ಕಾಸರಗೋಡು: ಮೀನುಗಾರಿಕಾ ದೋಣಿಯೊಂದು ಮಗುಚಿಬಿದ್ದ ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾದ ಘಟನೆ ಕಾಸರಗೋಡು ಸಮುದ್ರದಲ್ಲಿ ಭಾನುವಾರ ಮುಂಜಾನೆ ನಡೆದಿರುವುದು ವರದಿಯಾಗಿದೆ.
ದೋಣಿಯಲ್ಲಿ 7 ಮಂದಿ ಮೀನುಗಾರರು ಇದ್ದರೆನ್ನಲಾಗಿದ್ದು. ನಾಲ್ವರು ಈಜಿ ದಡ ಸೇರಿದ್ದಾರೆ. ಸದ್ಯ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.
ಕಸಬಾ ಕಡಪ್ಪುರದ ಸಂದೀಪ್(33), ರತೀಶ್(30) ಮತ್ತು ಕಾರ್ತಿಕ್ (29) ಎಂಬುವವರು ನಾಪತ್ತೆಯಾಗಿದ್ದಾರೆಂದು ವರದಿಗಳು ತಿಳಿಸಿವೆ.
ಘಟನೆಯಲ್ಲಿ ರವಿ(40) , ಶಿಬಿನ್(30) ಹಾಗೂ ಮಣಿಕುಟ್ಟನ್(35) ಎಂಬವರು ಈಜಿ ದಡ ಸೇರಿದ್ದಾರೆ. ಅಸ್ವಸ್ಥಗೊಂಡಿರುವ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಮುದ್ರದ ದೈತ್ಯ ಅಲೆಗಳ ರಭಸಕ್ಕೆ ಫೈಬರ್ ದೋಣಿ ಮಗುಚಿ ಬಿದ್ದು ಈ ಅನಾಹುತ ಸಂಭವಿಸಿದೆ. ಸಮುದ್ರಕ್ಕೆ ಬಿದ್ದು ನಾಪತ್ತೆಯಾದವರಿಗಾಗಿ ಕರಾವಳಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ, ಮೀನುಗಾರರು ಶೋಧ ನಡೆಸುತ್ತಿದ್ದಾರೆ.
Advertisement