2ಎ ಮೀಸಲಾತಿ: ಸೆ.15ರೊಳಗೆ ಬೇಡಿಕೆ ಈಡೇರದಿದ್ದರೆ ಮರಳಿ ಪ್ರತಿಭಟನೆ; ಲಿಂಗಾಯತ ಪಂಚಮಸಾಲಿ ಮಹಾಸಭಾ

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡಲು ಯಡಿಯೂರಪ್ಪ ಅವರು ಆರು ತಿಂಗಳ ಸಮಯ ಕೇಳಿದ್ದರು. ಇದರಂತೆ ನೀಡಲಾಗಿದ್ದ ಸಮಯ ಸೆ.15ಕ್ಕೆ ಮುಗಿಯಲಿದೆ. ಅಷ್ಟರೊಳಗೆ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಮರಳಿ ಪ್ರತಿಭಟನೆ ಆರಂಭಿಸುವುದಾಗಿ...
ಪಂಚಮಸಾಲಿ ಸಮುದಾಯದ ಸದಸ್ಯರು
ಪಂಚಮಸಾಲಿ ಸಮುದಾಯದ ಸದಸ್ಯರು

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡಲು ಯಡಿಯೂರಪ್ಪ ಅವರು ಆರು ತಿಂಗಳ ಸಮಯ ಕೇಳಿದ್ದರು. ಇದರಂತೆ ನೀಡಲಾಗಿದ್ದ ಸಮಯ ಸೆ.15ಕ್ಕೆ ಮುಗಿಯಲಿದೆ. ಅಷ್ಟರೊಳಗೆ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಮರಳಿ ಪ್ರತಿಭಟನೆ ಆರಂಭಿಸುವುದಾಗಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್‌ ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಹೇಳಿದೆ. 

ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಮಾತನಾಡಿ, ಮಾರ್ಚ್ 15 ರಂದು ಮಾತನಾಡಿದ್ದ ಯಡಿಯೂರಪ್ಪ ಅವರು ಸಮುದಾಯದ ಆಗ್ರಹವನ್ನು ಈಡೇರಿಸುವ ಭರವಸೆ ನೀಡಿ ಕಾಲಾವಕಾಶ ಕೇಳಿದ್ದರು, ಈ ಗಡುವು ಸೆ.15ಕ್ಕೆ ಮುಗಿಯಲಿದೆ. ಒಂದು ವೇಳೆ ಸರ್ಕಾರ ನಮ್ಮ ಆಗ್ರಹವನ್ನು ಈಡೇರಿಸದೇ ಹೋದಲ್ಲಿ ಅ.1ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಆರಂಭಿಸುತ್ತೇವೆಂದು ಎಚ್ಚರಿಸಿದ್ದಾರೆ. 

ಈ ಪ್ರತಿಭಟನಾ ರ್ಯಾಲಿಯನ್ನು ಆಗಸ್ಟ್ 15 ಮತ್ತು ಸೆಪ್ಟೆಂಬರ್ 30 ರ ನಡುವೆ ಬಸವಕಲ್ಯಾಣ, ಮಲೆ ಮಹದೇಶ್ವರ ಬೆಟ್ಟದವರೆಗೂ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿರುವ ಸಮುದಾಯ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ನಾಯಕತ್ವ ಬದಲಾವಣೆ ವಿಚಾರ ಕುರಿತು ಮಾತನಾಡಿದ ಅವರು, ಇದು ಪಕ್ಷದ ನಾಯಕರಿಗೆ ಬಿಟ್ಟ ವಿಚಾರ. ಆದರೆ, ಪಕ್ಷವು ನಿಜವಾಗಿಯೂ ಮುಖ್ಯಮಂತ್ರಿಯನ್ನು ಬದಲಿಸುವುದೇ ಆದರೆ, ಸಮುದಾಯದ ನಾಯಕರನ್ನೇ ಮುಂದಿನ ಮುಖ್ಯಮಂತ್ರಿಗಳನ್ನಾಗಿಸಬೇಕು. ಕೇಂದ್ರದ ಬಿಜೆಪಿ ನಾಯಕರು ಈ ಬಗ್ಗೆ ನಮ್ಮ ಅಭಿಪ್ರಾಯ ಕೇಳಲು ಬಯಸಿದ್ದೇ ಆದರೆ, ದೆಹಲಿಗೆ ತೆರಳಿ, ಕೇಂದ್ರದ ನಾಯಕರನ್ನು ಭೇಟಿ ಮಾಡುತ್ತೇನೆಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com