ್ಷೆ ಆಗಬೇಕು.

ರಸ್ತೆಯನ್ನು ಸರಿಪಡಿಸಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂಬುದು ನಮ್ಮ ಮೂರು ಬೇಡಿಕೆಗಳಾಗಿವೆ. ರಸ್ತೆ ಗುಂಡಿಗಳಿಗೆ ಸಂಬಂಧಿಸಿ ನಾವು ಈ ಹಿಂದೆ ಮಾಡಿದ್ದ ಪ್ರತಿಭಟನೆಗಳು, ರಸ್ತೆಗುಂಡಿ ಹಬ್ಬ ಎಂಬ ವಿನೂತನ ಅಭಿಯಾನ, ಸೋಶಿಯಲ್‌ ಮೀಡಿಯಾ ಚಳವಳಿಗೆ ಉತ್ತಮ ಜನಬೆಂಬಲ ವ್ಯಕ್ತವಾಗಿದೆ. ಗುಂಡಿಗಳಿಗೆ ಕಾರಣರಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ 70ಕ್ಕೂ ಹೆಚ್ಚು ದೂರುಗಳನ್ನು ಪೊಲೀಸ್‌ ಠಾಣೆಯಲ್ಲಿ ದಾಖಲಿಸಿದ್ದೇವೆ, ಈ ಚಳವಳಿಗೆ ಕೂಡ ಹೆಚ್ಚಿನ ಬೆಂಬಲ ಸಿಗುವ ವಿಶ್ವಾಸವಿರುವುದಾಗಿ ನಾಗಣ್ಣ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com