ಬೆಂಗಳೂರು: ರಿಹ್ಯಾಬಿಲೇಷನ್ ಸೆಂಟರ್ ನಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಮೃತ ಯುವಕನನ್ನು 24 ವರ್ಷದ ಸುಭಾಷ್ ಪಾಂಡಿ ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಡಿ ಜೆ ಹಳ್ಳಿ ನಿವಾಸಿಯಾಗಿದ್ದ ಸುಭಾಷ್ ಪಾಂಡಿ ಕೆಲ ವರ್ಷಗಳಿಂದ ಕುಡಿತದ ಚಟಕ್ಕೆ ಬಿದ್ದಿದ್ದ. ಈ ಹಿನ್ನೆಲೆಯಲ್ಲಿ ಆತನ ಪೋಷಕರು ಕುಡಿತ ಬಿಡಿಸೋಕೆ ಅಂತ ಮಂಗನಪಾಳ್ಯದ ರಿಹ್ಯಾಬಿಲೇಷನ್ ಸೆಂಟರ್ ಗೆ ಸೇರಿಸಿದ್ದರು. ಆದರೆ, ನವೆಂಬರ್ 27 ರಂದು ನೇಣು ಬಿಗಿದ ಸ್ಥಿತಿಯಲ್ಲಿ ಸಭಾಷ್ ನ ದೇಹ ಪತ್ತೆಯಾಗಿದೆ.
ತಕ್ಷಣ ರಿಹ್ಯಾಬಿಲೇಷನ್ ಸೆಂಟರ್ ನ ಸಿಬ್ಬಂದಿ ಪೋಷಕರಿಗೆ ಕರೆ ಮಾಡಿ, ನಿಮ್ಮ ಮಗನಿಗೆ ಏನೋ ಆಗಿದೆ ಅಂತ ತಿಳಿಸಿದ್ದಾರೆ. ಸ್ಥಳಕ್ಕೆ ಹೋದಾಗ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಸುಭಾಷ್ ಮೃತ ದೇಹ ಪತ್ತೆಯಾಗಿದೆ. ಸದ್ಯ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸ್ತಿರೋ ಪೋಷಕರು, ರಿಹ್ಯಾಬಿಲೇಷನ್ ಸೆಂಟರ್ ನಲ್ಲಿ ಸೂಕ್ತ ಚಿಕಿತ್ಸೆ ಸಿಕ್ಕಿಲ್ಲ ಹಾಗೂ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಈ ಬಗ್ಗೆ ಬಂಡೆಪಾಳ್ಯ ಠಾಣೆಗೆ ದೂರು ನೀಡಿರುವ ಪೋಷಕರು, ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.
Advertisement