ಬೆಂಗಳೂರು: ಬೆಳಗಾವಿ, ಉತ್ತರ ಕನ್ನಡ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಮನೆಗಳು, ಆಸ್ತಿಪಾಸ್ತಿಗಳು ಅಪಾರ ನಷ್ಟವುಂಟಾಗಿದೆ. ಇದುವರೆಗೆ ಅತಿವೃಷ್ಟಿಯಿಂದ ಆಗಿರುವ ಹಾನಿ ಬಗ್ಗೆ ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಮುಂದೆ ಅಂಕಿಅಂಶ ನೀಡಿದ ಅವರು, ಅತಿವೃಷ್ಟಿಯಿಂದ ಹಲವು ಜಿಲ್ಲೆಗಳಲ್ಲಿ ಸುಮಾರು 134 ಮನೆಗಳು ಸಂಪೂರ್ಣ ಹಾನಿಯಾಗಿವೆ. 2,480 ಮನೆಗಳು ಭಾಗಶಃ ಹಾನಿಗೀಡಾಗಿವೆ. ಒಟ್ಟು 58 ಸಾವಿರದ 961 ಹೆಕ್ಟೇರ್ ಜಮೀನು ಅಂದರೆ ಕೃಷಿ ಬೆಳೆ, ಸಾವಿರದ 962 ಹೆಕ್ಟೇರ್ ಪ್ರದೇಶಗಳ ತೋಟಗಾರಿಕೆ ಬೆಳೆ ನಾಶವಾಗಿದೆ ಎಂದು ಮಾಹಿತಿ ನೀಡಿದರು.
ನಿನ್ನೆ ನಾನು ಹಾಸನ, ಸಕಲೇಶಪುರ ಸುತ್ತಮುತ್ತ ಭೇಟಿ ನೀಡಿದ್ದು ಶಿರಾಡಿ ಘಾಟ್ ಬಳಿ ಹೋದಾಗ ಅಲ್ಲಿನ ಕಾಫಿ, ಏಲಕ್ಕಿ ತೋಟ ನಾಶ ಆಗಿರುವುದನ್ನು ಕಂಡು ಕೂಡಲೇ ಅಧಿಕಾರಿಗಳಿಗೆ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕಾದವರಿಗೆ ಅಂದಾಜು ಮಾಡುವಂತೆ ಸೂಚಿಸಿದ್ದೇನೆ ಎಂದರು.
ಶೀಘ್ರದಲ್ಲಿಯೇ ಪರಿಹಾರ:ಜನರ ಆಸ್ತಿಪಾಸ್ತಿ, ಬೆಳೆ ಹಾನಿ ಬಗ್ಗೆ ಅಧಿಕಾರಿಗಳಿಗೆ ಕೂಡಲೇ ವರದಿ ಸಲ್ಲಿಸುವಂತೆ ಸೂಚಿಸಲಾಗಿದ್ದು ವರದಿ ಸಿಕ್ಕಿದ ಕೂಡಲೇ ಪರಿಹಾರ ನೀಡಲು ಸರ್ಕಾರ ಕ್ಷಿಪ್ರಗತಿಯಲ್ಲಿ ಕೆಲಸ ಮಾಡುತ್ತದೆ ಎಂದರು.
ಅಪಾರ ಮಳೆಗೆ ಒಟ್ಟು 555 ಕಿಲೋ ಮೀಟರ್ ರಸ್ತೆಗಳು. 123 ಸೇತುವೆಗಳು, 123 ಶಾಲೆಗಳು, 33 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 3 ಸಾವಿರದ 502 ವಿದ್ಯುತ್ ಕಂಬಗಳು, 3 ಸಾವಿರದ 042 ಟ್ರಾನ್ಸ್ ಫಾರ್ಮರ್ ಗಳು ಹಾನಿಗೀಡಾಗಿವೆ ಎಂದು ಪ್ರಾಥಮಿಕ ವರದಿಯಿಂದ ಗೊತ್ತಾಗಿದೆ. ಹಾನಿಗೀಡಾದ ಸ್ಥಳಗಳಲ್ಲಿ ವಿದ್ಯುತ್ ವ್ಯವಸ್ಥೆಯನ್ನು ತಕ್ಷಣವೇ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಜನರ ರಕ್ಷಣೆಗೆ ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ಪ್ರವಾಹಕ್ಕೆ ಸಿಲುಕಿದ್ದ 151 ಜನರನ್ನು ರಕ್ಷಿಸಲಾಗಿದೆ, ರಾಜ್ಯದಲ್ಲಿ 31 ಸಾವಿರದ 360 ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ರಾಜ್ಯದಲ್ಲಿ ಒಟ್ಟು 273 ಪರಿಹಾರ ಶಿಬಿರ ತೆರೆಯಲಾಗಿದೆ. 24 ಸಾವಿರದ 417 ಮಂದಿಗೆ ಆಶ್ರಯ ಒದಗಿಸಲಾಗಿದೆ. 45 ತಾಲೂಕುಗಳ 383 ಗ್ರಾಮಗಳ ಜನರಿಗೆ ಸಂಕಷ್ಟ ಎದುರಾಗಿದೆ ಎಂದು ಹೇಳಿದರು.
Advertisement