ಹಾಸನ: ಸಕಲೇಶಪುರದ ಕಾಫಿ ಎಸ್ಟೇಟ್ ವೊಂದರಲ್ಲಿ ಪಶ್ಚಿಮ ಬಂಗಾಳದಿಂದ ಬಂದಿದ್ದ 23 ವಲಸೆ ಕಾರ್ಮಿಕರಲ್ಲಿ ಬುಧವಾರ ಕೋವಿಡ್-19 ಸೋಂಕು ದೃಢಪಟ್ಟಿದೆ.
ಸುದ್ದಿ ತಿಳಿಯುತ್ತಿದ್ದಂತೆ ಕಾಫಿ ಎಸ್ಟೇಟ್ ಗೆ ತೆರಳಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ನೇತೃತ್ವದಲ್ಲಿನ ಆರೋಗ್ಯ ಸಿಬ್ಬಂದಿ, ಜಿಲ್ಲಾಧಿಕಾರಿ ಆರ್ . ಗಿರೀಶ್ ಅವರ ನಿರ್ದೇಶನದ ಮೇರೆಗೆ ಸೋಂಕಿತರನ್ನು ಸಕಲೇಶಪುರದ ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.
ಇತ್ತೀಚಿಗೆ ಪಶ್ಚಿಮ ಬಂಗಾಳದಿಂದ ವಾಪಸ್ಸಾಗಿದ್ದ ಇಬ್ಬರು ಕಾರ್ಮಿಕರಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿತ್ತು. ಅವರಿಗೆ ಪಾಸಿಟಿವ್ ಕಂಡುಬಂದ ನಂತರ ಉಳಿದ ಕಾರ್ಮಿಕರು ಹಾಗೂ ಅವರ ಕುಟುಂಬ ಸದಸ್ಯರಿಗೆ ಮಂಗಳವಾರ ಪರೀಕ್ಷಿಸಲಾಗಿತ್ತು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಸಕಲೇಶಪುರ ತಾಲೂಕಿನಾದ್ಯಂತ ಇರುವ ಬೇರೆ ಬೇರೆ ಕಾಫಿ ಎಸ್ಟೇಟ್ ಗಳಿಗೆ ಭೇಟಿ ನೀಡಿ, ವಲಸೆ ಕಾರ್ಮಿಕರಿಗೆ ಸೋಂಕು ಪರೀಕ್ಷೆ ನಡೆಸುವಂತೆ ಆರೋಗ್ಯ ಸಿಬ್ಬಂದಿಗೆ ಸೂಚಿಸಲಾಗಿದೆ.
Advertisement