ಹುಬ್ಬಳ್ಳಿ: 10 ವರ್ಷದ ಬಾಲಕ ಮೊಬೈಲ್ ನಲ್ಲಿ ಆಟವಾಡುತ್ತಿದ್ದಾಗ ಅದರ ಬ್ಯಾಟರಿ ಸ್ಫೋಟಗೊಂಡು ಪರಿಣಾಮ ಬಾಲಕನ ಕೈನ 4 ಬೆರಳುಗಳು ಕಟ್ ಆಗಿವೆ.
ಹುಬ್ಬಳ್ಳಿಯ ಸವಣೂರು ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ ಕಾರ್ತಿಕ ರಮೇಶ ಕಲಾದಗಿ (10 ವರ್ಷ) ಗಾಯಗೊಂಡ ಬಾಲಕನಾಗಿದ್ದು, ಮೊಬೈಲ್ ಬ್ಯಾಟರಿ ಸ್ಫೋಟದ ರಭಸಕ್ಕೆ ಬಾಲಕನ ಬಲಗೈನ 4 ಬೆರಳುಗಳು ತುಂಡಾಗಿವೆ ಅಲ್ಲದೆ ಮುಖಕ್ಕೆ ಬಲವಾದ ಪೆಟ್ಟು ಬಿದ್ದು, ಬ್ಯಾಟರಿಯಲ್ಲಿನ ರಾಸಾಯಿನಿಕ ದ್ರವ ಸಿಡಿದು ಎರಡೂ ಕಣ್ಣುಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಅನುಪಯುಕ್ತ ಮೊಬೈಲ್ ಎಂದು ಬಾಲಕನಿಗೆ ನೀಡಿದ್ದ ಪೋಷಕರು
ಇನ್ನು ಕುಟುಂಬಸ್ಥರು ನೀಡಿರುವ ಮಾಹಿತಿಯಂತೆ ಅನುಪಯುಕ್ತ ಮೊಬೈಲ್ ಎಂದು ಮನೆಯವರು ಬಾಲಕನಿಗೆ ನೀಡಿದ್ದು, ಆಟವಾಡುವ ವೇಳೆ ಅದನ್ನು ಚಾರ್ಜ್ಗೆ ಹಾಕಲು ಹೋದಾಗ ಮೊಬೈಲ್ ದಿಢೀರ್ ಸ್ಫೋಟಗೊಂಡಿದೆ. ತೀವ್ರವಾಗಿ ಗಾಯಗೊಂಡ ಬಾಲಕನನ್ನು ಕುಟುಂಬಸ್ಥರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದಿದ್ದಾರೆ. ಬ್ಯಾಟರಿಯ ವಿಷಕಾರಕ ವಸ್ತು ಮಗುವಿನ ದೇಹಕ್ಕೆ ಹೋಗದಂತೆ ತಡೆಯಲು ಹಾಗೂ ತುಂಡರಿಸಿದ ಕೈಬೆರಳುಗಳ ಶಸ್ತ್ರಚಿಕಿತ್ಸೆಯನ್ನು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಂಕರಗೌಡ ಹಿರೇಗೌಡ್ರ, ಡಾ.ನವೀನ, ಡಾ.ಆಜಿಖಾನ್ ತಂಡ ಕೈಗೊಂಡಿತು.
ಬಲಗಣ್ಣಿಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪ್ರಸ್ತುತ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆಯಾದರೂ ಗಂಭೀರ ಪೆಟ್ಟುಗಾಳಾಗಿವೆ. ಮೊಬೈಲ್ ರಾಸಾಯನಿಕ ಬಲಗಣ್ಣಿಗೆ ಬಿದ್ದಿರುವ ಕಾರಣ ಅದು ಕಾರ್ಯ ನಿರ್ವಹಿಸದೇ ಇರಬಹುದು ಎಂದು ಹೇಳಲಾಗಿದೆ. ಸ್ಫೋಟದಿಂದಾಗಿ ಬಲ ಅಂಗೈಗೆ ತೀವ್ರ ಹಾನಿಯಾಗಿದ್ದು 4 ಬೆರಳುಗಳನ್ನು ತೆಗೆದುಹಾಕಬೇಕಾಯಿತು ಎಂದು ವೈದ್ಯರ ತಂಡ ಹೇಳಿದೆ.
ಸವಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement