ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಕೇಂದ್ರ ಸಚಿವ ಭಗವಂತ್ ಖೂಬಾ

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯವಾಗಿದೆ ಎಂದು ನೂತನ ಕೇಂದ್ರ ಸಚಿವ ಹಾಗೂ ಬೀದರ್ ಸಂಸದ ಭಗವಂತ್ ಖೂಬಾ ಅವರು ಹೇಳಿದ್ದಾರೆ.
ಬೀದರ್ ಸಂಸದ ಭಗವಂತ್ ಖೂಬಾ
ಬೀದರ್ ಸಂಸದ ಭಗವಂತ್ ಖೂಬಾ

ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯವಾಗಿದೆ ಎಂದು ನೂತನ ಕೇಂದ್ರ ಸಚಿವ ಹಾಗೂ ಬೀದರ್ ಸಂಸದ ಭಗವಂತ್ ಖೂಬಾ ಅವರು ಹೇಳಿದ್ದಾರೆ.

ಬೀದರ್ ಸಂಸದ ಭಗವಾನ್ ಖೂಬಾ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ದೊರೆತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಸೇವೆ ಸಲ್ಲಿಸಲು ಬಹಳ ಉತ್ಸುಕರಾಗಿದ್ದಾರೆ. ಭಗವಾನ್ ಖೂಬಾ ಅವರಿಗೆ ಕೇಂದ್ರದಲ್ಲಿ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ರಾಜ್ಯ ಸಚಿವ ಸ್ಥಾನ ನೀಡಲಾಗಿದ್ದು, ಜನರ ನಿರೀಕ್ಷೆಗಳನ್ನು ಪೂರೈಸಲು, ಕೇಂದ್ರ ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು, ಕೇಂದ್ರ ಸಚಿವರಾಗಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ. 

ಕೇಂದ್ರದ ನೂತನ ಸಚಿವರಾಗಿರುವ ಭಗವಂತ್ ಖೂಬಾ ಅವರು, ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದು, ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ, ಅಭಿವೃದ್ಧಿ ಕಾರ್ಯ ಹಾಗೂ ಮುಂದಿನ ಯೋಜನೆಗಳು, ಎದುರಾಗುವ ಸವಾಲುಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. 

ಹಲವಾರು ಆಕಾಂಕ್ಷಿಗಳ ನಡುವೆ ಪ್ರಧಾನಿ ಮೋದಿಯವರು ನಿಮ್ಮನ್ನೇ ಮಂತ್ರಿಯಾಗಿ ಯಾವ ಕಾರಣಕ್ಕೆ ಆಯ್ಕೆ ಮಾಡಿದರು ಎಂದು ನೀವು ಭಾವಿಸುತ್ತೀರಿ? 
ಬೀದರ್ ಸಂಸದನಾಗಿ ಕಳೆದ ಏಳು ವರ್ಷಗಳಿಂದ ನಾನು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಕೇಂದ್ರದ ಸಾಕಷ್ಟು ಜನ ಸ್ನೇಹಿ ಯೋಜನೆಗಳು ಮತ್ತು ಕಾರ್ಯಕ್ರಮಗಳು, ವಿಶೇಷವಾಗಿ ಫಸಲ್ ಭೀಮಾ, ಉಜ್ವಲ್, ಆಯುಷ್ಮಾನ್ ಭಾರತ್ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದೇನೆ. ಕ್ಷೇತ್ರದಲ್ಲಿ ಬಿಜೆಪಿ ಬಲ ಹೆಚ್ಚಿಸಲು ಶ್ರಮಿಸಿದ್ದೇನೆ. ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಯಾವುದೇ ಬೆಳವಣಿಗೆಗಳಿಗೂ ಅವಕಾಶ ಮಾಡಿಕೊಟ್ಟಿರಲಿಲ್ಲ. ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ನನ್ನ ವಯಸ್ಸು.

ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳುತ್ತೇನೆಂದು ನಿರೀಕ್ಷೆ ಇಟ್ಟುಕೊಂಡಿದ್ದಿರಾ? 
ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಳ್ಳುತ್ತೇನೆಂಬ ನಿರೀಕ್ಷೆ ಇರಲಿಲ್ಲ. ಆದರೆ, ಪಕ್ಷದ ನಾಯಕ ಮತ್ತು ಸಂಸದನಾಗಿ ನಾನು ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ ರೀತಿಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಕೇಂದ್ರ ಸಚಿವನಾಗುವ ಭರವಸೆಗಳಿತ್ತು. ದೇಶದಾದ್ಯಂತ ಮೋದಿ ಸರ್ಕಾರದ ಒಂದು ನೆಟ್'ವರ್ಕ್ ಇದ್ದು, ಇದು ಪಕ್ಷದ ನಾಯಕರ ಕಾರ್ಯಕ್ಷಮತೆಯನ್ನು ಮೋದಿಯವರ ಗಮನಕ್ಕೆ ತರುತ್ತಿದೆ. ಸಮಾಜಕ್ಕಾಗಿ ನಾವು ಮಾಡುತ್ತಿರುವ ಕೆಲಸಗಳನ್ನು ಈ ನೆಟ್ ವರ್ಕ್ ಗಮನಿಸುತ್ತಿದೆ. ಕೇಂದ್ರ ಸಚಿವ ಸ್ಥಾನಕ್ಕಾಗಿ ಅಥವಾ ಇತರೆ ಯಾವುದೇ ಸ್ಥಾನಕ್ಕಾಗಿ ಲಾಬಿ ಮಾಡುವುದು ಬಿಜೆಪಿಯಲ್ಲಿ ಎಂದಿಗೂ ಕೆಲಸ ಮಾಡುವುದಿಲ್ಲ ಎಂಬುದು ಇದೀಗ ಸ್ಪಷ್ಟವಾಗಿದೆ. ಪಕ್ಷದಲ್ಲಿ ಪ್ರತೀಯೊಂದಕ್ಕೂ ಒಂದೊಂದು ಅರ್ಹತೆ ನೀಡಲಾಗಿದೆ. 

ಹಲವು ದಶಕಗಳಿಂದ ಅಭಿವೃದ್ಧಿಯಿಂದ ವಂಚಿತರಾಗಿರುವ ಕಲ್ಯಾಣ ಕರ್ನಾಟಕ ಭಾಗಕ್ಕೆ ನಿಮ್ಮ ಯೋಜನೆಗಳೇನು?
ನನಗೆ ತಿಳಿದಿರುವ ಪ್ರಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾವುದೇ ಪ್ರಮುಖ ಯೋಜನೆಗಳಾಗಲೀ ಅಥವಾ ಬಾಕಿಯಿರುವ ಯಾವುದೇ ಯೋಜನೆಗಳಾಗಲೀ ಇಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಪೂರ್ಣ ಅಭಿವೃದ್ಧಿ ತರುವ ಸಾಮರ್ಥ್ಯ ರಾಜ್ಯ ಸರ್ಕಾರಕ್ಕಿದೆ. ಈ ಭಾಗದಲ್ಲಿ ಕಾಂಗ್ರೆಸ್ ಕಳೆದ 70 ವರ್ಷಗಳಿಂದ ಕೇವಲ ನಕಲಿ ಭರವಸೆಗಳನ್ನು ನೀಡಿರುವುದು ಬಿಟ್ಟರೆ ಬೇರನನ್ನೂ ಮಾಡದಿರುವುದು ದುರಾದೃಷ್ಟಕರ ಸಂಗತಿ. ಸಚಿವ ಸ್ಥಾನವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದು, ದೇಶದ ಎಲ್ಲಾ ಪ್ರದೇಶಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ.

ಕೇಂದ್ರದ ಪ್ರಮುಖ ಯೋಜನೆಗಳ ಅನುಷ್ಟಾನಕ್ಕೆ ತರುವಲ್ಲಿ ಕರ್ನಾಟಕದ ಕುರಿತು ಯಾವುದಾದರೂ ಯೋಜನೆಗಳಿವೆಯೇ? 
ಎರಡು ಖಾತೆಗಳ ಜವಾಬ್ದಾರಿಯನ್ನು ಪ್ರಧಾನಿ ಮೋದಿಯವರು ನೀಡಿದ್ದಾರೆ. ದೇಶದ ಎಲ್ಲಾ ಭಾಗಗಳಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುವತ್ತ ನಾನು ಗಮನ ಹರಿಸಬೇಕಾಗಿದೆ. ಕೇಂದ್ರವು ಎಲ್ಲಾ ರಾಜ್ಯಗಳೊಂದಿಗೆ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಎಲ್ಲಾ ರಾಜ್ಯಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಕರ್ನಾಟಕ ರಾಜ್ಯಕ್ಕೂ ಅರ್ಹವಾದದ್ದನ್ನು ಕೇಂದ್ರ ಸರ್ಕಾರ ನೀಡಲಿದೆ.

ಬಿಜೆಪಿಯಲ್ಲಿ ತಮ್ಮ ಹಕ್ಕು ಸಾಧಿಸಲು ಲಿಂಗಾಯತ ಸಮುದಾಯದ ಕೆಲ ನಾಯಕರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಲು ಯತ್ನಿಸುತ್ತಿದ್ದಾರೆಂದು ನೀವು ಭಾವಿಸುವಿರಾ?
ರಾಜಕೀಯಕ್ಕಿಂತ ಹೆಚ್ಚಾಗಿ ನನ್ನ ಇಲಾಖೆಗಳಿಗೆ ಹಂಚಿಕೆಯಾದ ಅನುದಾನವನ್ನು ಬಳಕೆ ಮಾಡುವುದರತ್ತ ನಾನು ಹೆಚ್ಚಿನ ಗಮನ ಹರಿಸುತ್ತೇನೆ. ನನ್ನ ಮೇಲೆ ಸಾಕಷ್ಟು ಜವಾಬ್ದಾರಿಯಿದೆ. ಮೊದಲು ನಾನು ನನ್ನ ಕರ್ತವ್ಯವನ್ನು ಪೂರ್ಣಗೊಳಿಸಬೇಕು ಎಂದು ಹೇಳಿದ್ದಾರೆ. 

ಇದೇ ವೇಳೆ ಕೊಟ್ಟ ಕುದುರೆಯನ್ನು ಏರದೆ ಮತ್ತೊಂದು ಕುದುರೆ ಬಯಸುವವ ವೀರನು ಅಲ್ಲ ಧೀರನು ಅಲ್ಲ ಎಂಬ ಅಲ್ಮಮ ಪ್ರಭು ಅವರ ವಚನವನ್ನು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com